ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿದೆ ರಾಜ್ಯದ ಏಕೈಕ ಎಮ್ಮೆ ತಳಿ ಸಂವರ್ಧನಾ ಕೇಂದ್ರ - BUFFALO BREEDING CENTER

ಧಾರವಾಡ ತಾಲೂಕಿ‌ನ ತೇಗೂರು ಗ್ರಾಮದಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದು ರಾಜ್ಯದಲ್ಲಿರುವ ಏಕೈಕ ಎಮ್ಮೆ ತಳಿ ಸಂವರ್ಧನಾ ಕೇಂದ್ರವಾಗಿದೆ. ಈ ಕುರಿತ ವರದಿ ಇಲ್ಲಿದೆ.

ಎಮ್ಮೆ ತಳಿ ಸಂವರ್ಧನಾ ಕೇಂದ್ರ
ಎಮ್ಮೆ ತಳಿ ಸಂವರ್ಧನಾ ಕೇಂದ್ರ (ETV Bharat)

By ETV Bharat Karnataka Team

Published : Jan 11, 2025, 5:55 PM IST

ಧಾರವಾಡ: ಎಮ್ಮೆ ತಳಿ ಸಂವರ್ಧನಾ ಕೇಂದ್ರವನ್ನು ಧಾರವಾಡ ತಾಲೂಕಿ‌ನ ತೇಗೂರು ಗ್ರಾಮದಲ್ಲಿ ಸ್ಥಾಪಿಸಲಾಗಿದೆ. 1910ರಲ್ಲಿ ಜಾನುವಾರು ಕ್ಷೇತ್ರವೆಂದು ಶುರುವಾದ ಈ ಕೇಂದ್ರವು 1976ರಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿತು.

ಇಲ್ಲಿ ಕೃಷ್ಣವ್ಯಾಲಿ ಎಂಬ ಸ್ಥಳೀಯ ತಳಿಯನ್ನು ಸಂರಕ್ಷಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಏಕೈಕ ಎಮ್ಮೆ ತಳಿ ಸಂವರ್ಧನಾ ಕೇಂದ್ರ ಇದಾಗಿದೆ. 2019ರ ಜಾನುವಾರು ಗಣತಿ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 2 ಲಕ್ಷ ಜಾನುವಾರುಗಳಿದ್ದು, ಇದರಲ್ಲಿ ಸುಮಾರು 50 ಸಾವಿರ ಎಮ್ಮೆಗಳಿವೆ. ಉಳಿದಂತೆ ಆಕಳು, ಆಡು ಸೇರಿದಂತೆ ವಿವಿಧ ಪ್ರಬೇಧದ ಜಾನುವಾರಗಳು ಇವೆ.

ಎಮ್ಮೆ ತಳಿ ಸಂವರ್ಧನಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ (ETV Bharat)

ರಾಜ್ಯದ ವಿವಿಧ ಭಾಗಗಳಲ್ಲಿ ಬರಗಾಲ, ಅತಿವೃಷ್ಟಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭಗಳಲ್ಲಿ ಕೇವಲ ಕೃಷಿಗೆ ಮಾತ್ರ ಅವಲಂಬಿತರಾಗದೆ ಇತರ ಕೃಷಿ ಉಪಕಸುಬುಗಳಾದ ಎಮ್ಮೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮುಂತಾದ ಕ್ರಮಗಳನ್ನು ಕೈಗೊಳ್ಳುವುದರಿಂದ ಇದು ರೈತರಿಗೆ ಆರ್ಥಿಕವಾಗಿ ಸಹಾಯಕವಾಗಲಿದೆ. ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಹಾಲು ಉತ್ಪಾದನೆಗೆ ಹೆಚ್ಚು ಅವಕಾಶವಿದೆ.

ಎಮ್ಮೆತಳಿ ಸಂವರ್ಧನಾ ಕೇಂದ್ರದ ವಿವರ : ಎಮ್ಮೆ ತಳಿ ಸಂವರ್ಧನಾ ಕೇಂದ್ರದ ಜಾನುವಾರುಗಳ ಆಹಾರಕ್ಕೆ ಅನುಕೂಲವಾಗುವಂತೆ ನೀರಾವರಿ ಆಶ್ರಯದ 53 ಎಕರೆ ಪ್ರದೇಶದಲ್ಲಿ ಮತ್ತು ಮಳೆಯಾಶ್ರಿತ 51 ಎಕರೆ ಪ್ರದೇಶದಲ್ಲಿ ಮೇವು ಬೆಳೆಯಲಾಗುತ್ತದೆ. ಜಾನುವಾರುಗಳನ್ನು ಮೇಯಿಸಲು 126.09 ಎಕರೆಯ ವಿಸ್ತೀರ್ಣದ ಪ್ರದೇಶವನ್ನು ಕಾಯ್ದಿರಿಸಲಾಗಿದೆ. 41 ಎಕರೆ ವಿಸ್ತೀರ್ಣದಲ್ಲಿ ಕೆರೆ, ಬಾವಿ, ಟ್ರೆಂಚ್‍ಗಳನ್ನು ಕೂಡ ನಿರ್ಮಿಸಲಾಗಿದೆ.

ಕೇಂದ್ರದ ಮೂಲ ಧ್ಯೇಯೋದ್ದೇಶ : ರಾಜ್ಯ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಮುಖ್ಯ ಉದ್ದೇಶವೆಂದರೆ ರಾಜ್ಯದ ಘನೀಕೃತ ವೀರ್ಯ ಸಂಸ್ಕರಣಾ ಕೇಂದ್ರಗಳಿಗೆ ಉತ್ಕೃಷ್ಟ ಹಾಲಿನ ಇಳುವರಿ ಹೊಂದಿದ ಎಮ್ಮೆಗಳಿಗೆ ಜನಿಸಿದ ಗಂಡು ಎಮ್ಮೆ ಕರು ಅಥವಾ ಕೋಣ ಕರುಗಳನ್ನು ನೀಡುವುದು.

ನಂತರ ಈ ಕೋಣಗಳಿಂದ ವೀರ್ಯವನ್ನು ಸಂಗ್ರಹಿಸಿ ಸಂಸ್ಕರಿಸಿದ ವೀರ್ಯ ಕಣಗಳನ್ನು ರಾಜ್ಯದ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಿಗೆ, ಕೃತಕ ಗರ್ಭಧಾರಣೆ ಮಾಡಿಸಲು ಉಪಯೋಗಿಸಲಾಗುತ್ತಿದೆ. ಆದರಿಂದ ಇದು ರಾಜ್ಯದ ಏಕೈಕ ಮಾತೃ ಕೋಣ ಉತ್ಪಾದನಾ ಸಂಸ್ಥೆಯಾಗಿದೆ. ಹೆಚ್ಚಿನ ಇಳುವರಿ ಬರುವ ಸೂಪರ್ ಹೈಬ್ರಿಡ್ ನೇಪಿಯರ್, ಗಿನಿಹುಲ್ಲು, ಗ್ರೇಝಿಂಗ್‍ಗಿನಿ, ಮೆಕ್ಕೆಜೋಳ, ಅಲಸಂದೆ, ಸುಬಾಬುಲ್ಸ್ ಮುಂತಾದ ಮೇವಿನ ಬೆಳೆಗಳನ್ನು ಬೆಳೆದು ನಿಯಮಿತವಾಗಿ ಜಾನುವಾರುಗಳಿಗೆ ನೀಡಲಾಗುತ್ತದೆ.

ಹೈನೋದ್ಯಮದಲ್ಲಿ ಆಸಕ್ತರಿಗೆ ಅಧಿಕ ಇಳುವರಿ ನೀಡುವ ಮೇವಿನ ಬೀಜ, ಬೇರು ಮತ್ತು ಕಾಂಡಗಳನ್ನು ಇಲಾಖೆ ನಿಗದಿಪಡಿಸಿದ ದರದಲ್ಲಿ ವಿತರಿಸಲಾಗುತ್ತದೆ ಮತ್ತು ಹೆಚ್ಚುವರಿಯಾಗಿ ಉಳಿದ ಹಸಿರು ಮೇವನ್ನು ರಸಮೇವನ್ನಾಗಿ ಪರಿವರ್ತಿಸಿ ಬೇಸಿಗೆ ಹಾಗೂ ಮೇವು ಅಭಾವದ ಸಂದರ್ಭಗಳಲ್ಲಿ ಜಾನುವಾರುಗಳಿಗೆ ನೀಡಲಾಗುತ್ತದೆ. ಕ್ಷೇತ್ರದಲ್ಲಿ ಎರೆಹುಳು ಗೊಬ್ಬರ ತಯಾರಿಸುವ ಘಟಕವಿದ್ದು, ಪ್ರಾತ್ಯಕ್ಷಿಕೆಯೊಂದಿಗೆ ಆಸಕ್ತರಿಗೆ ವಿವರಿಸಲಾಗುತ್ತದೆ.

2019-20ನೇ ಸಾಲಿನಲ್ಲಿ ಅಳುವಿನಂಚಿನಲ್ಲಿರುವ ದೇಶಿ ಆಕಳು ತಳಿಯಾದ ಕೃಷ್ಣವ್ಯಾಲಿ ಜಾನುವಾರುಗಳನ್ನು ಜಾನುವಾರು ಸಂವರ್ಧನಾ ಕೇಂದ್ರ ಮುನಿರಾಬಾದ್​​ನಿಂದ ತೇಗೂರು ಕ್ಷೇತ್ರಕ್ಕೆ ವರ್ಗಾಯಿಸಿ ತಳಿ ಸಂರಕ್ಷಣಾ ಯೋಜನೆಯನ್ನು ಮುಂದುವರಿಸಲಾಗುತ್ತಿದೆ.

2022-23ನೇ ಸಾಲಿನಲ್ಲಿ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಹಂದಿ ಉತ್ಪಾದನಾ ಘಟಕವನ್ನು ತೇಗೂರಿನಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿ ಪ್ರಮುಖ ಮಾಂಸ ಹಾಗೂ ಮರಿ ಉತ್ಪಾದನೆಯಲ್ಲಿ ಉತ್ಕೃಷ್ಟವಾದ ವಿದೇಶಿ ಹಂದಿ ತಳಿಗಳಾದ ಯಾರ್ಕಶೈರ್, ಡ್ಯೂರಾಕ್ ಮತ್ತು ಲ್ಯಾಂಡ್ ರೇಸ್​ ಹಂದಿಗಳನ್ನು ಸಾಕಣೆ ಮಾಡಲಾಗುತ್ತದೆ.

ಆಸಕ್ತ ಹಂದಿ ಸಾಕಣಿಕೆದಾರರಿಗೆ ಇಲ್ಲಿ ಬೆಳೆಸಿದ 3 ರಿಂದ 4 ತಿಂಗಳ ಶುದ್ಧ ಹಾಗೂ ಮಿಶ್ರತಳಿ ಹಂದಿ ಮರಿಗಳನ್ನು ರೋಗ ಮುಂಜಾಗ್ರತಾ ಲಸಿಕೆ ಹಾಗೂ ಜಂತುನಾಷಕ ಔಷಧಿಗಳನ್ನು ನೀಡಿದ ನಂತರ ಸಾಕಣೆಗೆ ಇಲಾಖೆ ನಿಗದಿಪಡಿಸಿದ ದರಗಳಲ್ಲಿ ವಿತರಿಸಲಾಗುತ್ತದೆ.

ಕಿತ್ತೂರು ಕರ್ನಾಟಕ ಭಾಗದಲ್ಲಿ ಹಂದಿ ಸಾಕಾಣಿಕೆಗೆ ನಿರುದ್ಯೋಗ ಯುವಕ ಮತ್ತು ಯುವತಿಯರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದು, ಆನೇಕ ಹಂದಿ ಫಾರ್ಮ್​ಗಳು ಪ್ರಾರಂಭವಾಗಿವೆ. ಹಂದಿಮರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಬೇಡಿಕೆಯನ್ನು ಪೂರೈಸಲು ನಮ್ಮ ಹಂದಿ ಉತ್ಪಾದನಾ ಘಟಕದಲ್ಲಿ ಮಾತೃ ಹಂದಿಗಳ ಸಾಮರ್ಥ್ಯ ಹೆಚ್ಚಿಸಿ ಹಂದಿಮರಿಗಳನ್ನು ಉತ್ಪಾದಿಸಿ ಆಸಕ್ತರಿಗೆ ನೀಡಿದಲ್ಲಿ ನಿರುದ್ಯೋಗಿ ಯುವಕರಿಗೆ ಪ್ರೋತ್ಸಾಹ ನೀಡಿ ಅವರ ಆರ್ಥಿಕ ಸಾಮರ್ಥ್ಯ ಹೆಚ್ಚಿಸಬಹುದು. ಆದ್ದರಿಂದ ಮಾತೃ ಹಂದಿಗಳ ಪಾಲನೆಗಾಗಿ ಎರಡು ಹೆಚ್ಚುವರಿ ಹಂದಿ ಶೆಡ್​ಗಳನ್ನು ಅನುದಾನದ ಲಭ್ಯತೆಯ ಅನುಗುಣವಾಗಿ ನಿರ್ಮಿಸಲಾಗುತ್ತದೆ.

ಈ ಕುರಿತು ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, "1910ರಲ್ಲಿ ಇದು ಒಂದು ಫಾರ್ಮ್ ಆಗಿ ಸ್ಥಾಪನೆಯಾಗಿತ್ತು. 1976ರಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿತು. ಇಲ್ಲಿ ಹಲವಾರು ಬ್ರೀಡಿಂಗ್​ ಅನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ತಳಿ ಸಂರಕ್ಷಣೆ ಬ್ರೀಡಿಂಗ್ ಅನ್ನು ಮಾಡಲಾಗುತ್ತಿದೆ. ಕೃಷ್ಣವ್ಯಾಲಿ ಎಂಬ ಸ್ಥಳೀಯ ತಳಿಯನ್ನು ಇಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ" ಎಂದು ತಿಳಿಸಿದರು.

ಮುಖ್ಯ ಪಶುವೈದ್ಯಾಧಿಕಾರಿ ಅನಿಲಕುಮಾರ ಶೀಲವಂತಮಠ ಮಾತನಾಡಿ, "ನಾವು ಇಲ್ಲಿ ಮುರ್ರಾ ಮತ್ತು ಸೂರ್ತಿ ತಳಿಗಳ ಎಮ್ಮೆಗಳನ್ನು ಸಾಕಾಣಿಕೆ ಮಾಡುತ್ತಿದ್ದೇವೆ. ಮುರ್ರಾ ಮತ್ತು ಸೂರ್ತಿ ತಳಿಯ ಕೋಣಗಳನ್ನು ವೀರ್ಯ ಸಂಸ್ಕರಣಾ ಕೇಂದ್ರಕ್ಕೆ ಕಳುಹಿಸುತ್ತಿದ್ದೇವೆ. 2019 ರಲ್ಲಿ ಕೃಷ್ಣವ್ಯಾಲಿ ಜಾನುವಾರುಗಳನ್ನು ಇಲ್ಲಿಗೆ ತರಲಾಗಿದೆ. ಇವು ಅಳಿವಿನ ಅಂಚಿನಲ್ಲಿರುವ ಜಾನುವಾರುಗಳಾಗಿವೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಖಾನಾಪುರದಲ್ಲಿದೆ ರಾಜ್ಯದಲ್ಲೇ ಮಾದರಿ ತೋಟಗಾರಿಕಾ ಕ್ಷೇತ್ರ: ವಿದೇಶಿ ಹಣ್ಣು, ಪಾಲಿಹೌಸ್​​ನಲ್ಲಿ ಅಂಜೂರ, ಮೆಣಸು ಪ್ರಯೋಗ

ABOUT THE AUTHOR

...view details