ಕರ್ನಾಟಕ

karnataka

ವಾರದೊಳಗೆ ತನಿಖೆ ಬಾಕಿ ಇರುವ ಅಕ್ರಮ ಪ್ರಕರಣಗಳ ಪ್ರಗತಿ ಪರಿಶೀಲನೆಗೆ ಸಮಿತಿ ಸಭೆ: ಗೃಹ ಸಚಿವ ಜಿ. ಪರಮೇಶ್ವರ್ - G Parameshwara

By ETV Bharat Karnataka Team

Published : Sep 11, 2024, 1:34 PM IST

ರಾಜ್ಯದಲ್ಲಿರುವ ಹಗರಣಗಳ ಪ್ರಕರಣಗಳನ್ನು ಗುರುತಿಸಿದ್ದು, ಅವುಗಳ ತನಿಖೆ ಬಗ್ಗೆ ಪರಿಶೀಲಿಸಿ ವರದಿಯನ್ನು ಸಚಿವ ಸಂಪುಟಕ್ಕೆ ಸಲ್ಲಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಗೃಹ ಸಚಿವ ಜಿ. ಪರಮೇಶ್ವರ್t
ಗೃಹ ಸಚಿವ ಜಿ. ಪರಮೇಶ್ವರ್ (ETV Bharat)

ಗೃಹ ಸಚಿವ ಜಿ. ಪರಮೇಶ್ವರ್ (ETV Bharat)

ಬೆಂಗಳೂರು: 'ತನಿಖಾ ಸಂಸ್ಥೆಗಳ ಹಂತದಲ್ಲಿ ವಿವಿಧ ಹಗರಣಗಳ ತನಿಖೆ ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲನೆಗೆ ವಾರದೊಳಗೆ ಸಮಿತಿ ಸಭೆ ನಡೆಸುತ್ತೇನೆ' ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಎಲ್ಲ ಹಗರಣಗಳ ಪ್ರಕರಣಗಳನ್ನು ಗುರುತಿಸಿದ್ದೇವೆ.‌ ಅವು ತನಿಖೆ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲಿಸಿ, ವರದಿಯನ್ನು ಸಚಿವ ಸಂಪುಟಕ್ಕೆ ಸಲ್ಲಿಸುತ್ತೇವೆ.‌ ತ್ವರಿತಗತಿಯಲ್ಲಿ ತನಿಖೆ ನಡೆಯಬೇಕು ಎಂಬ ಉದ್ದೇಶದಿಂದ ಸಮಿತಿ ರಚನೆ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪ್ರಗತಿ ಪರಿಶೀಲನೆ ವೇಳೆ ಗಮನಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವಿಚಾರ ಕ್ಯಾಬಿನೆಟ್​ ಗಮನಕ್ಕೆ ಬಂದ ಬಳಿಕ ತ್ವರಿತಗತಿಯಲ್ಲಿ ಮಾಡಲು ಸಮಿತಿ ರಚಿಸಿದ್ದಾರೆ‌' ಎಂದು ಹೇಳಿದರು.

ದ್ವೇಷದ ರಾಜಕಾರಣ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿ, 'ಅವರು ಏನಾದರು ಹೇಳಿಕೊಳ್ಳಲಿ. ನಮ್ಮನ್ನು ಟೀಕೆ ಮಾಡುವುದಕ್ಕೆ, ಸಲಹೆ ನೀಡಲು, ತಪ್ಪು ಮಾಡಿದಾಗ ಹೇಳುವುದಕ್ಕೆ ಅವರಿಗೆ ಜವಾಬ್ದಾರಿಗಳಿರುತ್ತವೆ. ಆಡಳಿತ ನಡೆಸುವರಿಗೂ ಅವರಿಗೆ ಆದಂತಹ ಜವಾಬ್ದಾರಿಗಳಿರುತ್ತವೆ' ಎಂದರು.

ಸಿಎಂ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ: 'ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ.‌ ನಾವು ಜನರಿಗೆ ಕೊಟ್ಟ ಭರವಸೆಗಳನ್ನು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಾಡಬೇಕು. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು, ಸರ್ಕಾರದ ಕಾರ್ಯಕ್ರಮಗಳು ಅನುಷ್ಠಾನ ಆಗಬಾರದು ಎಂಬ ಉದ್ದೇಶದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಬದಿಗೊತ್ತಿ ನಾವು ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿ ಸ್ಥಾನದ ಚರ್ಚೆಯ ಬಗ್ಗೆ ಶಿಸ್ತಿನ ಕ್ರಮದ ಕುರಿತು ಪಕ್ಷದ ಅಧ್ಯಕ್ಷರು ಕಡಿವಾಣ ಹಾಕುತ್ತಾರೆ. ಅಧ್ಯಕ್ಷರು ಅಮೆರಿಕ ಪ್ರವಾಸದಲ್ಲಿದ್ದು, ಬಂದನಂತರ ಈ ಬಗ್ಗೆ ಗಮನ ಹರಿಸುತ್ತಾರೆ' ಎಂದು ಸ್ಪಷ್ಟಪಡಿಸಿದರು.

ಸಿಕ್ಕ ಸಾಕ್ಷ್ಯಾಧಾರದ ಮೇಲೆ ತೀರ್ಮಾನ:ವಾಲ್ಮೀಕಿ ನಿಗಮ ಹಗರಣದ ಇ.ಡಿ. ಚಾರ್ಜ್‌ಶೀಟ್ ಕುರಿತು ಪ್ರತಿಕ್ರಿಯಿಸಿ, 'ನಾವ್ಯಾರೋ ಹೇಳಿದ ಹೇಳಿಕೆ ಮುಖ್ಯವಲ್ಲ‌. ತನಿಖಾ ಸಂಸ್ಥೆಗಳು ಸಿಕ್ಕಂತಹ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತೀರ್ಮಾನ ಮಾಡುತ್ತಾರೆ. ನಾವು ನೀಡುವ ಹೇಳಿಕೆಗಳು ಮೇಲ್ನೋಟಕ್ಕೆ ಮಾತ್ರ. ತನಿಖೆ ಕೈಗೊಂಡ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತದೆ. ಮಾಜಿ ಸಚಿವ ನಾಗೇಂದ್ರ ಅವರ ಪಾತ್ರ ಇದೆ ಎಂದು ಇ.ಡಿ. ಯವರು ಹೇಳುತ್ತಿದ್ದಾರೆ. ಬೇಕಾದಷ್ಟು ಸಲ ಹಾಗೇ ಆಗುತ್ತದೆ. ಅವರು ಹೇಳಿರುವುದಕ್ಕೆ ನಮಗೆ ಸಾಕ್ಷ್ಯ ಸಿಕ್ಕಿರುವುದಿಲ್ಲ. ನಾವು ಹೇಳಿರುವುದಕ್ಕೆ ಅವರಿಗೆ ಸಾಕ್ಷ್ಯ ಸಿಕ್ಕಿರುವುದಿಲ್ಲ. ಬೇಕಾದಷ್ಟು ಸಲ ಹೀಗಾಗಿದೆ. ವಿವಿಧ ತನಿಖಾ ಸಂಸ್ಥೆಗಳ ತನಿಖಾ ವಿಧಾನವೇ ಬೇರೆ ಇರುತ್ತದೆ. ಆ ದೃಷ್ಟಿಯಿಂದ‌ ಮಾಡುತ್ತಾರೆ. ಇ.ಡಿ.ಯವರು ಮತ್ತು ಎಸ್‌ಐಟಿಯವರು ಇಬ್ಬರು ಚಾರ್ಜ್‌ಶೀಟ್ ಸಲ್ಲಿಸುತ್ತಾರೆ' ಎಂದು ಹೇಳಿದರು.

ಡಿಕೆಶಿ, ರಾಹುಲ್​ ಗಾಂಧಿ ಭೇಟಿ ಆಕಸ್ಮಿಕ: 'ಅಮೆರಿಕದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಭೇಟಿಯಾಗಿರುವುದು ನನಗೆ ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಫೋಟೊಗಳನ್ನು ಗಮನಿಸಿದ್ದೇನೆ. ಅವರು ಕುಟುಂಬ ಸಮೇತ ಅಮೆರಿಕ ಪ್ರವಾಸ ಹೋಗಿದ್ದಾರೆ. ಆಕಸ್ಮಿಕವಾಗಿ ಅದೇ ಹೋಟೆಲ್‌ನಲ್ಲಿ ಸಿಕ್ಕಿದ್ದಾರೆ ಎಂದರೆ, ಓಡಿ ಹೋಗಲು ಆಗುತ್ತಾ? ಅವರಿಗೆ ಸತ್ಕರಿಸಿರುತ್ತಾರೆ. ಅದು ಬಿಟ್ಟರೆ ಬೇರೇನು ಗೊತ್ತಿಲ್ಲ' ಎಂದು ಉತ್ತರಿಸಿದರು.

ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್​ಗೆ ಅರ್ಹರಲ್ಲ:'ಯಾವುದೇ ಬಿಪಿಎಲ್​​ ಕಾರ್ಡ್‌ಗಳನ್ನು ಕಡಿತ ಮಾಡುವುದಿಲ್ಲ. ತೆರಿಗೆ ಪಾವತಿ ಮಾಡುತ್ತಿರುವವರು ಬಿಪಿಎಲ್​ ಕಾರ್ಡ್ ಪಡೆಯಲು ಅರ್ಹರಲ್ಲ ಎಂಬುದು ನಿಯಮದಲ್ಲಿದೆ. ಸುಳ್ಳು ದಾಖಲೆ ಸಲ್ಲಿಸಿ, ಅಧಿಕಾರಿಗಳ ಮನವೊಲಿಸಿ ಕಾರ್ಡ್ ಪಡೆದಿರುವುದು ತಪ್ಪಲ್ಲವೇ?. ಯಾರ ಕಾರ್ಡ್‌ನ್ನು ತೆಗೆಯಲು ಹೋಗುವುದಿಲ್ಲ' ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಸರ್ಕಾರ ಬಡವರ ಅನ್ನ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದಿರುವ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, 'ಅವರು ಏನೋ ಹೇಳುತ್ತಾರೇ ಪಾಪ. ಹೆಚ್.ಡಿ. ಕುಮಾರಸ್ವಾಮಿ ಅವರು ದೊಡ್ಡ ಜವಾಬ್ದಾರಿಯಲ್ಲಿದ್ದಾರೆ. ರಾಜ್ಯಕ್ಕೆ ದೊಡ್ಡ ಕೈಗಾರಿಕೆ, ಸ್ಟೀಲ್ ಇಂಡಸ್ಟ್ರೀಸ್​ ನೀಡಿದರೆ ಚೆಂದ' ಎಂದು ಟಾಂಗ್​ ನೀಡಿದರು.

ಬೆಂಬಲಿಗರಿಂದ ಘೋಷಣೆ:ಸಿಎಂ ಬದಲಾವಣೆ ಕೂಗು ಚರ್ಚೆಯಲ್ಲಿರುವ ಬೆನ್ನಲ್ಲೇ ಪರಮೇಶ್ವರ್​ ಪರ ಬೆಂಬಲಿಗರು ಘೋಷಣೆ ಕೂಗಿದ ಘಟನೆ ಸದಾಶಿವನಗರದ ನಿವಾಸದ ಬಳಿ ನಡೆಯಿತು. ಮುಂದಿನ ಸಿಎಂ ಎಂದು ಬೆಂಬಲಿಗರು ಘೋಷಣೆ ಕೂಗಿದರು. ಈ ವೇಳೆ 'ಸುಮ್ಮನೆ ಇರ್ರೀ' ಎಂದರು.

ಇದನ್ನೂ ಓದಿ:ಸಿಎಂ ರೇಸ್​ನಲ್ಲಿ ಯಾರೂ ಇಲ್ಲ, ಸಿದ್ದರಾಮಯ್ಯನವರೇ ಸಿಎಂ: ಸಚಿವ ದಿನೇಶ್ ಗುಂಡೂರಾವ್ - Dinesh Gundurao

ABOUT THE AUTHOR

...view details