ಕರ್ನಾಟಕ

karnataka

ಆನೇಕಲ್ ಪುರಸಭಾ ಸದಸ್ಯ ರವಿ ಬರ್ಬರ ಕೊಲೆ: ತನಿಖೆ ಚುರುಕುಗೊಳಿಸಿದ ಪೊಲೀಸರು - Municipal Councilor Murder

By ETV Bharat Karnataka Team

Published : Jul 25, 2024, 10:36 PM IST

ಆನೇಕಲ್ ಪುರಸಭಾ ಸದಸ್ಯನನ್ನು ಮೂರ್ನಾಲ್ಕು ಜನರಿದ್ದ ಗುಂಪೊಂದು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದೆ.

ravi murder
ರವಿ (ETV Bharat)

ಆನೇಕಲ್ (ಬೆಂಗಳೂರು):ಆನೇಕಲ್ಪುರಸಭಾ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಪುರಸಭೆಯ 22ನೇ ವಾರ್ಡ್​​ನ ಸದಸ್ಯ ರವಿ (30) ಕೊಲೆಯಾದವರು. ಆನೇಕಲ್ ಪಟ್ಟಣದ ಬಹುದ್ದೂರ್​​ಪುರದ ಅವರ ಮನೆಯ ಸಮೀಪವೇ ರವಿ ಕೊಲೆ ನಡೆದಿದೆ.

ರವಿ (ETV Bharat)

ರಾತ್ರಿ ರವಿಯನ್ನು ವ್ಯಕ್ತಿಯೊಬ್ಬ ಮಾತನಾಡುವುದಿದೆ ಎಂದು ಮನೆಯಿಂದ ಹೊರಬರುವಂತೆ ಕರೆದಿದ್ದಾನೆ. ಹೊರಗಡೆ ಬರುತ್ತಿದ್ದಂತೆ ನಾಲ್ವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಆನೇಕಲ್ ಪೊಲೀಸರು ಸ್ಥಳಕ್ಕೆ ಬಂದು ರವಿಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಅದಾಗಲೇ ರವಿ ಕೊನೆಯುಸಿರೆಳೆದಿರುವ ಬಗ್ಗೆ ಆನೇಕಲ್ ಸಾರ್ವಜನಿಕ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರವಿ ಪುರಸಭಾ ಸದಸ್ಯನಾಗಿದ್ದರೂ ಬದುಕಿಗೆ ಸ್ಕ್ರಾಪ್ ವ್ಯವಹಾರ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ. ಜೊತೆಗೆ, ಒಂದಷ್ಟು ಹಣದ ವ್ಯವಹಾರವೂ ಇತ್ತು. 'ಗಜಶಿಲಾಪುರ' ಎಂಬ ಚಿತ್ರದಲ್ಲಿ ನಟನಾಗಿಯೂ ರವಿ ನಟಿಸಿದ್ದು, ಸಿನಿಮಾ ಇನ್ನೂ ತೆರೆಗೆ ಬರುವ ಮುನ್ನವೇ ಕೊಲೆಗೀಡಾಗಿದ್ದಾರೆ. ಮುಖ್ಯವಾಗಿ ಗುಜರಿ ವ್ಯವಹಾರ ಮಾಡಿಕೊಂಡಿದ್ದ ರವಿ ಇದರಿಂದಲೇ ಸ್ಕ್ರಾಪ್ ರವಿ ಎಂದೇ ಖ್ಯಾತಿಯಾಗಿದ್ದ. ಈ ನಡುವೆ ಎರಡು ಬಾರಿ ರವಿಯ ಮೇಲೆ ದಾಳಿಯಾಗಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಎಸ್​​ಪಿ ಸಿ.ಕೆ.ಬಾಬಾ, ''ರವಿಯನ್ನು ಮನೆಯಿಂದ ಹೊರಗೆ ಕರೆದು, ಮೂರ್ನಾಲ್ಕು ಮಂದಿ ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಆತ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಯಾರೆಂಬ ಸುಳಿವು ಸಿಕ್ಕಿದೆ. ತನಿಖೆಗೆ ವಿಶೇಷ ತಂಡಗಳು ರಚಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಕೆಲದಿನಗಳ ಹಿಂದೆ ಪ್ರಕರಣವೊಂದು ನಡೆದಿತ್ತು. ಅದರಲ್ಲಿನ ಆರೋಪಿಗಳು ರವಿ ಜೊತೆಗಿದ್ದು, ಈ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲು ಕ್ರಮ ವಹಿಸಲಾಗುವುದು'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಪಿಜಿಯೊಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ತನಿಖೆಗೆ ವಿಶೇಷ ತಂಡ ರಚನೆ - Murder Inside PG Accommodation

ABOUT THE AUTHOR

...view details