ಕರ್ನಾಟಕ

karnataka

ಅಡಿಕೆ ಧಾರಣೆ ಕುಸಿತ: ಶಿವಮೊಗ್ಗ ಅಡಿಕೆ ಬೆಳೆಗಾರರು ಕಂಗಾಲು - arecanut price fall

By ETV Bharat Karnataka Team

Published : Aug 30, 2024, 10:20 PM IST

ಮಾರಾಟಕ್ಕೆಂದು ಉತ್ತರ ಭಾರತಕ್ಕೆ ಕೊಂಡೊಯ್ದ ಅಡಿಕೆಯನ್ನು ಗುಣಮಟ್ಟದ ಕೊರತೆಯ ನೆಪ ಹೇಳಿ ಖರೀದಿಸದೇ ತಿರಸ್ಕರಿಸಲಾಗುತ್ತಿದೆ. ಈ ಹಿನ್ನೆಲೆ ಅಡಿಕೆ ದರ ಕುಸಿತವಾಗಿದ್ದು, ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.

ಅಡಕೆ ಧಾರಣೆ ಕುಸಿತ
ಅಡಕೆ ಧಾರಣೆ ಕುಸಿತ (ETV Bharat)

ಅಡಕೆ ಧಾರಣೆ ಕುಸಿತ (ETV Bharat)

ಶಿವಮೊಗ್ಗ: ಕಳೆದ ತಿಂಗಳು ಕ್ವಿಂಟಲ್‌ಗೆ 54 ದಿಂದ 56 ಸಾವಿರದಷ್ಟಿದ್ದ ಅಡಿಕೆ ದರ ಈಗ ಕ್ವಿಂಟಲ್‌ಗೆ 45 ದಿಂದ 46 ಸಾವಿರಕ್ಕೆ ಕುಸಿದಿದೆ. ಕೆಲವು ಖೇಣಿದಾರರು ಕಳಪೆ ಗುಣಮಟ್ಟದ ಅಡಿಕೆಯನ್ನು ಸಗಟು ಖರೀದಿದಾರರಿಗೆ ಪೂರೈಕೆ ಮಾಡುತ್ತಿರುವದರಿಂದ ದರದಲ್ಲಿ ಕುಸಿತ ಉಂಟಾಗಿದೆ. ಇದರಿಂದ ಪ್ರಾಮಾಣಿಕ ಖೇಣಿದಾರರು ಮತ್ತು ರೈತರಿಗೆ ಭಾರೀ ನಷ್ಟ ಉಂಟಾಗುತ್ತಿದೆ.

ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ (ಮ್ಯಾಮ್ಕೋಸ್‌) ಮತ್ತು ಅಡಿಕೆ ಮಂಡಿಗಳಿಂದ ಮಾರಾಟಕ್ಕೆಂದು ಉತ್ತರ ಭಾರತಕ್ಕೆ ಕೊಂಡೊಯ್ದ ಅಡಿಕೆಯನ್ನು ಗುಣಮಟ್ಟದ ಕೊರತೆಯ ನೆಪ ಹೇಳಿ ವಾಪಸ್​ ಕಳುಹಿಸಲಾಗಿದೆ. ಅಡಿಕೆ ವಾಪಸ್ ಬಂದ ಕಾರಣಕ್ಕೆ ಮ್ಯಾಮ್ಕೋಸ್‌ ತನ್ನ ಸದಸ್ಯರಿಗೆ ಪತ್ರವನ್ನು ಬರೆದಿದೆ. ಪಾನ್‌ ಮಸಾಲ ಹಾಗೂ ಗುಟ್ಕಾ ಕಂಪನಿಗಳು ಉತ್ತಮ ಗುಣಮಟ್ಟದ ಅಡಿಕೆ ಖರೀದಿಗೆ ಆದ್ಯತೆ ನೀಡುತ್ತಿವೆ. ಇದನ್ನು ಅರಿತು ಸದಸ್ಯರು, ಉತ್ತಮ ಗುಣಮಟ್ಟ ದ ಅಡಿಕೆ ಪೂರೈಸಬೇಕೆಂದು ವಿನಂತಿಸಿಕೊಂಡಿದೆ.

ಮ್ಯಾಮ್ಕೋಸ್‌ ಉಪಾಧ್ಯಕ್ಷ ಮಹೇಶ್ ಈಟಿವಿ ಭಾರತ್​ ಜೊತೆ ಮಾತನಾಡಿ, ಏರುಗತಿಯಲ್ಲಿದ್ದ ಅಡಿಕೆ ಧಾರಣೆ ಕಳೆದ ತಿಂಗಳಿನಿಂದ ಕುಸಿತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಡಿಕೆಯ ಗುಣಮಟ್ಟದಲ್ಲಿ ವ್ಯತ್ಯಾಸ. ವಿಶೇಷವಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ಉತ್ತರ ಭಾರತದ ಡಿ.ಎಸ್. ಕಾನ್ಪುರದವರು ಶಿವಮೊಗ್ಗಕ್ಕೆ ಬಂದು ಅಡಿಕೆ ಮಾನದಂಡ ಪರಿಶೀಲಿಸಿದರು. ಅವರು ಗುಣಮಟ್ಟದ ಅಡಿಕೆ ಖರೀದಿ ಮಾಡಿದ್ದರು. ಈ ವೇಳೆ ಒಳ್ಳೆಯ ದರ ಅಡಿಕೆ ಬೆಳೆಗಾರರಿಗೆ ಸಿಕ್ಕಿತ್ತು. ಒಳ್ಳೆ ಅಡಿಕೆಯಲ್ಲಿ ಸೆಕೆಂಡ್ ಕ್ವಾಲಿಟಿ ಅಡಿಕೆಯನ್ನು ಬೆರೆಸಿ ವ್ಯಾಪಾರ ಮಾಡುತ್ತಿರುವುದು ಅಡಿಕೆ ಧಾರಣೆ ಕುಸಿತಕ್ಕೆ ಕಾರಣವಾಗಿದೆ ಎಂದರು.

ಇದರಿಂದ ಮ್ಯಾಮ್ಕೋಸ್‌, ಸದಸ್ಯರಿಗೆ ಉತ್ತಮವಾದ ಮತ್ತು ಕಲಬೆರಕೆ ಮಾಡದ ಅಡಿಕೆಯನ್ನು ತನ್ನಿ ಎಂದು ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಅಡಿಕೆ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ನಮ್ಮ ಸಂಘದಲ್ಲಿ ವ್ಯವಹರಿಸುವ ಎಲ್ಲರಿಗೂ ಉತ್ತಮವಾದ ಧಾರಣೆ ಕೊಡಿಸುವುದು ಮ್ಯಾಮ್ಕೋಸ್‌ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ರೈತರು ಗುಣಮಟ್ಟದ ಅಡಿಕೆ, ಗೊರಬಲು ಪಾಲಿಶ್​ ಮಾಡಿದ ಅಡಿಕೆಯನ್ನು ಬೇರೆ ಬೇರೆ ಮಾಡಿದಾಗ ಸರಿಯಾದ ಬೆಲೆ‌ ಕೊಡುವ ವ್ಯವಸ್ಥೆಯನ್ನು ಮಾಡಲು ಮ್ಯಾಮ್ಕೋಸ್‌ ಪ್ರಯತ್ನಿಸುತ್ತದೆ ಎಂದು ತಿಳಿಸಿದರು.

ಅಡಿಕೆ ಬೆಳೆಗಾರ ಪುಟ್ಟಣ್ಣ ಗೌಡ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ದೀರ್ಘಾವಧಿ ಬೆಳೆಯಾಗಿ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಬೆಲೆಯು ಮಧ್ಯವರ್ತಿಗಳ ಕೈಗೆ ಸಿಕ್ಕಿ ಏರಿಳಿತವಾಗುತ್ತಿದೆ. ಕಳೆದ ಒಂದು ತಿಂಗಳಿಂದ ಅಡಿಕೆ ಧಾರಣೆ ಕುಸಿತವಾಗುತ್ತಿರುವುದು ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಅಡಿಕೆಗೆ 50 ಸಾವಿರದಷ್ಟು ದರ ಇದ್ದರೆ ಬೆಳೆಗಾರರು ನಿರಾಂತಕವಾಗಿ ಇರಬಹುದು. ಇಲ್ಲಿ ಬೆಳೆಗಾರರು ಕಳಪೆ ಗುಣಮಟ್ಟದ ಅಡಿಕೆ ಬೆಳೆಯುವುದಿಲ್ಲ. ಮಧ್ಯವರ್ತಿಗಳು ಕಳಪೆ ಗುಣಮಟ್ಟದ ಅಡಿಕೆ ಬೆರೆಸುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ:ಮಂಗಳೂರಿನಿಂದ ಅಮೆರಿಕಕ್ಕೆ ಹೋಗುವ ಗಣಪ: 94 ವರ್ಷದಿಂದ ಗಣೇಶನ ಮೂರ್ತಿ ತಯಾರಿಸುತ್ತಿರುವ ಒಂದೇ ಕುಟುಂಬ - Ganesha Murti

ABOUT THE AUTHOR

...view details