ಕರ್ನಾಟಕ

karnataka

By ETV Bharat Karnataka Team

Published : May 18, 2024, 11:24 AM IST

ETV Bharat / state

ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರು ಅಲರ್ಟ್​; ಮಹಿಳೆಯರ ರಕ್ಷಣೆಗೆ ಕಾರ್ಯಾಚರಣೆಗಿಳಿಯಲಿದೆ ಚೆನ್ನಮ್ಮ ಪಡೆ - Chennamma Squad

ಅವಳಿ ನಗರದಲ್ಲಿ ಕ್ರಿಮಿನಲ್ ಚಟುಚಟಿಕೆ ಹಾಗೂ ಮಹಿಳೆಯರ ರಕ್ಷಣೆಗೆ ವಿಶೇಷ ಚೆನ್ನಮ್ಮ ಪಡೆ ಮತ್ತೆ ಕಾರ್ಯಾಚರಣೆಗಿಳಿಯಲಿದೆ.

chennamma squad
ಚೆನ್ನಮ್ಮ ಪಡೆ (ETV Bharat)

ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ - ಧಾರವಾಡ ಅವಳಿನಗರದಲ್ಲಿ ಇತ್ತೀಚೆಗೆ ನಡೆದ ಯುವತಿಯರ ಕೊಲೆ ಪ್ರಕರಣಗಳ ಬೆನ್ನಲ್ಲೇ ಪೊಲೀಸ್​​ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಮಹಿಳೆಯರಿಗೆ ಭದ್ರತೆಯ ಜೊತೆಗೆ, ಅವರಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಮುಂದಾಗಿದೆ.

ಕಾನೂನುಬಾಹಿರ ಚಟುವಟಿಕೆ ಹಾಗೂ ಮಹಿಳಾ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಮತ್ತೆ ಚೆನ್ನಮ್ಮ ಪಡೆ ರಚನೆಯಾಗಿದೆ. ಮಹಿಳೆಯರಿಗೆ ರಕ್ಷಣೆ ಹಾಗೂ ಧೈರ್ಯ ತುಂಬುವ ಸದುದ್ದೇಶದಿಂದ ಈ ಪಡೆಯು ಕಾರ್ಯಾಚರಣೆ ನಡೆಸಲಿದೆ. ಈಗಾಗಲೇ ಜನನಿಬಿಡ ಪ್ರದೇಶದಲ್ಲಿ ಮಹಿಳೆಯರ ಆಪ್ತ ಸಮಾಲೋಚನೆ, ಅವರ ಕುಂದುಕೊರತೆಗಳನ್ನು ಆಲಿಸಲು ಚೆನ್ನಮ್ಮ ಪಡೆಯನ್ನು ರಚಿಸಲಾಗಿದೆ. ಪುಂಡಪೋಕರಿಗಳು, ರೋಡ್ ರೋಮಿಯೋಗಳು ಹಾಗೂ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಸಮರ ಸಾರಲು ಇಂತಹದೊಂದು ಕಾರ್ಯಪಡೆ ತಯಾರಾಗಿದೆ.

ಚೆನ್ನಮ್ಮ ಪಡೆ (ETV Bharat)

ಹುಬ್ಬಳ್ಳಿ - ಧಾರವಾಡ ನಗರ ವ್ಯಾಪ್ತಿಯಲ್ಲಿ ಚೆನ್ನಮ್ಮ ಪಡೆಯನ್ನು ರಚಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕಾರ್ಯರೂಪಕ್ಕೆ ತರಲಾಗಿದೆ. ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡವು ಮಹಿಳೆಯರ ಭದ್ರತೆ ಮತ್ತು ರಕ್ಷಣೆ ಅಷ್ಟೇ ಅಲ್ಲದೆ, ಪುಂಡರು ಹಾಗೂ ಯುವತಿಯರನ್ನು ಚುಡಾಯಿಸುವವರನ್ನು ಸದೆಬಡಿಯಲಿದೆ. ನಗರದಲ್ಲಿ ಪೆಟ್ರೊಲಿಂಗ್ ಮಾಡುತ್ತ ನಿಗಾ ವಹಿಸುವುದಲ್ಲದೇ, ಸಾರ್ವಜನಿಕರು ಮತ್ತು ಶಾಲಾ ಕಾಲೇಜು ಮಕ್ಕಳಿಗೆ ಜಾಗೃತಿಯನ್ನೂ ಸಹ ಮೂಡಿಸಲಾಗುತ್ತಿದೆ.

ಕಮೀಷನರ್ ಹೇಳಿದ್ದೇನು?:ಈ ಕುರಿತು ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ, ''ಚೆನ್ನಮ್ಮ ಪಡೆ ಈ ಹಿಂದೆಯೂ ಕಾರ್ಯಾಚರಣೆ ಮಾಡಿದೆ. ಆದರೆ, ಇತ್ತೀಚಿಗೆ ಸ್ಥಗಿತಗೊಂಡಿತ್ತು. ಈಗ ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಮಹಿಳೆಯರು, ಮಕ್ಕಳು, ಶಾಲಾ‌ ಕಾಲೇಜು ವಿದ್ಯಾರ್ಥಿಗಳ ಕಡೆ ವಿಶೇಷ ಗಮನಹರಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿ ಇದರ ಕರ್ತವ್ಯ ನಿರ್ವಹಿಸಲಿದ್ದಾರೆ'' ಎಂದು ಮಾಹಿತಿ ನೀಡಿದರು.

ಅವಳಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಮಹಿಳೆಯರ ರಕ್ಷಣೆಗೆ ಪೊಲೀಸ್​​ ಕಮೀಷನರೇಟ್ ಮುಂದಾಗಿರುವುದು ವಿಶೇಷವಾಗಿದೆ. ಅಪರಾಧ ಪ್ರಮಾಣ ತಗ್ಗಿಸುವ ಜೊತೆಗೆ ಮತ್ತಷ್ಟು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಚೆನ್ನಮ್ಮ ಖಾಕಿ ಪಡೆ ಸಜ್ಜಾಗಿರುವುದು ಜನರಿಗೆ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ ಅಂಜಲಿ ಕೊಲೆ ಆರೋಪಿ ಬಂಧನ: ರೈಲಿನಿಂದ ಬಿದ್ದು, ತಲೆ ಮುಖಕ್ಕೆ ಗಾಯ - Anjali Murder Accused Arrested

ABOUT THE AUTHOR

...view details