ಕರ್ನಾಟಕ

karnataka

ಬೆಂಗಳೂರು: ಗಾಳಿ, ಮಳೆಯಿಂದ ಬಿದ್ದ ಮರ ತೆರವಿಗೆ 28 ತಂಡ ರಚಿಸಿದ ಪಾಲಿಕೆ - BBMP Tree Clearance Teams

By ETV Bharat Karnataka Team

Published : Sep 1, 2024, 9:07 AM IST

ಗಾಳಿ ಮತ್ತು ಮಳೆಯಿಂದಾಗಿ ಬಿದ್ದ ಮರಗಳನ್ನು ತ್ವರಿತವಾಗಿ ನಿರ್ವಹಿಸಲು ಹಾಗೂ ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 28 ತಂಡಗಳನ್ನು ರಚಿಸಿದೆ.

BBMP NEW TEAM
ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಬಿದ್ದ ಮರಗಳ ತೆರವು ಕಾರ್ಯ (ETV Bharat)

ಬೆಂಗಳೂರು:ನಗರದಲ್ಲಿ ಗಾಳಿ ಮತ್ತು ಮಳೆಯಿಂದಾಗಿ ಬಿದ್ದ ಮರಗಳನ್ನು ತ್ವರಿತವಾಗಿ ನಿರ್ವಹಿಸಲು ಹಾಗೂ ತೆರವುಗೊಳಿಸಲು ಬಿಬಿಎಂಪಿ 28 ಸಿಬ್ಬಂದಿಗಳ ತಂಡಗಳನ್ನು ರಚಿಸಿದೆ. ಎಂಟು ಸದಸ್ಯರು ಮತ್ತು ತೆರವು ವಾಹನವನ್ನು ಈ ತಂಡ ಒಳಗೊಂಡಿದೆ.

ಬಿದ್ದ ಮರಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು, ಮಳೆಗಾಲದಲ್ಲಿ ದುರ್ಬಲವಾಗುವ ಹಳೆ ಮರಗಳನ್ನು ಹಾಗೂ ದುರ್ಬಲವಾದ ರೆಂಬೆ, ಕೊಂಬೆಗಳನ್ನು ಗುರುತಿಸುವುದು ಈ ತಂಡಗಳ ಕೆಲಸ. ಮಳೆಗಾಲದಲ್ಲಿ ಗಾಳಿಗೆ ಮರಗಳು ಬೀಳುವುದರಿಂದ ಸಾರ್ವಜನಿಕರು, ವಾಹನ ಸವಾರರಿಗೆ ಸಮಸ್ಯೆೆಯಾಗುತ್ತಿದ್ದು, ಆಸ್ತಿ ಪಾಸ್ತಿಗಳಿಗೂ ಹಾನಿಯಾಗುತ್ತಿದೆ. ಹೀಗಾಗಿ ಮರಗಳ ವ್ಯವಸ್ಥಿತ ನಿರ್ವಹಣೆಗೆ ಈ ತಂಡಗಳನ್ನು ರಚಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.

ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಬಿದ್ದ ಮರಗಳ ತೆರವು ಕಾರ್ಯ (ETV Bharat)

ತಂಡಗಳು ಮರಗಳ ಹಾಗೂ ರೆಂಬೆ/ಕೊಂಬೆಗಳನ್ನು ತೆರವುಗೊಳಿಸುವುದಕ್ಕೆೆ ಅವಶ್ಯವಿರುವ ಎಲ್ಲಾ ಉಪಕರಣಗಳೊಂದಿಗೆ ನೈಪುಣ್ಯತೆ ಹೊಂದಿರುವಂತಹ ಸಿಬ್ಬಂದಿಯನ್ನು ಹೊಂದಿರಲಿವೆ. ಕತ್ತರಿಸಲಾಗುವ ಮರಗಳು ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು ಒಂದು ಬೃಹತ್​ ವಾಹನವನ್ನು ಚಾಲಕರ ಸಮೇತ ನಿಯೋಜಿಸಲಾಗುತ್ತಿದೆ.

ಎಲ್ಲಾ ಸಾರ್ವಜನಿಕರ ದೂರುಗಳನ್ನು, ಸಹಾಯ ಆ್ಯಪ್‌ನಲ್ಲಿ, ಕಂಟ್ರೋಲ್​ ರೂಂಗೆ ಹಾಗೂ ನೇರವಾಗಿ ಬರುವ ದೂರುಗಳಿಗೆ ತುರ್ತಾಗಿ ಸ್ಪಂದಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಪ್ರತಿನಿತ್ಯ ತಂಡಗಳು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರವಾರು ಪ್ರತಿಯೊಂದು ರಸ್ತೆಯಲ್ಲಿ ತಪಾಸಣೆ ನಡೆಸಿ ರಸ್ತೆ ಬದಿ ಬಿದ್ದಿರುವ, ಅಪಾಯದ ಸ್ಥಿತಿಯಲ್ಲಿ ಇರುವ ಮರಗಳನ್ನು ಅವುಗಳ ಕೊಂಬೆಗಳನ್ನು ತೆರವುಗೊಳಿಸಲಿದೆ.

ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಬಿದ್ದ ಮರಗಳ ತೆರವು ಕಾರ್ಯ (ETV Bharat)

ವಲಯದ ಯಾವ ಪ್ರದೇಶದಲ್ಲಿ ಹೆಚ್ಚಿನ ಗಾಳಿ, ಮಳೆ ಬರುತ್ತದೆ ಹಾಗೂ ತುರ್ತಾಗಿ ಅವಶ್ಯವಿದ್ದ ಕಡೆಗಳಲ್ಲಿಯೂ ಸಹ ವಲಯದ ಜಂಟಿ ಆಯುಕ್ತರು, ವಲಯ ಮಟ್ಟದ ಅರಣ್ಯಾಧಿಕಾರಿಗಳು ಹಾಗೂ ಕೇಂದ್ರ ಕಚೇರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸುವ ಕಾರ್ಯಗಳನ್ನು ನಿರ್ವಹಿಸಲಿದೆ. ಪ್ರತಿದಿನ ನಿರ್ವಹಿಸಿದ ಕೆಲಸ ಕಾರ್ಯಗಳ ಸಂಬಂಧ ದಾಖಲಾತಿ ವಹಿಯನ್ನು ನಿರ್ವಹಿಸುವ ಕಾರ್ಯವನ್ನು ಮಾಡಲಿದೆ.

ಮರಗಳ ವ್ಯವಸ್ಥಿತ ನಿರ್ವಹಣೆಯ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ತಂಡಗಳ ವಿರುದ್ಧ ಯಾವುದೇ ದೂರುಗಳು ಬಂದಲ್ಲಿ ವಲಯ ಮಟ್ಟದ ಅರಣ್ಯಾಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ. ರಸ್ತೆ ಬದಿ ಬಿದ್ದಿರುವ ಡೆಬ್ರಿಸ್‌ನ್ನು ತೆರವುಗೊಳಿಸುವ ಜೊತೆಗೆ ಮಳೆ ಹಾನಿಯಿಂದ ಯಾವುದೇ ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗದಂತೆ ಕರ್ತವ್ಯ ನಿರ್ವಹಿಸಲಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ.

"ಗಾಳಿ ಮಳೆಯಿಂದಾಗಿ ಮರಗಳು, ರೆಂಬೆ ಕೊಂಬೆಗಳು ಮುರಿದು ಬೀಳುವುದರಿಂದ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಸಾರ್ವಜನಿಕರಿಗೆ ಸಮಸ್ಯೆೆಯಾಗುತ್ತಿದ್ದು, ಈ ಎಲ್ಲಾ ಸಮಸ್ಯೆೆಗಳನ್ನು ನಿರ್ವಹಿಸುವ ಸಲುವಾಗಿ ಈ ತಂಡಗಳನ್ನು ರಚಿಸಲಾಗಿದೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಬಿದ್ದ ಮರಗಳ ತೆರವು ಕಾರ್ಯ (ETV Bharat)

ಇದನ್ನೂ ಓದಿ:ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಭಾನುವಾರ ಪರೀಕ್ಷೆ: ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ಕಡ್ಡಾಯ - BMTC Conductor Recruitment

ABOUT THE AUTHOR

...view details