ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಎಐಸಿಸಿ ವಕ್ತಾರ ಸಂಕೇತ್ ಏಣಗಿ ರಾಜೀನಾಮೆ - Sanket Yenagi resign

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಖಂಡ ಸಂಕೇತ್ ಏಣಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

AICC spokesperson Sanket Yenagi
ಎಐಸಿಸಿ ವಕ್ತಾರ ಸಂಕೇತ್ ಏಣಗಿ

By ETV Bharat Karnataka Team

Published : Mar 17, 2024, 11:02 PM IST

ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಂಕೇತ್ ಏಣಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ರಾಜೀನಾಮೆ ಪತ್ರ ಕಳುಹಿಸಿದ ಅವರು, ರಾಜೀನಾಮೆ ಪತ್ರದಲ್ಲಿ ಕನ್ನಡ ರಂಗಭೂಮಿಯ ದಂತಕತೆ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಹಾಗೂ ಗೋಕಾಕ್ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶತಾಯುಷಿ ಡಾ. ಏಣಗಿ ಬಾಳಪ್ಪನವರ ಮೊಮ್ಮಗ ನಾನು. ವೃತ್ತಿಯಿಂದ ಭಾರತದ ಸರ್ವೋಚ್ಚ ನ್ಯಾಯಾಲಯದ ವಕೀಲನಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ, ತಮ್ಮ ಅಧ್ಯಕ್ಷತೆಯಲ್ಲಿ ಪಕ್ಷ ಸೇರಿದ್ದೆ ಎಂದಿದ್ದಾರೆ.

ಪಕ್ಷದ ವಕ್ತಾರನಾಗಿ ನೇಮಕವಾದ ನಂತರ ಪಕ್ಷದ ಹಲವಾರು ಅಂತರಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಪಕ್ಷನಿಷ್ಠೆ ಎಲ್ಲ ಹಂತದಲ್ಲೂ ಹಗಲಿರುಳು ತಮ್ಮೊಂದಿಗೆ ಮಿತ್ರತೆಯಿಂದ ನಿಂತು ಅತ್ಯಂತ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ, ಪರದೆಯ ಹಿಂದೆ ತಮ್ಮ ಹಾಗೂ ಪರದೆಯ ಮುಂದೆ ಪಕ್ಷದ ಸೇವೆಯನ್ನು ಶಕ್ತಿಮೀರಿ ಮಾಡಿದ್ದೇನೆ.

ಹಲವಾರು ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಸಹಸ್ರಾರು ಚರ್ಚೆಗಳಲ್ಲಿ ಹಾಗೂ ಹಲವಾರು ನ್ಯಾಯಾಲಯಗಳಲ್ಲಿ ಗೌರವಯುತವಾಗಿ ಪಾಲ್ಗೊಂಡು ಪಕ್ಷದ ತತ್ವ ಸಿದ್ಧಾಂತವನ್ನು, ನಿಲುವುಗಳನ್ನು ಹಾಗೂ ನಾಯಕರುಗಳನ್ನು ಪ್ರತಿಪಾದಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪಕ್ಷ ಅಧಿಕಾರದ ಗದ್ದುಗೆ ಏರಿದ ನಂತರದ ದಿನಗಳಲ್ಲಿ ನನ್ನ ಹಾಗೆ ಪಕ್ಷದ ಗೆಲುವಿಗೆ ಕಾರಣರಾದ ಸಹಸ್ರಾರು ಕಾರ್ಯಕರ್ತರ ಸೇವೆಯನ್ನು ಗುರುತಿಸುವ ಹಾಗೂ ಮಣ್ಣನೆ ನೀಡುವ ಯಾವುದೇ ಕನಿಷ್ಠ ಪ್ರಯತ್ನ ಈವರೆಗೂ ತಮ್ಮಿಂದಾಗಲಿ ಅಥವಾ ಪಕ್ಷದಿಂದಾಗಲಿ, ಎಂದೂ ಕಾಣದಿದ್ದದ್ದು ಅತ್ಯಂತ ನೋವಿನ ಸಂಗತಿ. ಇದು, ಪಕ್ಷದ ಗೆಲುವಿಗೆ ಕಾರಣರಾದ ಸಹಸ್ರಾರು ಕಾರ್ಯಕರ್ತರ ಅಳಲು ಕೂಡ. ಪಕ್ಷಕ್ಕೆ ಕಾರ್ಯಕರ್ತರು ಕೇವಲ ಚುನಾವಣೆ ಗೆಲ್ಲಲು, ಅಧಿಕಾರದ ಗದ್ದುಗೆ ಏರಲು ಮೆಟ್ಟಿಲಾಗಬಾರದಾಗಿತ್ತು. ಕಾರ್ಯಕರ್ತರ ಸೇವೆಯನ್ನು ಗುರುತಿಸುವ, ಅವರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಬೇಕಿತ್ತು ಎಂಬುದು ನನ್ನ ಅನಿಸಿಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಈವರೆಗೆ ತಮ್ಮಿಂದಾಗಲಿ, ಪಕ್ಷದಿಂದಾಗಲಿ ಅಥವಾ ಸರಕಾರದಿಂದಾಗಲಿ ಯಾವುದೇ ವೈಯಕ್ತಿಕ ಲಾಭ ಅಥವಾ ಅಧಿಕಾರ ಬಯಸಿಲ್ಲ ಹಾಗೂ ಪಡೆದಿಲ್ಲ ಎಂಬ ಸ್ಪಷ್ಟ ಮಾಹಿತಿ ಕೂಡ ತಮಗಿದೆ. ಆದಾಗ್ಯೂ, ವೈಯಕ್ತಿಕವಾಗಿ ಜಾತಿಭೇದವಿಲ್ಲದೆ ಪ್ರಾಮಾಣಿಕತೆ ಮತ್ತು ನಿಷ್ಠುರತೆಯ ವೀರಶೈವ ಲಿಂಗಾಯತನಾಗಿದ್ದುದಕ್ಕಾಗಿ ಹಾಗೂ ಪಕ್ಷದ ಯಾವುದೇ ನಾಯಕರ ಬಾಗಿಲು ತಟ್ಟದಿದ್ದಕ್ಕಾಗಿ ಇಂದು ನನಗೆ ಉಸಿರುಗಟ್ಟಿಸುವ ಪರಿಸ್ಥಿತಿ ಪಕ್ಷದಲ್ಲಿ ನಿರ್ಮಾಣ ಮಾಡಲಾಗಿದೆ.

ವೀರಶೈವ ಲಿಂಗಾಯತನಾಗಿದ್ದುದಕ್ಕೆ ಹಾಗೂ ನನ್ನ ಪ್ರಾಮಾಣಿಕತೆ ಮತ್ತು ನಿಷ್ಠುರತೆಗಾಗಿ ಬಲಿಪಶುವಾಗಲಾರೆ. ಅಧಿಕಾರದ ಗದ್ದುಗೆ ಏರಿದ ನಂತರ ಅಧಿಕಾರ ಮತ್ತು ಸ್ಥಾನಮಾನಕ್ಕಾಗಿ ಮಾನವೀಯತೆಯ ಭಾವನೆಗಳೇ ಪಕ್ಷದ ಕೆಲ ನಾಯಕರುಗಳಲ್ಲಿ ಆವಿಯಾಗುತ್ತಿರುವ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪಕ್ಷದ ಎಲ್ಲ ಜವಾಬ್ದಾರಿಗಳಿಗೆ ಈ ಮೂಲಕ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ರಮೇಶ ಕತ್ತಿ ಕಾಂಗ್ರೆಸ್​ಗೆ ಬರುವುದಾದರೆ ನಾನು ಸ್ವಾಗತಿಸುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ

ABOUT THE AUTHOR

...view details