ಬೆಂಗಳೂರು:ಮಳೆಯಿಂದಾಗಿ ರಾಜ್ಯದ ಜನರ ಜೀವನ ಬೀದಿಗೆ ಬಂದಿದ್ದರೂ, ಜನರ ಜತೆ ನಿಲ್ಲಬೇಕಾದ ಸಿಎಂ ಸಿದ್ದರಾಮಯ್ಯ ರಾಣಿಯ ಹಿಂದೆ ಸಾಮಂತರು ಹೋಗಿ ನಿಲ್ಲುವಂತೆ ಸೋನಿಯಾ ಗಾಂಧಿ ಹಿಂದೆ ಹೋಗಿ ನಿಂತಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಟೀಕಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನರ ಜೀವನ ಬೀದಿಗೆ ಬಂದಿದೆ. ಇಲ್ಲಿನ ಜನರಿಗೆ ಸ್ಪಂದಿಸುವ ಬದಲು, ಸೋನಿಯಾ ಗಾಂಧಿ ಸ್ವಾಗತ ಮಾಡೋದೇ ದೊಡ್ಡದಾಗಿದೆ. ಈ ಸರ್ಕಾರ ಯಾಕಿರಬೇಕು? ಬದುಕಿದ್ದೂ ಸತ್ತಂತೆ ಇದೆ ಎಂದು ವಾಗ್ದಾಳಿ ನಡೆಸಿದರು.
136 ಶಾಸಕರು ಇರುವ ಸಿಎಂ, ಡಿಕೆಶಿಯಂಥ ಪ್ರಬಲರು ಇರುವಾಗ ಈಗ ಚನ್ನಪಟ್ಟಣದಲ್ಲಿ ದುರ್ಬಲರು ಅಂತ ಅವರೇ ಒಪ್ಪಿಕೊಂಡಿದ್ದಾರೆ. ನಾನೇ ಅಭ್ಯರ್ಥಿ ಅಂತಿದ್ರು ಡಿಕೆಶಿ, ಈಗ ಯಾರಾಗ್ತಾರೆ ಅಭ್ಯರ್ಥಿ?. ಈಗ ಡಿಕೆಶಿ, ಸಿಪಿವೈ ಅವರನ್ನು ಮುಂದಿಟ್ಕೊಂಡು ಅಭ್ಯರ್ಥಿ ಆಗ್ತಾರೋ? ಅಥವಾ ಸಿಪಿವೈ ಅವರನ್ನು ಅಭ್ಯರ್ಥಿ ಮಾಡಿ ತಾವು ಅಸಹಾಯಕರು ಅಂತ ತೋರಿಸಿಕೊಳ್ತಾರೋ ನೋಡೋಣ ಎಂದು ಹರಿಹಾಯ್ದರು.
ಚನ್ನಪಟ್ಟಣ ಹೆಚ್.ಡಿ ಕುಮಾರಸ್ವಾಮಿ ಕ್ಷೇತ್ರ, ನಾವು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಇರಲಿಲ್ಲ. ಅದು ಸ್ವಾಭಾವಿಕವಾಗಿ ಹೆಚ್ಡಿಕೆ ಅವರೇ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ನಾವು ಯೋಗೇಶ್ವರ್ ಪರ ಪಕ್ಷದ ನೆಲೆಯಲ್ಲಿ ಹೋಗಿ ಮಾತಾಡಿದ್ದೆವು. ನಾವು ಬ್ಯುಸಿನೆಸ್ ಉದ್ದೇಶಕ್ಕೆ ಸಿಪಿವೈ ಪರ ನಿಂತಿರಲಿಲ್ಲ, ಅವರು ಈಗ ನಮ್ಮ ಪಕ್ಷ ಬಿಟ್ಟಿದ್ದಾರೆ, ಅದರ ಬಗ್ಗೆ ಮತ್ತೆ ಹೆಚ್ಚು ಮಾತನಾಡಲ್ಲ. ಸಿ.ಪಿ. ಯೋಗೇಶ್ವರ್ ಬಿಜೆಪಿ ತೊರೆದರು ಎನ್ನುವ ಮಾತ್ರಕ್ಕೆ ನಾವು ಅಧೈರ್ಯಗೊಂಡಿಲ್ಲ, ಉಪ ಚುನಾವಣೆಯನ್ನು ನಾವು ಸಮರ್ಥವಾಗಿ ಎದುರಿಸಲಿದ್ದೇವೆ ಎಂದು ಸಿ ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:'ಚನ್ನಪಟ್ಟಣ ನನ್ನ ಕ್ಷೇತ್ರ ಎಂಬ ಪ್ರತಿಷ್ಠೆ ಬಿಟ್ಟು ಕಾಂಗ್ರೆಸ್ ಎದುರಿಸಬೇಕು': ಹೆಚ್ಡಿಕೆಗೆ ಪ್ರೀತಂ ಗೌಡ ಟಕ್ಕರ್