ಕರ್ನಾಟಕ

karnataka

ETV Bharat / state

ಮತ್ತೆ ತಾರಕಕ್ಕೇರಿದ ಬಿಜೆಪಿ ಬಣಬಡಿದಾಟ : ಅಧ್ಯಕ್ಷ ಸ್ಥಾನಕ್ಕೆ ಭಿನ್ನಮತೀಯ ಗುಂಪಿನಿಂದ ಅಭ್ಯರ್ಥಿ ಹಾಕಲು ನಿರ್ಧಾರ - ಯತ್ನಾಳ್ - BJP DISSIDENT GROUP

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರ ವಿರುದ್ದ ಸೆಡ್ಡು ಹೊಡೆದಿರುವ ಭಿನ್ನಮತೀಯ ನಾಯಕರು ಎರಡು ಮೂರು ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.

Basanagouda-patil-yatnal
ಬಸನಗೌಡ ಪಾಟೀಲ್ ಯತ್ನಾಳ್ (ETV Bharat)

By ETV Bharat Karnataka Team

Published : Jan 31, 2025, 10:47 PM IST

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದ್ದು, ನಾಯಕರು ಸಭೆ ನಡೆಸುವ ಮೂಲಕ ಆರೋಪ - ಪ್ರತ್ಯಾರೋಪ ಮಾಡುವುದರಲ್ಲಿ ತೊಡಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರ ವಿರುದ್ಧ ಸೆಡ್ಡು ಹೊಡೆದಿರುವ ಭಿನ್ನಮತೀಯ ನಾಯಕರು, ಎರಡು-ಮೂರು ದಿನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.

ಸದಾಶಿವನಗರದಲ್ಲಿರುವ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ಇಂದು ಸಭೆ ನಡೆಸಿದ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕರಾದ ಬಿ. ಪಿ ಹರೀಶ್, ಹೊಳಲ್ಕೆರೆ ಚಂದ್ರಪ್ಪ, ಕುಮಾರ ಬಂಗಾರಪ್ಪ ಮತ್ತಿತರ ಮುಖಂಡರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.

ನಂತರ ಬಿಜೆಪಿಯ ಭಿನ್ನಮತೀಯರು ಹಾಲಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ವಿರುದ್ಧ ತಮ್ಮ ಬಣದಿಂದ ಅಭ್ಯರ್ಥಿ ಕಣಕ್ಕಿಳಿಸಲು ಒಮ್ಮತದ ತೀರ್ಮಾನ ಮಾಡಿದ್ದಾರೆ. ವಿಜಯೇಂದ್ರ ವಿರುದ್ದ ತಮ್ಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲೇಬೇಕು. ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನು ದೆಹಲಿಯಲ್ಲಿ ಮತ್ತೊಂದು ಸಭೆ ಸೇರಿ ಪ್ರಕಟಿಸುವ ನಿರ್ಧಾರ ತೆಗೆದುಕೊಂಡಿದೆ ಎಂಬುದು ತಿಳಿದುಬಂದಿದೆ.

ನಮ್ಮ ಬಣದಿಂದ ಅಭ್ಯರ್ಥಿ ಖಚಿತ:ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಅಧ್ಯಕ್ಷರ ಚುನಾವಣೆಯಲ್ಲಿ ನಮ್ಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತ. ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಮುಖ್ಯವಲ್ಲ. ನಮಗೆ ಎಷ್ಟು ಮತ ಬರುತ್ತವೆ ಎಂಬುದು ಮುಖ್ಯ. ಆದರೆ ಚುನಾವಣೆ ನಡೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದಲ್ಲಿ ಕೆಲವರು ಏಕಪಕ್ಷೀಯ ಧೋರಣೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕಾತಿ, ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳಲ್ಲಿ ವಿಜಯೇಂದ್ರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದು ಮೊದಲು ಹೋಗಬೇಕು ಎಂದು ಕಿಡಿಕಾರಿದರು.

ಎರಡು ದಿನದಲ್ಲಿ ನಾವು ದೆಹಲಿಯಲ್ಲಿ ಸಭೆ ಸೇರಲು ತೀರ್ಮಾನಿಸಿದ್ದೇವೆ. ಇಲ್ಲಿನ ಬೆಳವಣಿಗೆಗಳ ಕುರಿತಂತೆ ವರಿಷ್ಠರ ಗಮನಕ್ಕೆ ತರುತ್ತೇವೆ. ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ಅವರು ಬದಲಾವಣೆಯಾಗಬೇಕು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

ವಿಜಯೇಂದ್ರ ವಿರುದ್ಧದ ಸ್ಪರ್ಧೆಗೆ ಹಲವರು ಸಜ್ಜು:ನಮ್ಮಲ್ಲಿ ವಿಜಯೇಂದ್ರ ವಿರುದ್ದ ಸ್ಪರ್ಧೆ ಮಾಡಲು ಹಲವರು ಸಜ್ಜಾಗಿದ್ದಾರೆ. ನನ್ನನ್ನು ಸೇರಿದಂತೆ ಯಾರು ಬೇಕಾದರೂ ಆಗಬಹುದು. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪಕ್ಷ ಉಳಿಯಬೇಕಾದರೆ ಕೆಲವು ಸಂದರ್ಭದಲ್ಲಿ ನಾವು ತ್ಯಾಗ ಮಾಡಬೇಕಾಗುತ್ತದೆ. ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಇರಬಾರದು ಎಂದು ಹೇಳಿದರು.

ಯಡಿಯೂರಪ್ಪ ಇದ್ದರೂ ಇಲ್ಲದಿದ್ದರೂ ಬಿಜೆಪಿ ಉಳಿಯುತ್ತೆ:ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಇಲ್ಲ ಎನ್ನುವ ಕಾಲ ಬದಲಾಗಿದೆ. ಕೆಲವರು ಯಡಿಯೂರಪ್ಪ ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯುವುದೇ ಇಲ್ಲ ಎಂದು ಹೇಳುತ್ತಾರೆ. ಯಡಿಯೂರಪ್ಪ, ನಾನೂ ಸೇರಿದಂತೆ ಯಾರೇ ಇದ್ದರೂ ಬಿಟ್ಟರೂ ಬಿಜೆಪಿ ಉಳಿಯುತ್ತದೆ. ಏಕೆಂದರೆ ಇದು ಕಾರ್ಯಕರ್ತರ ಪಕ್ಷ. ಬರುವವರು ಬರುತ್ತಾರೆ. ಹೋಗುವವರು ಹೋಗುತ್ತಾರೆ. ಏಕ ವ್ಯಕ್ತಿಯಿಂದ ಪಕ್ಷ ಉಳಿಯಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ನಾವು ವರಿಷ್ಠರ ಗಮನಕ್ಕೆ ತರುತ್ತೇವೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡುತ್ತೇವೆ. ಬಿಜೆಪಿ ಸ್ವಚ್ಛವಾಗಬೇಕು ಎಂಬ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು ಖಚಿತ. ಅಲ್ಲಿಯ ತನಕ ಕೆಲವರು ಸಮಾಧಾನದಿಂದ ಕಾಯಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ :ಮತ್ತೊಂದು ಆಯಾಮ ಪಡೆದುಕೊಳ್ಳುತ್ತಿದೆಯೇ ರಾಜ್ಯ ಬಿಜೆಪಿಯಲ್ಲಿನ ಅಂತಃಕಲಹ? - INFIGHTING IN BJP

ABOUT THE AUTHOR

...view details