ಬೆಂಗಳೂರು:ರಾಜಕೀಯ ಪ್ರಭಾವ ಬಳಸಿಕೊಂಡು ಶೈಕ್ಷಣಿಕ ಉದ್ದೇಶಕ್ಕೆ ನಗರದ ಎರಡು ಕಡೆಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ನಾಗರೀಕ ನಿವೇಶನಗಳನ್ನ (ಸಿಎ) ಹಂಚಿಕೆ ಮಾಡಿಕೊಂಡಿರುವ ಆರೋಪ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬಸ್ಥರ ವಿರುದ್ಧ ಕೇಳಿ ಬಂದಿದ್ದು, ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಸಿದ್ದಾರ್ಥ್ ವಿಹಾರ ಟ್ರಸ್ಟ್ ಹೆಸರಿನಲ್ಲಿ ಬಿಟಿಎಂ ಹಾಗೂ ಬಾಗಲೂರಿನಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಾಗರೀಕ ನಿವೇಶನದಡಿ 5 ಎಕರೆ ಸರ್ಕಾರಿ ಸ್ವತ್ತು ಪಡೆದುಕೊಂಡಿರುವ ಆರೋಪದಡಿ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಬಾಯಿ, ಪುತ್ರರಾದ ಪ್ರಿಯಾಂಕ್ ಖರ್ಗೆ, ರಾಹುಲ್ ಖರ್ಗೆ ಅಳಿಯ ಹಾಗೂ ಸಂಸದ ರಾಧಾಕೃಷ್ಣ, ಪ್ರಭಾವಕ್ಕೆ ಒಳಗಾಗಿ ಅಕ್ರಮದಲ್ಲಿ ಶಾಮೀಲಾಗಿರುವ ಸಚಿವ ಎಂ.ಬಿ.ಪಾಟೀಲ್ ಹಾಗೂ ಐಎಎಸ್ ಅಧಿಕಾರಿ ಸೆಲ್ವಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ವಂಚನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ, ಸರ್ಕಾರಿ ಭೂ ಕಬಳಿಕೆಗೆ ಸಂಚು ಮತ್ತು ಸರ್ಕಾರಿ ಭೂ ಕಬಳಿಕೆಗೆ ಸಹಕಾರದಡಿ ಪ್ರಕರಣ ದಾಖಲಿಸಬೇಕೆಂದು ಕೋರಿ 394 ಪುಟಗಳ ದಾಖಲೆ ಸಮೇತ ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರಾವ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಸಿದ್ದಾರ್ಥ್ ವಿಹಾರ ಟ್ರಸ್ಟ್ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹೆಸರಿನಲ್ಲಿದ್ದು, ಶೈಕ್ಷಣಿಕ ಉದ್ದೇಶಕ್ಕಾಗಿ 2014ರಲ್ಲಿ ಬಿಟಿಎಂ ಲೇಔಟ್ 4ನೇ ಹಂತದ 2ನೇ ಬ್ಲಾಕ್ನಲ್ಲಿ ಬಿಡಿಎಯಿಂದ 86,133 ಚದರ ಅಡಿ ಜಾಗವನ್ನ ನಾಗರಿಕ ನಿವೇಶನ (ಸಿಎ)ವನ್ನ 30 ವರ್ಷಗಳ ಗುತ್ತಿಗೆ ನೀಡಿ ಹಂಚಿಕೆ ಮಾಡಲಾಗಿತ್ತು. ಇದಾದ 10 ವರ್ಷಗಳ ಬಳಿಕ 2024ರ ಮಾರ್ಚ್ 11ರಂದು ಮತ್ತೆ ಶೈಕ್ಷಣಿಕ ಉದ್ದೇಶಕ್ಕಾಗಿ ಕೆಐಎಡಿಬಿಗೆ ಸಿಎ ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಕೆಐಡಿಬಿಯು ಅನುಮೋದಿಸಿ ಹೈಟೆಕ್ ಡಿಫೆನ್ಸ್ ಅಂಡ್ ಏರೋಸ್ಪೆಸ್ ಪಾರ್ಕ್ನ ಹಾರ್ಡ್ವೇ ಸೆಕ್ಟರ್ನಲ್ಲಿ 5 ಎಕರೆ ಜಮೀನು ಮಂಜೂರು ಮಾಡಿ ಅರ್ಜಿದಾರರಿಗೆ ಹಂಚಿಕೆ ಪತ್ರ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.