ಕರ್ನಾಟಕ

karnataka

ಆಗಸ್ಟ್‌ 10ರಂದು ಚಾಮರಾಜನಗರಕ್ಕೆ ಸಿಎಂ; ಭರದಿಂದ ಸಾಗಿದ ರಸ್ತೆ ಗುಂಡಿ ಮುಚ್ಚುವ ಕಾರ್ಯ - CM Siddaramaiah

By ETV Bharat Karnataka Team

Published : Aug 9, 2024, 2:56 PM IST

ಸಿಎಂ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗಿದೆ.

Chamarajanagar  CM Siddaramaiah
ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುತ್ತಿರುವ ಸಿಬ್ಬಂದಿ (ETV Bharat)

ಚಾಮರಾಜನಗರ:ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 10ರಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ, ರಸ್ತೆಯಲ್ಲಿರುವ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ಜೋರಾಗಿ ನಡೆಯುತ್ತಿದೆ.

ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಶನಿವಾರ ಸಂಜೆ 5ಕ್ಕೆ ಜಲಪಾತೋತ್ಸವಕ್ಕೆ ಸಿಎಂ ಚಾಲನೆ ನೀಡಲಿದ್ದು, ಸಿಎಂ ಸಂಚರಿಸುವ ರಸ್ತೆ ಮಾರ್ಗಗಳಿಗೆ ತೇಪೆ ಹಾಕುವ ಕಾರ್ಯ ಮಾಡಲಾಗುತ್ತಿದೆ.

ಈ ರಸ್ತೆಗಳು ಕಳೆದ ಹಲವು ತಿಂಗಳಿನಿಂದ ಗುಂಡಿ ಬಿದ್ದು ಹಾಳಾಗಿವೆ. ಇದೀಗ ಸಿಎಂ ಭೇಟಿಯ ಕಾರಣಕ್ಕೆ ಐದಾರು ಕಿ.ಮೀ ರಸ್ತೆ ದಿಢೀರ್ ಬದಲಾಗುತ್ತಿದೆ. ಇಷ್ಟು ದಿನ ಸುಮ್ಮನಿದ್ದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಇನ್ನೊಂದೆಡೆ, ಭರಚುಕ್ಕಿ ಜಲಪಾತೋತ್ಸಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, 4 ಸಾವಿರ ಆಸನ ವ್ಯವಸ್ಥೆ, ಧ್ವನಿ-ಬೆಳಕಿನ ಸಂಯೋಜನೆಯಲ್ಲಿ ಜಲಪಾತ ಕಣ್ತುಂಬಿಕೊಳ್ಳಲು ಸಿದ್ಧತೆ ಪ್ರಗತಿಯಲ್ಲಿದೆ.

ಚಾಮರಾಜನಗರಕ್ಕೆ 5ನೇ ಬಾರಿ ಸಿಎಂ:ಚಾಮರಾಜನಗರಕ್ಕೆ ಈ ಹಿಂದೆ ಮುಖ್ಯಮಂತ್ರಿಗಳಾದವರು ಹಿಂದೇಟು ಹಾಕಿದ್ದರೆ, ಸಿದ್ದರಾಮಯ್ಯ ಮೌಢ್ಯಕ್ಕೆ ಸೊಪ್ಪು ಹಾಕದೇ 5ನೇ ಬಾರಿಗೆ ಗಡಿಜಿಲ್ಲೆಗೆ ಶನಿವಾರ ಭೇಟಿ ಕೊಡಲಿದ್ದಾರೆ. ಸಿಎಂ ಆದ ಮೂರು ತಿಂಗಳೊಳಗೆ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಕೆಡಿಪಿ ಸಭೆ ನಡೆಸಿದ್ದ ಸಿದ್ದರಾಮಯ್ಯ, ಬಳಿಕ ಎರಡನೇ ಬಾರಿ ಆಗಮಿಸಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಸಿದ್ದರು.

ನಂತರ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ರೋಡ್ ಶೋ ನಡೆಸಿದ್ದರು. ನಾಲ್ಕನೇ ಬಾರಿ ಚಾಮರಾಜನಗರಕ್ಕೆ ಬಂದು ಮತದಾರರಿಗೆ ಕೃತಜ್ಞತಾ ಸಲ್ಲಿಕೆ ಮಾಡಿದ್ದ ಸಿದ್ದರಾಮಯ್ಯ ಶನಿವಾರ 5ನೇ ಬಾರಿ ಭೇಟಿ ಕೊಟ್ಟು ಮಾಜಿ ರಾಜ್ಯಪಾಲ ಬಿ‌.ರಾಚಯ್ಯ ಸ್ಮಾರಕ ಉದ್ಘಾಟನೆ, ಸಂಜೆ ಕೊಳ್ಳೇಗಾಲದಲ್ಲಿ ಭರಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ ನೀಡುವರು.

ಭರಚುಕ್ಕಿ ಜಲಪಾತ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿದ್ದು, ಶಾಸಕ ಮಂಜುನಾಥ್ ಸಿದ್ಧತೆ ಪರಿಶೀಲಿಸಿದರು. ಹನೂರು ತಾಲೂಕಿನ ಪ್ರವಾಸಿ ಸ್ಥಳಗಳಿಗೆ ಮೂಲಸೌಕರ್ಯ, ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನಕ್ಕಾಗಿ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ದೇವೇಗೌಡರ ಕುಟುಂಬದ ವಿರುದ್ಧ ಭೂ ಕಬಳಿಕೆ ಫ್ಲೆಕ್ಸ್​ ವಿರೋಧಿಸಿ ಪ್ರತಿಭಟನೆ: ಸಾ.ರಾ.ಮಹೇಶ್ ಜತೆ ಬೆಂಬಲಿಗರು ವಶಕ್ಕೆ - JDS protest

ABOUT THE AUTHOR

...view details