ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಪಡೆದುಕೊಂಡಿದ್ದು, ಎಎಪಿ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬರಲು ಪೈಪೋಟಿ ನೀಡುತ್ತಿದೆ. 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆಯೇ ಎಂಬುದನ್ನು ನಿರ್ಧರಿಸಲು ಮಧ್ಯಾಹ್ನದವರೆಗೂ ಕಾಯಬೇಕಾಗುತ್ತದೆ. 2015 ರಿಂದ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಎಎಪಿ ಮೇಲೆ ಹಲವಾರು ಎಕ್ಸಿಟ್ ಪೋಲ್ಗಳು ಬಿಜೆಪಿಗೆ ಅಧಿಕಾರ ಎಂದು ಹೇಳಿವೆ.
ಚುನಾವಣಾ ಆಯೋಗದ ಪ್ರಕಾರ ದೆಹಲಿ ಚುನಾವಣೆಯಲ್ಲಿ ಶೇ.60.54ರಷ್ಟು ಮತದಾನವಾಗಿದೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು ತಮ್ಮ ಪಕ್ಷವು ಸುಮಾರು 50 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಎಎಪಿ ಎಕ್ಸಿಟ್ ಪೋಲ್ ಸಮೀಕ್ಷೆಗಳ ಫಲಿತಾಂಶಗಳನ್ನು ತಿರಸ್ಕರಿಸಿದೆ, ಅರವಿಂದ್ ಕೇಜ್ರಿವಾಲ್ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಆರಂಭಿಕ ಫಲಿತಾಂಶಗಳು ಇದು ಕಷ್ಟ ಎನ್ನುತ್ತಿವೆ.
ರಾಜಕೀಯ ವಿಶ್ಲೇಷಕ ನವೀನ್ ಗೌತಮ್ ಅವರು, ಬಿಜೆಪಿಗೆ ಬಹುಮತ ಬಂದರೆ ಇಡೀ ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ಹೊಸದಿಲ್ಲಿಯ ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಸಿಎಂ ಅಭ್ಯರ್ಥಿ ಆಗುವಲ್ಲಿ ಮುಂದಿದ್ದಾರೆ. ಅಂತೆಯೇ, ವಿಧಾನಸಭೆಯಲ್ಲಿ ಎರಡನೇ ಬಾರಿಗೆ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ವಿಜೇಂದರ್ ಗುಪ್ತಾ ಅವರು ಸಹ ಪ್ರಬಲ ಸ್ಪರ್ಧಿಯಾಗಬಹುದು ಎಂದು ಗೌತಮ್ ಹೇಳಿದ್ದಾರೆ.
ಮತ್ತೊಬ್ಬ ರಾಜಕೀಯ ವಿಶ್ಲೇಷಕ ಮನೋಜ್ ಮಿಶ್ರಾ ಮಾತನಾಡಿ, ಈ ಬಾರಿ ಬಿಜೆಪಿ ಕರೋಲ್ ಬಾಗ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ದುಷ್ಯಂತ್ ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಅವರು ದೆಹಲಿಯ ಮಲ್ಕಾ ಗಂಜ್ನಲ್ಲಿ ಹುಟ್ಟಿ ಬೆಳೆದಿದ್ದಾರೆ. ದುಶ್ಯಂತ್ ಗೌತಮ್ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದು, ಸಂಘಟನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ ದುಷ್ಯಂತ್ ಗೌತಮ್ ಅವರು ತಮ್ಮ ಓದು ಮುಗಿಸಿದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿಭಾಗೀಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ . ಅವರು ಮೂರು ಬಾರಿ ಬಿಜೆಪಿ ಪರಿಶಿಷ್ಟ ಮೋರ್ಚಾದ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಅವರು ಸಂಘಟನೆ ಮತ್ತು ರಾಜಕೀಯವನ್ನು ಹತ್ತಿರದಿಂದ ನೋಡಿದ್ದಾರೆ. ಇವರು ಕೂಡಾ ದೆಹಲಿಯ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಬಹುದು ಎಂದು ಮಿಶ್ರಾ ಹೇಳಿದ್ದಾರೆ.
ಇದೇ ವೇಳೆ ಸುಮಾರು 15 ಸ್ಥಾನಗಳು ವಿಐಪಿ ಕ್ಯಾಂಡಿಡೇಟ್ ಗಳಿಂದಾಗಿ ಚರ್ಚೆಗೆ ಗ್ರಾಸವಾಗಿವೆ. ಕೆಲವು ಹೈ-ಪ್ರೊಫೈಲ್ ಸ್ಥಾನಗಳಲ್ಲಿ ನವದೆಹಲಿ ಸ್ಥಾನ, ಕಲ್ಕಾಜಿ ಸ್ಥಾನ, ಜಂಗ್ಪುರ ಸ್ಥಾನ, ಪಟಪರ್ಗಂಜ್ ಸ್ಥಾನ ಮತ್ತು ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರಗಳು ಸೇರಿವೆ.
ಇದನ್ನು ಓದಿ: ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ: ಕೇಜ್ರಿವಾಲ್, ಅತಿಶಿ, ಸಿಸೋಡಿಯಾಗೆ ಹಿನ್ನಡೆ