ಕರ್ನಾಟಕ

karnataka

ಕುಸಿದ ಕಾಳಿ ನದಿ ಸೇತುವೆ ತೆರವು ಕಾರ್ಯ ತಿಂಗಳ ಬಳಿಕ ಪ್ರಾರಂಭ: ಸವಾಲಾದ ಹೊಸ ಸೇತುವೆಯ ಸಂರಕ್ಷಣೆ - Kali River Bridge Clearance Work

By ETV Bharat Karnataka Team

Published : Sep 13, 2024, 8:20 AM IST

ಆಗಸ್ಟ್​ ತಿಂಗಳಲ್ಲಿ ಕುಸಿದು ಬಿದ್ದ ಕಾಳಿ ನದಿ ಸೇತುವೆಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಈ ಕಾರ್ಯಾಚರಣೆಯಲ್ಲಿ ಪಕ್ಕದ ಹೊಸ ಸೇತುವೆಗೆ ಹಾನಿಯಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ.

ಕಾಳಿ ನದಿ ಸೇತುವೆ ತೆರವು ಕಾರ್ಯ
ಕಾಳಿ ನದಿ ಸೇತುವೆ ತೆರವು ಕಾರ್ಯ (ETV Bharat)

ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದರು. (ETV Bharat)

ಕಾರವಾರ:ತಿಂಗಳ ಹಿಂದೆ ಕುಸಿದು ಬಿದ್ದ ಕಾಳಿ ನದಿಯ ಹಳೆಯ ಸೇತುವೆಯ ಅವಶೇಷಗಳನ್ನು ತೆರವುಗೊಳಿಸಲು ಕೊನೆಗೂ ಗುತ್ತಿಗೆ ಕಂಪೆನಿ ಮುಂದಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಕಂಪೆನಿ ಅರ್ಧ ಕುಸಿದ ಸೇತುವೆಯ ಭಾಗಗಳನ್ನು ಬೃಹತ್​ ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಾರಂಭಿಸಿದೆ. ಹೊಸ ಸೇತುವೆಗೆ ಹಾನಿಯಾಗದಂತೆ ತೆರವು ಕಾರ್ಯ ನಡೆಸುವುದು ಸವಾಲಾಗಿದೆ.

ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ ಈ ಸೇತುವೆ ಆ.7ರ ತಡರಾತ್ರಿ ಕುಸಿದು ಬಿದ್ದಿದೆ. 665 ಮೀಟರ್ ಉದ್ದದ ಸೇತುವೆಯಲ್ಲಿ 300 ಮೀ.ನಷ್ಟು ಭಾಗ ಕುಸಿದಿದೆ. ಕಾಂಕ್ರೀಟ್ ಸ್ಲ್ಯಾಬ್, ಸೇತುವೆಗೆ ಅಳವಡಿಸಲಾಗಿದ್ದ ಕೇಬಲ್, ಡಾಂಬರು ರಸ್ತೆ, ಕಬ್ಬಿಣದ ಸರಳುಗಳು ನದಿಯಲ್ಲಿ ಸಿಲುಕಿಕೊಂಡಿವೆ. ಅಲ್ಲದೇ ಅರ್ಧ ಸೇತುವೆಯ ಭಾಗ ಇನ್ನೂ ಕುಸಿಯುವ ಸ್ಥಿತಿಯಲ್ಲಿದೆ.

ಆದರೆ ಸೇತುವೆ ಕುಸಿದು ತಿಂಗಳು ಕಳೆದರೂ ಬಿದ್ದ ಅವಶೇಷಗಳನ್ನು ತೆರವು ಮಾಡದ ಕಾರಣ ಸೇತುವೆಯ ಮೇಲೆ ಜನರು ಪೊಲೀಸರ ಕಣ್ತಪ್ಪಿಸಿ ರೀಲ್ಸ್ ಮತ್ತು ಸೆಲ್ಫಿ ಕ್ಲಿಕ್ಕಿಸುವ ಹುಚ್ಚಾಟ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು, ಮೀನುಗಾರರು ಆತಂಕ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲಾಡಳಿತ ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ ಪರಿಣಾಮ ಕೊನೆಗೂ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪೆನಿ ಕಳೆದ ಎರಡು ದಿನಗಳಿಂದ ತೆರವು ಕಾರ್ಯ ನಡೆಸುತ್ತಿದೆ.

ಸದ್ಯ ಸೇತುವೆಯ ಎರಡೂ ತುದಿಗಳಲ್ಲಿ ಕುಸಿಯದೇ ನಿಂತಿರುವ ಭಾಗವನ್ನು ಜೆಸಿಬಿಗಳ ಮೂಲಕ ತೆರವು ಮಾಡಲಾಗುತ್ತಿದೆ. ಸದಾಶಿವಗಡ ಕಡೆಯಲ್ಲಿ ಸೇತುವೆಯ ಕಂಬಗಳು ಹಾಗೂ ಸೇತುವೆಯ ಕೆಲ ಭಾಗ ಬೀಳದೇ ನಿಂತಿದೆ. ಮಧ್ಯಭಾಗದಲ್ಲಿ ನದಿಗೆ ಬಿದ್ದಿರುವ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಹೊಸ ಸೇತುವೆಗೆ ಹಾನಿಯಾಗದಂತೆ ಮೇಲೆತ್ತಬೇಕಿದೆ. ಇದು ಕಂಪೆನಿಗೂ ಸವಾಲಿನ‌ ಕೆಲಸ. ಈ ಕಾರಣದಿಂದ ಕೆಲಸಕ್ಕೆ ಬೇಕಾದ ಅಗತ್ಯ ಉಪಕರಣಗಳು, ಅವಶೇಷ ಎತ್ತಿ ಸಾಗಿಸಲು ಕ್ರೇನ್‌ಸಹಿತ ಬಾರ್ಜ್ ತರಿಸಲು ಕಂಪನಿ ಪ್ರಕ್ರಿಯೆ ಆರಂಭಿಸಿದೆ. ಆದರೆ, ತೆರವುಗೊಳಿಸಿದ ಅವಶೇಷ ದಾಸ್ತಾನು ಮಾಡಲು ಜಿಲ್ಲಾಡಳಿತಕ್ಕೆ ಜಾಗ ಗುರುತಿಸಕೊಡಲು ಮನವಿ ಮಾಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನೀರಿನಲ್ಲಿರುವ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ತೆರವಿನ ವೇಳೆ ನೀರಿಗೆ ಬೀಳುವ ಕಾಂಕ್ರೀಟ್ ಅವಶೇಷಗಳನ್ನು ಮೇಲೆತ್ತಲು ಮುಂಬೈಯಿಂದ ಬಾರ್ಜ್ ತರಿಸಲಾಗುತ್ತಿದೆ. ಬಾರ್ಜ್ ಬರಲು ನಾಲ್ಕೈದು ದಿನಗಳು ಬೇಕಾಗುತ್ತದೆ. ಬಾರ್ಜ್ ಬಂದ ಬಳಿಕ ಕಾಮಗಾರಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಕಾಂಕ್ರೀಟ್ ಅವಶೇಷಗಳನ್ನು ಜಟ್ಟಿಗೆ ತಂದು, ಬಳಿಕ ಕಾಂಕ್ರೀಟ್ ಒಡೆದು ಅದರಲ್ಲಿರುವ ಕಬ್ಬಿಣದ ಸರಳುಗಳನ್ನು ಬೇರ್ಪಡಿಸಲಾಗುತ್ತದೆ. ಹೊಸ ಸೇತುವೆಗೆ ಹಾನಿಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಗುತ್ತಿಗೆ ಕಂಪೆನಿಯ ಅಧಿಕಾರಿ ಗೋಪಾಲ ತಿಳಿಸಿದರು.

ಕಾಳಿ ಸೇತುವೆ ಕುಸಿದು ಸ್ಥಳೀಯ ಮೀನುಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೀನುಗಾರರು ರಾತ್ರಿ ವೇಳೆ ಪಾತಿ ದೋಣಿಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಮೀನುಗಾರಿಕೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಸೇತುವೆ ಕುಸಿದಿದ್ದರಿಂದ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಸೇತುವೆ ಬಿದ್ದ ಜಾಗ ದಾಟಿ ಹೋಗಲು ಅವಕಾಶ ಇಲ್ಲದ ಕಾರಣ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೇ ಸೇತುವೆ ತೆರವು ಕಾರ್ಯ ಮಾಡುವುದರ ಜೊತೆಗೆ ಆದಷ್ಟು ಬೇಗ ಹೊಸ ಸೇತುವೆ ನಿರ್ಮಾಣ ಕಾರ್ಯವೂ ಆಗಬೇಕಿದೆ. ಕರ್ನಾಟಕ ಮತ್ತು ದಕ್ಷಿಣ ಗೋವಾಗೆ ಸಂಪರ್ಕ ಕಲ್ಪಿಸುವ ಅತಿ ದೊಡ್ಡ ಸೇತುವೆ ಇದಾಗಿದ್ದು, ಕಳೆದ ನಲವತ್ತು ವರ್ಷಗಳ ಹಿಂದೆ ಸುಮಾರು 20 ವರ್ಷಗಳ ನಿರಂತರ ಶ್ರಮದಿಂದ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಹಾಗಾಗಿ ಆದಷ್ಟು ಬೇಗ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳಿಯರು ಒತ್ತಾಯಿಸುತ್ತಿದ್ದಾರೆ.

ಸದ್ಯ ಹೊಸದಾಗಿ ನಿರ್ಮಿಸಿರುವ ಸೇತುವೆ ಮೇಲೆಯೇ ದ್ವಿಮುಖ ಸಂಚಾರ ಮಾಡಬೇಕಿದೆ. ಆದರೆ ಇದು ಹೆಚ್ಚು ಅಪಾಯಕಾರಿ ಹಾಗೂ ಸೇತುವೆಗೂ ಹಾನಿಯಾಗುವ ಸಾಧ್ಯತೆ ಇರುವ ಕಾರಣ ಇದೀಗ ತೆರವು ಮಾಡಿದ ಜಾಗದಲ್ಲಿಯೇ ಆದಷ್ಟು ಬೇಗ ನೂತನ ಸೇತುವೆ ನಿರ್ಮಾಣ ಕಾರ್ಯ ಮಾಡಬೇಕಿದೆ.

ಇದನ್ನೂ ಓದಿ:ಆತಂಕ ಸೃಷ್ಟಿಸಿದ ಹೊಸ ಕಾಳಿ ಸೇತುವೆ ಬಗೆಗಿನ ವಿಡಿಯೋ: ಸ್ಪಷ್ಟನೆ ನೀಡಿದ ಜಿಲ್ಲಾಡಳಿತ - Kali River Bridge

ABOUT THE AUTHOR

...view details