ಕರ್ನಾಟಕ

karnataka

By ETV Bharat Karnataka Team

Published : 17 hours ago

ETV Bharat / state

'ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ': ಪುನೀತ್ ದೇವಸ್ಥಾನ ಉದ್ಘಾಟಿಸಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾವುಕ - Puneeth Rajkumar Temple

ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಪ್ರಕಾಶ್​​ ಎಂಬ ಅಪ್ಪು ಅಭಿಮಾನಿ ಮನೆಯೆದುರು ಪುನೀತ್​​ ರಾಜ್​​ಕುಮಾರ್​​​ ದೇಗುಲ ನಿರ್ಮಾಣಗೊಂಡಿದೆ. ಇಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಪುನೀತ್ ದೇವಸ್ಥಾನ, ಮೂರ್ತಿ ಉದ್ಘಾಟಿಸಿದರು. ಅಭಿಮಾನಿಗಳ ಅಭಿಮಾನ ಕಂಡು ಅಶ್ವಿನಿ ಭಾವುಕರಾದರು.

Puneeth Rajkumar temple in Haveri
ಹಾವೇರಿಯಲ್ಲಿ ನಿರ್ಮಾಣಗೊಂಡಿದೆ ಪುನೀತ್ ರಾಜ್‍ಕುಮಾರ್ ದೇವಸ್ಥಾನ (ETV Bharat)

ಹಾವೇರಿ: ಪುನೀತ್​​ ರಾಜ್​​ಕುಮಾರ್​​​. ಇಹಲೋಕ ತ್ಯಜಿಸಿ ದಿನಗಳುರುಳಿದರೂ ಕನ್ನಡಿಗರ ಹೃದಯದಲ್ಲಿ ಭದ್ರಸ್ಥಾನ ಗಿಟ್ಟಿಸಿಕೊಂಡಿರುವ ಚಂದನವನದ ನಗುಮೊಗದ ಒಡೆಯ. ಅಪ್ಪು ಹೆಸರಿನಲ್ಲಿ ಮಾನವೀಯ ಕಾರ್ಯಗಳು ಮುಂದುವರಿದಿವೆ. ಅಪ್ಪಟ ಅಭಿಮಾನಿಗಳು ಸದಾ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದೀಗ ಅಂಥದ್ದೇ ಒಂದು ಸುಂದರ ಕ್ಷಣಕ್ಕೆ ಹಾವೇರಿ ಸಾಕ್ಷಿಯಾಗಿದೆ.

ಪವರ್​ ಸ್ಟಾರ್​ ಪುನೀತ್​ ರಾಜ್​​​ಕುಮಾರ್​ ಅವರ ಅಪ್ಪಟ ಅಭಿಮಾನಿಯೋರ್ವರು ನಿರ್ಮಿಸಿರುವ 'ಪುನೀತ್ ದೇವಸ್ಥಾನ'ವನ್ನು ಇಂದು ಪತ್ನಿ ಅಶ್ವಿನಿ ಪುನೀತ್​​ ರಾಜ್‍ಕುಮಾರ್ ಉದ್ಘಾಟಿಸಿದ್ದಾರೆ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಈ ದೇವಾಲಯವಿದೆ. ಪ್ರಕಾಶ್​​ ಎಂಬ ಅಪ್ಪು ಅಭಿಮಾನಿಯ ಮನೆಯೆದುರು ಈ ದೇವಸ್ಥಾನ ನಿರ್ಮಿಸಲಾಗಿದೆ.

ಹಾವೇರಿಯಲ್ಲಿ ನಿರ್ಮಾಣಗೊಂಡಿದೆ ಪುನೀತ್ ರಾಜ್‍ಕುಮಾರ್ ದೇವಸ್ಥಾನ (ETV Bharat)

ಅಭಿಮಾನಿ ಮಗಳ ನಾಮಕರಣ: ಜನಮೆಚ್ಚಿದ ನಟರಿಂದ ತಮ್ಮ ಮಕ್ಕಳ ನಾಮಕರಣ ಮಾಡಿಸಬೇಕೆಂಬುದು ಅದೆಷ್ಟೋ ಅಭಿಮಾನಿಗಳ ಆಶಯ. ಅದರಂತೆ ಅಪ್ಪು ಅಭಿಮಾನಿ ಪ್ರಕಾಶ್​​ ಮತ್ತು ದೀಪಾ ದಂಪತಿಯ ಮಗಳಿಗೆ 'ಅಪೇಕ್ಷಾ' ಎಂದು ಅಶ್ವಿನಿ ಪುನೀತ್​ ರಾಜ್​ಕುಮಾರ್​​ ನಾಮಕರಣ ಮಾಡಿದ್ದಾರೆ. ಅಪ್ಪು ಕೆಲಸಗಳನ್ನು ಸದ್ಯ ಅಶ್ವಿನಿಯವರು ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಂತೆ, ದೇಗುಲ ನಿರ್ಮಿಸಿರುವ ಅಭಿಮಾನಿ ಪ್ರಕಾಶ್ ಪುತ್ರಿ ಮಗಳ ನಾಮಕರಣ ಮಾಡುವ ಮೂಲಕ ಅಶ್ವಿನಿ ತಮ್ಮ ಪತಿಯಂತೆ ಅಭಿಮಾನಿಯ ಕನಸು ನನಸು ಮಾಡಿದ್ದಾರೆ.

ಅಶ್ವಿನಿ ಭಾವುಕ: ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್​​ಕುಮಾರ್, ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ. ಅಭಿಮಾನಿಯ ಸ್ವಂತ ಜಾಗದಲ್ಲಿ ಅಪ್ಪು ದೇವಸ್ಥಾನ ನಿರ್ಮಾಣಗೊಂಡಿದೆ. ಇಂಥ ಅಭಿಮಾನಿ ಇರುವುದು ನಮ್ಮ ಪುಣ್ಯ. ಅಪ್ಪು ಅವರ ದೇವಸ್ಥಾನ ನಿರ್ಮಾಣಗೊಂಡಿರುವುದು ಬಹಳ ಖುಷಿ ತಂದಿದೆ ಎಂದು ಭಾವುಕರಾದರು.

ಹಾವೇರಿಯಲ್ಲಿ ನಿರ್ಮಾಣಗೊಂಡಿದೆ ಪುನೀತ್ ರಾಜ್‍ಕುಮಾರ್ ದೇವಸ್ಥಾನ (ETV Bharat)

ಕಾರ್ಯಕ್ರಮದಲ್ಲಿ ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ ಭಾಗಿಯಾಗಿದ್ದರು. ಅಭಿಮಾನಿ ಸ್ವಂತ ಹಣ ಹಾಕಿ ದೇಗುಲ ನಿರ್ಮಿಸಿದ್ದಾರೆ. ನಿರ್ಮಾಣ ಕಾರ್ಯಕ್ಕೆ 10 ಲಕ್ಷ ರೂಪಾಯಿ ವೆಚ್ಚವಾಗಿದೆ. ವಿವಿಧ ಕಲಾತಂಡಗಳು, ಕುಂಬಮೇಳ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದವು. ಜಿಲ್ಲೆಯ ಅಪ್ಪು ಅಭಿಮಾನಿಗಳು ಭಾಗಿಯಾಗುವ ಮೂಲಕ ಸಂಭ್ರಮವನ್ನು ದ್ವಿಗುಣಗೊಳಿಸಿದರು.

ಇದನ್ನೂ ಓದಿ:ಬಿಗ್ ಬಾಸ್ ಹೊಸ ಅಧ್ಯಾಯ: ಸುದೀಪ್​ ಸೂತ್ರಧಾರಿ, ವೀಕ್ಷಣೆಗೆ ನೀವ್​ ರೆಡಿನಾ? - Bigg Boss Kannada

ಈ ಹಿಂದೆ ಮಾತನಾಡಿದ್ದ ಕಾರ್ಯಕ್ರಮ ಸಂಘಟಕರು ಹಾಗೂ ಅಪ್ಪು ದೇವಸ್ಥಾನ ನಿರ್ಮಿಸಿರುವ ಪ್ರಕಾಶ್​​, ಸೆಪ್ಟೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ದೇವಸ್ಥಾನದ ಉದ್ಘಾಟನೆ ಹಾಗೂ ಪುನೀತ್ ರಾಜ್​​​ಕುಮಾರ ಪುತ್ಥಳಿ ಅನಾವರಣ ನಡೆಯಲಿದೆ. ಅಶ್ವಿನಿ ಪುನೀತ್ ರಾಜ್​​​ಕುಮಾರ್​​ ಅವರು ಉದ್ಘಾಟಿಸಲಿದ್ದಾರೆ. ಪುತ್ಥಳಿ ಅನಾವರಣ ನಂತರ ಮಗಳ ನಾಮಕರಣ ಮಾಡಲಿದ್ದಾರೆ. ಬಳಿಕ, ಶಾಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ನಟ, ಸಹನಟರು, ರಾಜಕಾರಣಿಗಳು ಮತ್ತು ಹಲವು ಮಠಾಧೀಶರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭರದ ಸಿದ್ಧತಾ ಕಾರ್ಯಗಳು ನಡೆದಿವೆ ಎಂದು ತಿಳಿಸಿದರು.

ಇದನ್ನೂ ಓದಿ:ಎಸ್‌ಪಿ ಬಾಲಸುಬ್ರಹ್ಮಣ್ಯಂ ಜೊತೆ ಕೆಲಸ ಮಾಡುವ ಕನಸು ಕಂಡಿದ್ದ ಪುನೀತ್​ ರಾಜ್​​ಕುಮಾರ್​: 'ಮಾಯಾ ಬಜಾರ್‌'ನಲ್ಲಿ ನನಸು - Puneeth Rajkumar

ABOUT THE AUTHOR

...view details