ಕರ್ನಾಟಕ

karnataka

ETV Bharat / state

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್​; ಬೊಮ್ಮಾಯಿ ಪುತ್ರನಿಗೆ ಶಿಗ್ಗಾಂವಿ ಟಿಕೆಟ್​, ಚನ್ನಪಟ್ಟಣ ಅಭ್ಯರ್ಥಿ​ ಸಸ್ಪೆನ್ಸ್​

ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಶಿಗ್ಗಾಂವಿಯಿಂದ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ.

By ETV Bharat Karnataka Team

Published : 5 hours ago

Updated : 5 hours ago

ಶಿಗ್ಗಾಂವಿಯಿಂದ ಬೊಮ್ಮಾಯಿ ಪುತ್ರ ಕಣಕ್ಕೆ
ಶಿಗ್ಗಾಂವಿಯಿಂದ ಬೊಮ್ಮಾಯಿ ಪುತ್ರ ಕಣಕ್ಕೆ (ETV Bharat)

ಬೆಂಗಳೂರು:ಪ್ರತಿಷ್ಠೆಯ ಕಣವಾಗಿರುವ ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಶಿಗ್ಗಾಂವಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಮತ್ತು ಸಂಡೂರಿನಲ್ಲಿ ಬಂಗಾರು ಹನಮಂತು ಅವರನ್ನು ಕಣಕ್ಕೆ ಇಳಿಸುವುದಾಗಿ ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಆದರೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಮಾತ್ರ ಘೋಷಣೆಯಾಗಿಲ್ಲ. ಈ ಕ್ಷೇತ್ರದ ಟಿಕೆಟ್​ ಯಾರಿಗೆ ಎಂಬ ಕುತೂಹಲ ಮೂಡಿಸಿದೆ.

ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಇಂದು ವಯನಾಡು ಲೋಕಸಭಾ ಮತ್ತು ಕರ್ನಾಟಕ ಸೇರಿ ಹಲವು ರಾಜ್ಯ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಂಗಾರು ಹನಮಂತು (ETV Bharat)

ಕರ್ನಾಟಕ ಉಪಚುನಾವಣೆ:ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಬಿಜೆಪಿ ನೀಡಿದೆ. ಹಾಗೆಯೇ ಸಂಡೂರು ಟಿಕೆಟ್ ಅನ್ನು ಬಂಗಾರು ಹನಮಂತು ಅವರಿಗೆ ಘೋಷಿಸಲಾಗಿದೆ.

ಭರತ್ ಬೊಮ್ಮಾಯಿ (ETV Bharat)

ಶಿಗ್ಗಾಂವಿಯಿಂದ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದರು. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಸಂಸದರಾಗಿ ಆಯ್ಕೆ ಆದರು. ಆ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಶಿಗ್ಗಾಂವಿ ಕ್ಷೇತ್ರ ತೆರವಾಗಿತ್ತು. ಇದೀಗ ಅವರ ಪುತ್ರ ಭರತ್​ಗೆ ಪಕ್ಷದ ಟಿಕೆಟ್ ಸಿಕ್ಕಿದೆ.

ಇನ್ನು ಈ.ತುಕಾರಾಂ ಬಳ್ಳಾರಿ ಸಂಸದರಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಸಂಡೂರು ಕ್ಷೇತ್ರ ತೆರವಾಗಿತ್ತು. ಇದೀಗ ಬಿಜೆಪಿ ಎಸ್​ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿರುವ ಬಂಗಾರು ಹನಮಂತುಗೆ ಟಿಕೆಟ್ ಘೋಷಣೆಯಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನಮಂತು ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ ಉಪ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಇವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಸಂಡೂರು ಬಿಜೆಪಿ ಟಿಕೆಟ್‌ ರೇಸ್‌ನಲ್ಲಿ ಕೆ.ಎಸ್.ದಿವಾಕರ್ ಅವರ ಹೆಸರು ಕೂಡ ಮುಂಚೂಣಿಯಲ್ಲಿತ್ತು. ಆದರೆ ಕೊನೆಯದಾಗಿ ಬಂಗಾರು ಹನಮಂತುಗೆ ಪಕ್ಷ ಮಣೆ ಹಾಕಿದೆ.

ಹಾಗೆಯೇ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನವ್ಯಾ ಹರಿದಾಸ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಪ್ರಿಯಾಂಕ್ ಗಾಂಧಿ ವಾದ್ರಾ ಕಣಕ್ಕಿಳಿಯುತ್ತಿದ್ದಾರೆ.

ಬಿಜೆಪಿ ಟಿಕೆಟ್ ಘೋಷಣೆ (BJP)

ಇನ್ನು ಅಸ್ಸೋಂ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಘಡ್, ಕೇರಳ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೂ ಕೂಡ ಶನಿವಾರ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಜಾರ್ಖಂಡ್ ವಿಧಾನಸಭೆ ಚುನಾವಣೆಗೂ ಕೇಸರಿ ಪಡೆ ತನ್ನ ಹುರಿಯಾಳುಗಳನ್ನು ಅಖಾಡಕ್ಕಿಳಿಸಿದೆ. ಉಪಚುನಾವಣೆಗೆ ನವೆಂಬರ್ 13 ರಂದು ಮತದಾನ ನಡೆಯಲಿದ್ದು, ನ.23ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ಟಿಕೆಟ್ ಘೋಷಣೆ (BJP)

ಇದನ್ನೂ ಓದಿ:ಜೆಡಿಎಸ್ ಚನ್ನಪಟ್ಟಣ ಸೀಟು ಬಿಟ್ಟು ಕೊಡ್ತಾರಂತೆ, ಇಷ್ಟು ವೀಕ್ ಆಗ್ತಾರೆ ಅಂತ ತಿಳಿದುಕೊಂಡಿರಲಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

Last Updated : 5 hours ago

ABOUT THE AUTHOR

...view details