ಮೈಸೂರು:ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೇಲೆಯೂ ಎಫ್ಐಆರ್ ಆಗಿದೆ. ಅವರು ರಾಜೀನಾಮೆ ನೀಡಲಿ, ಬಳಿಕ ನಾನು ನೋಡುತ್ತೇನೆ ಎಂದು ಲೋಕಾಯುಕ್ತ ಎಫ್ಐಆರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕೆಡಿಪಿ ಸಭೆಯ ಬಳಿಕ ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಕುರಿತಂತೆಮಾತನಾಡಿದರು.
ದಸರಾ ಬಗ್ಗೆ ಮಾತನಾಡಿದ ಸಿಎಂ, ಈ ಬಾರಿ ಅದ್ಧೂರಿ ದಸರಾ ಮಾಡಲು ಸೂಚಿಸಲಾಗಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಹಂ.ಪಾ.ನಾಗರಾಜಯ್ಯ ದಸರಾ ಉದ್ಘಾಟನೆ ಮಾಡಲಿದ್ದಾರೆ. ಅಂದೇ ಎಲ್ಲಾ ಸಾಂಸ್ಕೃತಿಕಾ ಕಾರ್ಯಕ್ರಮಗಳು ಅರಮನೆ ಮುಂಭಾಗದಲ್ಲಿ ಉದ್ಘಾಟನೆ ಆಗುತ್ತದೆ. ದಸರಾ ಉದ್ಘಾಟನೆಗೆ ಮೈಸೂರಿಗೆ ಬರುತ್ತೇನೆ. ಈ ಬಾರಿ ದಸರಾವನ್ನು ಅಚ್ಚುಕಟ್ಟಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಈ ಬಾರಿ ತಮಿಳುನಾಡಿಗೆ 177 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಈಗಾಗಲೇ ತಮಿಳುನಾಡಿಗೆ 207 ಟಿಎಂಸಿ ನೀರು ಹರಿದಿದೆ . ನಮ್ಮ ಮತ್ತು ತಮಿಳುನಾಡು ನಡುವೆ ಯಾವುದೇ ಸಮಸ್ಯೆ ಇರಲ್ಲ ಎಂದರು.
ನಾಗಮಂಗಲ ಗಲಾಟೆ ಪೋಲೀಸರ ವೈಫಲ್ಯದಿಂದ ನಡೆಯಿತು. ಆ ರೀತಿ ಘಟನೆಗಳು ಮೈಸೂರಿನಲ್ಲಿ ಆಗದಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಕ್ಲಬ್ಗಳಲ್ಲಿ ಡ್ರಗ್ಸ್ ಮತ್ತು ಗಾಂಜಾ ತಡೆಯಲು ಸೂಚಿಸಿದ್ದು, ಈ ಚಟಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ತಡೆಯಿರಿ ಎಂದು ಪೋಲೀಸರಿಗೆ ಸೂಚಿಸಿದ್ದೇನೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಜಮಿನು ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒತ್ತುವರಿ ತೆರವು ಮಾಡಿ, ಸರ್ಕಾರಿ ಜಾಗ ಉಳಿಸಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಎಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ಗೆ ಸ್ನೇಹಮಯಿ ಕೃಷ್ಣ ಅರ್ಜಿ - Snehamayi Krishna Petition