ಚಾಮರಾಜನಗರ:ರಾಜ್ಯ ಅಷ್ಟೇ ಅಲ್ಲದೇ ಹೊರ ರಾಜ್ಯದವರನ್ನೂ ಸೆಳೆಯುವ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯು ಇದೇ ಜ. 13 ರಿಂದ 17ರ ವರೆಗೆ ನಡೆಯಲಿದ್ದು, ಲಕ್ಷಾಂತರ ಭಕ್ತರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ.
ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಚಂದ್ರಮಂಡಲೋತ್ಸವದಿಂದ ಆರಂಭಗೊಂಡು ಮುತ್ತತ್ತಿರಾಯನ ಸೇವೆಯಲ್ಲಿ ಸಂಪನ್ನವಾಗಲಿದೆ. ಜಾತ್ರೆಯ 4ನೇ ದಿನದಂದು ಪಂಕ್ತಿಸೇವೆ ಎಂಬ ವಿಶಿಷ್ಟ ಆಚರಣೆ ನಡೆಯಲಿದೆ. ಸಿದ್ದಪ್ಪಾಜಿ, ಮಂಟೇಸ್ವಾಮಿ ದೇವರಿಗೆ ಅನ್ನ, ಮುದ್ದೆ, ಮಾಂಸದ ಭಕ್ಷ್ಯಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿ ಸಹಪಂಕ್ತಿ ಭೋಜನ ಸವಿಯುವುದೇ ಪಂಕ್ತಿ ಸೇವೆಯಾಗಿದೆ. ಪ್ರತಿ ಬಾರಿಯೂ ಜಿಲ್ಲಾಡಳಿತ ಮತ್ತು ಭಕ್ತರ ನಡುವೆ ಮಾಂಸಾಹಾರದ ವಿಚಾರಕ್ಕೆ ಜಟಾಪಟಿ ಇದ್ದೇ ಇರಲಿದೆ.
ಪ್ರಾಣಿವಧೆ ನಿಷೇಧಿಸಿ ಡಿಸಿ ಆದೇಶ :ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ ಅನ್ವಯ ಜನವರಿ 13 ರಿಂದ 17ರ ಮಧ್ಯರಾತ್ರಿಯವರೆಗೆ ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿಬಲಿ ನೀಡುವುದನ್ನು ಮತ್ತು ಮಾರಕಾಸ್ತ್ರಗಳನ್ನು ತರುವುದನ್ನು ತಡೆಗಟ್ಟಲು ಹಾಗೂ ಇದರೊಂದಿಗೆ ಹೈಕೋರ್ಟ್ ನಿರ್ದೇಶನದಂತೆ ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ.
ಜೊತೆಗೆ, ಪ್ರಾಣಿ ಬಲಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು, ಪ್ರಾಣಿಬಲಿ ನಿಷೇಧದ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಕ್ರಮ ಕೈಗೊಳ್ಳುವ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಘಟನೆಗಳು ಸಂಭವಿಸಿದರೆ ತಕ್ಷಣ ಆದೇಶಗಳನ್ನು ಮಾಡುವ ಸಲುವಾಗಿ ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಅವರೊಂದಿಗೆ ಇನ್ನಿತರ ಅಧಿಕಾರಿಗಳನ್ನು ಹೆಚ್ಚುವರಿ ಸೆಕ್ಟರ್ ಅಧಿಕಾರಿಗಳನ್ನು ವಿವಿಧ ಪ್ರದೇಶದ ಸ್ಥಳಗಳಿಗೆ ನಿಯೋಜಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ.