ಮಂಗಳೂರು:ಆರು ತಿಂಗಳ ಹಿಂದೆಯೇ ನಮ್ಮ ಜಿಲ್ಲೆಯಲ್ಲಿ ಬದಲಾವಣೆ ಮಾಡುವುದಿದ್ದರೆ ಅವಕಾಶ ಇದೆ. ಹೊಸಬರಿಗೆ ಅವಕಾಶ ಕೊಡುವುದಿದ್ದರೆ ನನ್ನಿಂದ ಅಡ್ಡಿಯಿಲ್ಲ ಎಂದು ಪಕ್ಷದ ಮುಖಂಡರಿಗೆ ಹೇಳಿದ್ದೆನು ಎಂದು ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ತಿಳಿಸಿದ್ದಾರೆ.
ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಂಡ ಬಳಿಕ ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಸಕ್ತ ಬದಲಾವಣೆ ಬಗ್ಗೆ ಮಾತುಕತೆ ಆಗಿಲ್ಲ. ಬಿಜೆಪಿ ಗೆಲುವಿಗೆ ನಾನು ಸಹಕಾರ ಕೊಡುತ್ತೇನೆ. ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ಬಿಜೆಪಿ ಅಭ್ಯರ್ಥಿಯಾಗಿರುವ ಕ್ಯಾ ಬ್ರಿಜೇಶ್ ಚೌಟ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಅಭಿಮತ ವ್ಯಕ್ತಪಡಿಸಿದರು.
ಬಿಜೆಪಿ ನನಗೆ 15 ವರ್ಷ ದೊಡ್ಡ ಅವಕಾಶ ಕೊಟ್ಟಿದೆ. ಈ ಕ್ಷೇತ್ರದ ಸಂಸದನಾಗಲು ಪಕ್ಷದ ಹಿರಿಯರು ಅವಕಾಶ ಕೊಟ್ಟಿದ್ದಾರೆ. ನನ್ನನ್ನು ಕಾರ್ಯಕರ್ತರು ಆಹೋರಾತ್ರಿ ದುಡಿದು ಗೆಲ್ಲಿಸಿದ್ದಾರೆ. ಕ್ಷೇತ್ರದ ಮತದಾರರು ಗೆಲ್ಲಿಸಿ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು. ನಾನು ಪ್ರಾಮಾಣಿಕ ರಾಜಕಾರಣವನ್ನು ಮಾಡಿದ್ದೇನೆ. ಕ್ಷೇತ್ರಕ್ಕೆ 1 ಲಕ್ಷ ಕೋಟಿ ಅನುದಾನವನ್ನು ತಂದಿದ್ದೇನೆ. ಯುಪಿಎ ಅವಧಿಯ ಐದು ವರ್ಷ, ಮೋದಿ ಅವಧಿಯ ಹತ್ತು ವರ್ಷದಲ್ಲಿ ನನಗೆ ಅವಕಾಶ ಸಿಕ್ಕಿದೆ. ಜಿಲ್ಲೆಗೆ ಯೋಜನೆ ತರಲು ಅವಕಾಶ ಸಿಕ್ಕಿದೆ. ಪಕ್ಷದ ಹಿರಿಯರು ಬೆಳೆಸಿದ್ದಾರೆ. ಸಂಘ ಪರಿವಾರದವರು ಆಶೀರ್ವದಿಸಿದ್ದಾರೆ. ರಾಜಕಾರಣಕ್ಕೆ ಹೊಸ ಯುವಕರು ಬರಬೇಕು. ಕಾರ್ಯ ಚಟುವಟಿಕೆ ವಿಸ್ತಾರವಾಗಬೇಕು ಎಂದು ಪಕ್ಷದ ಹಿರಿಯರು ಈ ನಿರ್ಧಾರ ತೆಗೆದುಕೊಂಡಿದ್ದು, ಇದನ್ನು ನಾನು ಸ್ವಾಗತಿಸುತ್ತೇನೆ ಎಂದರು.