ನವಜಾತ ಶಿಶುಗಳಿಗೆ ಅಮೃತವಾದ 'ಅಮೃತಧಾರೆ ಯೋಜನೆ' (ETV Bharat) ಶಿವಮೊಗ್ಗ:ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅಮೃತವಿದ್ದಂತೆ. ಆದರೆ ಕೆಲ ತಾಯಂದಿರಿಗೆ ಎದೆ ಹಾಲು ಅನೇಕ ಕಾರಣಗಳಿಂದ ಉತ್ಪತ್ತಿ ಆಗುವುದಿಲ್ಲ. ಇದರಿಂದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.
ಇದನ್ನು ಮನಗಂಡ ರಾಜ್ಯ ಸರ್ಕಾರ ರಾಜ್ಯದ ಕೆಲ ಜಿಲ್ಲೆಯಲ್ಲಿ ನವಜಾತ ಶಿಶುಗಳಿಗಾಗಿಯೇ ಅಮೃತಧಾರೆ ಎಂಬ ಯೋಜನೆ ಜಾರಿ ಮಾಡಿದೆ. ಅದರಂತೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಮೆಗ್ಗಾನಗ ಬೋಧನಾ ಆಸ್ಪತ್ರೆಯಲ್ಲಿ ಅಮೃತಧಾರೆ ಯೋಜನೆ ಜಾರಿಗೊಳಿಸಿದೆ.
ಹಾಲು ಸಂಗ್ರಹಿಸಿ ವಿತರಣೆ:ಮೆಗ್ಗಾನ್ ಬೋಧನಾ ಆಸ್ಪತ್ರೆಯ ಶರಾವತಿ ವಿಭಾಗದಲ್ಲಿ ಯೋಜನೆ ಕಾರ್ಯಗತವಾಗುತ್ತಿದೆ. ಅಮೃತಧಾರೆ ಕೇಂದ್ರವು ತಾಯಿಯ ಎದೆ ಹಾಲು ಸಂಗ್ರಹಿಸುವ ಹಾಗೂ ವಿತರಿಸುವ ಕಾರ್ಯ ನಡೆಸುತ್ತಿದೆ. ಈ ಕೇಂದ್ರದಲ್ಲಿ ಮೂವರು ಸಹಾಯಕ ನರ್ಸ್ಗಳಿದ್ದಾರೆ. ಇವರು ಆಗ ತಾನೇ ಜನಿಸಿರುವ ಮಕ್ಕಳ ವಾರ್ಡ್ಗೆ ಹೋಗಿ ಎದೆ ಹಾಲು ಇಲ್ಲದೇ ಇರುವ ಹಾಗೂ ಹೆಚ್ಚಿನ ಎದೆ ಹಾಲು ಬರುವ ತಾಯಂದಿರನ್ನು ಸಂಪರ್ಕಿಸುತ್ತಾರೆ. ಯಾರಿಗೆ ಹೆಚ್ಚಿನ ಎದೆ ಹಾಲು ಬಂದು ತಮ್ಮ ಮಗುವಿಗೆ ಎದೆಹಾಲು ಉಣಿಸಿ ಉಳಿಯುತ್ತದೆಯೋ ಅಂತಹ ಹಾಲನ್ನು ಅವಶ್ಯಕತೆ ಇರುವ ಮಕ್ಕಳಿಗೆ ನೀಡಿ ಎಂದು ಮನವೊಲಿಸುತ್ತಾರೆ.
ಬಳಿಕ ಅವರನ್ನು ಅಮೃತಧಾರೆಯ ಕೇಂದ್ರಕ್ಕೆ ಕರೆತಂದು ಅವರಿಗೆ ಸಂಪೂರ್ಣ ಮಾಹಿತಿ ನೀಡಿ, ಅವರಿಂದ ಎದೆ ಹಾಲನ್ನು ಯಂತ್ರಗಳ ಮೂಲಕ ಪಡೆಯಲಾಗುತ್ತದೆ. ನಂತರ ಅದನ್ನು ಪಾಶ್ಚೀಕರಿಸಿ, ತಮ್ಮದೇ ಫ್ರಿಡ್ಜ್ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ನಂತರ ಯಾವ ತಾಯಿಗೆ ಎದೆ ಹಾಲು ಅವಶ್ಯಕತೆ ಇದೆಯೋ ಅವರಿಗೆ ನೀಡಲಾಗುತ್ತದೆ. ಇಲ್ಲಿ ಪ್ರತಿನಿತ್ಯ ಎಷ್ಟು ಹಾಲನ್ನು ಸಂಗ್ರಹಿಸಲಾಗುತ್ತದೆ, ಎಷ್ಟು ಹಾಲನ್ನು ವಿತರಿಸಲಾಗುತ್ತದೆ ಎಂಬ ಅಂಕಿಅಂಶವನ್ನು ದಾಖಲಿಸಲಾಗುತ್ತದೆ. ಕಳೆದ ತಿಂಗಳು ಸುಮಾರು 500 ಎಂ.ಎಲ್ನಷ್ಟು ಹಾಲು ಸಂಗ್ರಹಿಸಿ ವಿತರಿಸಲಾಗಿದೆ.
ಆಸ್ಪತ್ರೆ ಅಧೀಕ್ಷಕ ಡಾ.ತಿಮ್ಮಪ್ಪ ಪ್ರತಿಕ್ರಿಯೆ:"ಎದೆಹಾಲು ಸಂಗ್ರಹಣೆ ಮತ್ತು ವಿತರಣಾ ಕೇಂದ್ರ ನಮ್ಮಲ್ಲಿ ಪ್ರಾರಂಭವಾಗಿದೆ. ಎದೆ ಹಾಲು ನೀಡುವ ತಾಯಂದಿರನ್ನು ನಮ್ಮ ಅಮೃತಧಾರೆ ಕೇಂದ್ರಕ್ಕೆ ಕರೆದು ಅವರಿಗೆ ಕೆಲವೊಂದು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸಾದ ತಾಯಂದಿರಿಂದ ಎದೆ ಹಾಲನ್ನು ಪಡೆಯಲಾಗುತ್ತದೆ. ಈ ಹಾಲನ್ನು ಪಾಶ್ಚೀಕರಣ ಮಾಡಿ, ನಂತರ ಸಂಗ್ರಹಣೆ ಮಾಡಲಾಗುತ್ತದೆ".
"ಇಲ್ಲಿಂದ ಎದೆ ಹಾಲು ಅವಶ್ಯಕತೆ ಇರುವ ಮಕ್ಕಳಿಗೆ ನೀಡಲಾಗುತ್ತದೆ. ಅಮೃತಧಾರೆ ಕೇಂದ್ರವು ನವಜಾತ ಶಿಶುಗಳ ಪಾಲಿಗೆ ಅಮೃತದಂತೆ ಕೆಲಸ ಮಾಡುತ್ತಿದೆ. ಇದರಿಂದ ಎಲ್ಲಾ ಮಕ್ಕಳಿಗೂ ಅನೂಕುಲಕರವಾಗಿದೆ. ಎಲ್ಲರಿಗೂ ಉಚಿತವಾಗಿ ನೀಡಲಾಗುವುದು. ನಮ್ಮ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ 56-60 ಮಕ್ಕಳಿಗೆ ಹಾಲು ಇರುತ್ತದೆ. ಕೆಲವು ತಾಯಂದಿರಿಗೆ ಹಾಲು ಉತ್ಪಾದನೆ ಆಗುವುದಿಲ್ಲ. ಹೆಚ್ಚು ಹಾಲು ಉತ್ಪತ್ತಿಯಾಗುವ ತಾಯಂದಿರ ಮನವೊಲಿಸಿ, ಅವರಿಂದ ಹಾಲು ಪಡೆದು ಬೇರೆ ಮಕ್ಕಳಿಗೆ ನೀಡಲಾಗುತ್ತದೆ" ಎಂದರು.
ಎದೆ ಹಾಲು ನೀಡುವ ರಂಜಿತಾ ಬಾಯಿ 'ಈಟಿವಿ ಭಾರತ್' ಜೊತೆ ಮಾತನಾಡಿ, ಅಮೃತಧಾರೆಗೆ ಯಾವ ಕಾರಣಕ್ಕೆ ಹಾಲು ನೀಡುತ್ತಿದ್ದೇನೆ ಎಂಬುದನ್ನು ವಿವರಿಸಿದರು.''ನಮ್ಮದು ವಡ್ಡರಹಳ್ಳಿ ಗ್ರಾಮ. ನನಗೆ ಹೆಚ್ಚಿನ ಎದೆ ಹಾಲು ಬರುತ್ತಿತ್ತು. ಆಸ್ಪತ್ರೆಗೆ ಹೆರಿಗೆಂದು ದಾಖಲಾದಾಗ ಅಮೃತಧಾರೆಯ ನರ್ಸ್ ಬಂದು ಯಾರಿಗೆ ಹೆಚ್ಚಿಗೆ ಹಾಲು ಬರುತ್ತಿದೆ ಹಾಗೂ ಯಾರಿಗೆ ಹಾಲು ಬರುತ್ತಿಲ್ಲ ಎಂಬುದರ ಮಾಹಿತಿ ಪಡೆದುಕೊಂಡರು. ಈ ವೇಳೆ ನನಗೆ ಹೆಚ್ಚಿಗೆ ಹಾಲು ಬರುತ್ತಿರುವುದರಿಂದ ಪುಟ್ಟ ಮಕ್ಕಳಿಗೆ ಅನುಕೂಲಕರವಾಗುತ್ತದೆ ಎಂದು ಹೇಳಿದಾಗ, ನಾನು ಅಮೃತಧಾರೆ ಕೇಂದ್ರಕ್ಕೆ ಬಂದು ಹಾಲು ನೀಡಲು ಒಪ್ಪಿದೆ" ಎಂದು ಹೇಳಿದರು.
ಅಮೃತಧಾರೆಯಿಂದ ಸತತ 40 ದಿನಗಳ ಕಾಲ ಹಾಲು ಪಡೆದ ಶಿಲ್ಪ ಎಂಬವರು ಮಾತನಾಡಿ, "ನನಗೆ ಮಗು ಹುಟ್ಟಿದಾಗ ತೂಕ ಕೇವಲ 965 ಗ್ರಾಂ ಇತ್ತು. ಈಗ 1 ಕೆ.ಜಿ 370 ಗ್ರಾಂ ಆಗಿದೆ. ಮಗು ಹುಟ್ಟಿದಾಗಿನಿಂದ ಎದೆ ಹಾಲು ಬರುತ್ತಿರಲಿಲ್ಲ. ಈಗ ಎದೆ ಹಾಲನ್ನು ಅಮೃತಧಾರೆಯಿಂದ ಪಡೆದುಕೊಳ್ಳುತ್ತಿದ್ದೇನೆ. ಮಗುವಿಗೆ ಕಳೆದ 40 ದಿನಗಳಿಂದ ಅಮೃತಧಾರೆಯಿಂದಲೇ ಹಾಲು ನೀಡಲಾಗುತ್ತಿದೆ. ಇದರಿಂದ ನನ್ನ ಮಗುವಿಗೆ ಅನುಕೂಲವಾಗಿದೆ" ಎಂದರು.
ಇದನ್ನೂ ಓದಿ:ವಿಶ್ವ ಸ್ತನ್ಯಪಾನ ಸಪ್ತಾಹ; ನೀಗಿಸಬೇಕಿದೆ ಅಂತರ, ಬೆಂಬಲ ಪ್ರತಿಪಾದಿಸಿದ ಡಬ್ಲ್ಯೂಹೆಚ್ಒ - World Breastfeeding Week