ಕರ್ನಾಟಕ

karnataka

ETV Bharat / state

ಹಾವೇರಿ: ಒಬ್ಬರಿಗೆ ಡೆಂಗ್ಯೂ ಪಾಸಿಟಿವ್​, 31 ಜನರಿಗೆ ಶಂಕೆ - Dengue cases

ಹಾವೇರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಇಂದು ಒಬ್ಬರಿಗೆ ಪಾಸಿಟಿವ್ ಬಂದಿದೆ.

By ETV Bharat Karnataka Team

Published : Jul 10, 2024, 10:58 PM IST

Haveri
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ETV Bharat)

ಮುಖ್ಯವೈದ್ಯಾಧಿಕಾರಿ ಡಾ ಪರಮೇಶ್ ಹಾವನೂರು (ETV Bharat)

ಹಾವೇರಿ : ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಒಂದೇ ದಿನ 131 ಜ್ವರದ ರೋಗಿಗಳು ಕಂಡು ಬಂದಿದ್ದಾರೆ. ಅದರಲ್ಲಿ 31 ಜನರಿಗೆ ಶಂಕಿತ ಡೆಂಗ್ಯೂ ಇದೆ. ಒಬ್ಬರಿಗೆ ಡೆಂಗ್ಯೂ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಇದೀಗ ಎಲ್ಲಿ ನೋಡಿದರಲ್ಲಿ ಬೆಡ್ ಕಾಣಿಸುತ್ತಿವೆ. ಆಸ್ಪತ್ರೆಯ ವಾರ್ಡ್‌ಗಳಲ್ಲಿರುವ ಬೆಡ್​ಗಳು ರೋಗಿಗಳಿಂದ ತುಂಬಿದ್ದರೂ ಸಹ ಕಾರಿಡಾರ್​ಗಳಲ್ಲಿ ಬೆಡ್ ಹಾಕಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲೂ ಮುಂಗಾರು ಆರಂಭವಾಯಿತು ಎಂದರೆ ಸಾಕು ಸಾಂಕ್ರಾಮಿಕ ರೋಗಗಳ ಹಾವಳಿ ಅಧಿಕವಾಗುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಧಿಕ ಜನ ಜ್ವರದಿಂದ ಬಳಲುತ್ತಿದ್ದಾರೆ.

ಈ ಕುರಿತು ಮುಖ್ಯ ವೈದ್ಯಾಧಿಕಾರಿ ಡಾ. ಪರಮೇಶ್ ಅವರು ಮಾತನಾಡಿ, ಜ್ವರದಿಂದಾಗಿ ಆಸ್ಪತ್ರೆಗೆ ನೂರಾರು ರೋಗಿಗಳು ಆಗಮಿಸುತ್ತಿದ್ದಾರೆ. ಅವರ ರೋಗಲಕ್ಷಣ ತಪಾಸಣೆ ಮಾಡಿ ಡೆಂಗ್ಯೂ ಲಕ್ಷಣಗಳಿದ್ದರೆ ಅವರಿಗೆ ಎನ್​ಎಸ್​ಒನ್ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲೂ ಸಹ ಡೆಂಗ್ಯೂ ಪಾಸಿಟಿವ್ ತೋರಿಸಿದರೆ ಅವರನ್ನ ಶಂಕಿತ ಡೆಂಗ್ಯೂ ರೋಗಿಗಳು ಎಂದು ಗುರುತಿಸಲಾಗುತ್ತದೆ. ಎನ್ಎಸ್​ಒನ್​ನಲ್ಲಿ ಸಹ ಪಾಸಿಟಿವ್ ಬಂದ ನಂತರ ಎಲಿಸಾ ಟೆಸ್ಟ್ ಮಾಡಲಾಗುತ್ತದೆ. ಎಲಿಸಾದಲ್ಲಿ ಪಾಸಿಟಿವ್ ಬಂದರೆ ಅದಕ್ಕೆ ಡೆಂಗ್ಯೂ ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆಗೆ ನಿತ್ಯ 300ಕ್ಕೂ ಅಧಿಕ ಹೊರರೋಗಿಗಳು ಆಗಮಿಸುತ್ತಾರೆ. ಅವರಲ್ಲಿ ನೂರಕ್ಕೂ ಅಧಿಕ ಜನರು ಜ್ವರದಿಂದ ಬಳಲುತ್ತಿರುತ್ತಾರೆ. ಅವರಲ್ಲಿ ಡೆಂಗ್ಯೂ ರೋಗಲಕ್ಷಣಗಳು ಇದ್ದರೆ ಮಾತ್ರ ಅವರಿಗೆ ಎನ್‌ಎಸ್ಒನ್ ಟೆಸ್ಟ್ ಮಾಡಿಸುತ್ತೇವೆ. ಎನ್ಎಸ್​ಒನ್ ಪಾಸಿಟಿವ್ ಬಂದರೆ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಾಗಿ ಸೇರಿಸಿಕೊಂಡು ಚಿಕಿತ್ಸೆ ನೀಡುತ್ತೇವೆ. ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತೇವೆ ಎಂದರೆ ಕಳಿಸುತ್ತೇವೆ ಎಂದಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸುತ್ತೇವೆ: ಎನ್ಎಸ್​ಒನ್ ನಂತರ ಎಲಿಸಾ ಟೆಸ್ಟ್ ಮಾಡಿಸಿದಾಗ ಅಲ್ಲಿ ಪಾಸಿಟಿವ್ ಬಂದಾಗ ಮಾತ್ರ ಅದನ್ನ ಡೆಂಗ್ಯೂ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಡೆಂಗ್ಯೂ ರೋಗಿಗಳನ್ನು ಒಳರೋಗಿಗಳಾಗಿ ಸೇರಿಸಿಕೊಂಡು ಚಿಕಿತ್ಸೆ ನೀಡುತ್ತೇವೆ. ಅವರ ಪ್ಲೇಟ್​ಲೆಟ್​ ಕಡಿಮೆಯಾದರೆ ಇಲ್ಲಿ ಪ್ಲೇಟ್​ಲೆಟ್​ ಹಾಕುವ ಸೌಲಭ್ಯ ಇಲ್ಲದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮತ್ತು ದಾವಣಗೆರೆ ಆಸ್ಪತ್ರೆಗೆ ಕಳಿಸಿಕೊಡುತ್ತಿದ್ದೇವೆ ಎಂದು ಹಾವನೂರು ತಿಳಿಸಿದ್ದಾರೆ.

ಈ ರೀತಿ ಡೆಂಗ್ಯೂ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ. ಅವರು ಚೇತರಿಸಿಕೊಂಡ ನಂತರ ರೋಗಿಗಳನ್ನು ಮನೆಗೆ ಕಳುಹಿಸಿಕೊಡಲಾಗುತ್ತದೆ. ಪ್ರತಿವರ್ಷ ಮಳೆಗಾಲ ಬಂದರೆ ಸಾಕು ಡೆಂಗ್ಯೂ ಸೇರಿದಂತೆ ಕೆಲ ಸಾಂಕ್ರಾಮಿಕ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ ಎಂದಿದ್ದಾರೆ. ಉಷ್ಣಾಂಶ ಕಡಿಮೆಯಾಗುವುದರಿಂದ ವೈರಸ್‌ಗಳು ಅಧಿಕವಾಗುತ್ತವೆ. ಸೊಳ್ಳೆಗಳು ಸಹ ಅಧಿಕ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುತ್ತವೆ. ಜೊತೆಗೆ ಜನರು ಮನೆ ಸುತ್ತ ಮಳೆ ನೀರು, ತೆಂಗಿನ ಚಿಪ್ಪು, ಟೈರ್, ಬಾಟಲಿಗಳು ಸೇರಿದಂತೆ ವಿವಿಧೆಡೆ ನಿಂತಿರುವುದನ್ನ ಪತ್ತೆ ಹಚ್ಚಿ ನೀರು ಚೆಲ್ಲಬೇಕು ಎಂದು ತಿಳಿಸಿದ್ದಾರೆ.

ಸೊಳ್ಳೆ ಪರದೆ ಉಪಯೋಗಿಸಬೇಕು: ಜನರು ಸೊಳ್ಳೆ ನಿರೋದಕ ಬಳಸಬೇಕು. ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಬೇಕು. ನೀರು ಸಂಗ್ರಹಣೆ ಹೆಚ್ಚು ದಿನ ಮಾಡುವುದಾದರೆ, ನೀರು ಸಂಗ್ರಹಿಸುವ ತೊಟ್ಟಿಗಳ ಮೇಲೆ ಏನಾದರೂ ಮುಚ್ಚಬೇಕು ಎಂದು ಹೇಳಿದರು.

ಮಳೆಗಾಲದಲ್ಲಿ ಮಳೆ ಜೋರಾಗಿ ಬಂದರೆ ಈ ಡೆಂಗ್ಯೂ ಸೊಳ್ಳೆಗಳ ಮೊಟ್ಟೆಗಳಿಗೆ ಹಾನಿಯಾಗಿ ಈ ರೀತಿಯ
ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ರಸ್ತುತ ಮೋಡಕವಿದ ವಾತಾವರಣ ಮತ್ತು ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪಾದನೆ ಅಧಿಕವಾಗುತ್ತಿದೆ. ಜ್ವರ, ಹೊಟ್ಟೆನೋವು, ವಾಂತಿ ಕಾಣಿಸಿಕೊಂಡರೆ ನೀವು ಮನೆಯಲ್ಲಿ ಸ್ವವೈದ್ಯ ಮಾಡಿಕೊಳ್ಳದೆ ವೈದ್ಯರಿಗೆ ತೋರಿಸಿ ಅವರ ಸಲಹೆ ಪಡೆಯಿರಿ ಎಂದು ಡಾ. ಹಾವನೂರು ತಿಳಿಸಿದ್ದಾರೆ.

ಇದನ್ನೂ ಓದಿ :ಮಹಾಮಾರಿ ಭೀತಿ: ಕಳೆದ 24 ಗಂಟೆಯಲ್ಲಿ 293 ಮಂದಿಯಲ್ಲಿ ಡೆಂಗ್ಯೂ ಪತ್ತೆ! - Dengue Cases

ABOUT THE AUTHOR

...view details