ಇದು ಕಲಿಕೆಗಾಗಿ..! ಒಂದೇ ಊರಿನಿಂದ 185 ದೇಹ ದಾನಕ್ಕೆ ಒಪ್ಪಿಗೆ: ದೇಶಕ್ಕೆ ಮಾದರಿಯಾದ ಶೇಗುಣಸಿ ಗ್ರಾಮ (ETV Bharat) ಚಿಕ್ಕೋಡಿ(ಬೆಳಗಾವಿ): ಭಾರತ ಪರಂಪರೆ, ಸಂಸ್ಕೃತಿ, ಸಮುದಾಯ ಪಂಗಡಗಳನ್ನು ಒಳಗೊಂಡಿರುವ ದೇಶ. ಇಲ್ಲಿ ಹುಟ್ಟಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಸಾವಿಗೂ ಕೂಡ ಅಷ್ಟೇ ಆದ್ಯತೆ ನೀಡಿ, ವಿಧಿ ವಿಧಾನದಂತೆ ಶವ ಸಂಸ್ಕಾರ ಮಾಡುತ್ತಾರೆ. ಆದರೆ, ಇವರ ಮಧ್ಯದಲ್ಲಿ ಶೇಗುಣಸಿ ಗ್ರಾಮದಲ್ಲಿ ಹಲವು ಜನರು ಮರಣದ ನಂತರ ಮೃತ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ದೇಣಿಗೆ ನೀಡುತ್ತಿದ್ದು, ಇಡೀ ದೇಶದ ಗಮನ ಸೆಳೆಯುತ್ತಿದೆ.
ಚಿಕ್ಕೋಡಿಯ ಶೇಗುಣಸಿ ಗ್ರಾಮ (ETV Bharat) 185 ದೇಹ ದಾನಕ್ಕೆ ಒಪ್ಪಿಗೆ: ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಬಹುತೇಕರು ತಮ್ಮ ಮರಣದ ನಂತರ ಶವ ಸಂಸ್ಕಾರ ಬದಲು ಇಡೀ ದೇಹವನ್ನು ವೈದ್ಯಕೀಯ ಕಾಲೇಜುಗಳಿಗೆ ದಾನ ಮಾಡಿ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ. ಇದುವರೆಗೆ 185 ದೇಹಗಳ ದಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ 17 ಜನ ಈಗಾಗಲೇ ಮರಣ ಹೊಂದಿದ್ದು, ಇವರುಗಳ ದೇಹವನ್ನು ವೈದ್ಯಕೀಯ ಕಾಲೇಜುಗಳಿಗೆ ಸರಬರಾಜು ಮಾಡಲಾಗಿದೆ. ಡಾ. ಮಹಾಂತೇಶ ರಾಮಣ್ಣವರ್ ಸ್ಫೂರ್ತಿ ಪಡೆದುಕೊಂಡು ಶೇಗುಣಸಿ ಗ್ರಾಮದಲ್ಲಿ ಸ್ವಯಂ ಪ್ರೇರಿತರಾಗಿ ದೇಹದಾನಕ್ಕೆ ಯುವಕರು ಅಷ್ಟೇ ಅಲ್ಲದೇ ಮಹಿಳೆಯರು ಕೂಡ ಮುಂದೆ ಬಂದಿದ್ದಾರೆ.
ಶವ ಸಾಗಣೆಗೂ ಮೊದಲು ಪೂಜಾ ಕೈಂಕರ್ಯ : "ಶೇಗುಣಸಿ ಗ್ರಾಮಸ್ಥ ಮಾಂತೇಶ್ ಸಿದ್ಧನಾಳ ಮಾತನಾಡಿ, "ಗ್ರಾಮದಲ್ಲಿ 2010ರಂದು ರಾಷ್ಟ್ರೀಯ ಬಸವ ಸೇವಾ ದಳದ ವತಿಯಿಂದ ಯೋಗಾಭ್ಯಾಸ ಕ್ಯಾಂಪ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಾ. ಮಹಾಂತೇಶ ರಾಮಣ್ಣವರ್ ಬಂದಿದ್ದರು. ದೇಹ ದಾನ ವಿಚಾರ ಕುರಿತು ವೈದ್ಯರು ಗ್ರಾಮಸ್ಥರಿಗೆ ತಿಳಿ ಹೇಳುತ್ತಿದ್ದಂತೆ ಸ್ಥಳದಲ್ಲೇ ಸ್ವಯಂ ಪ್ರೇರಿತವಾಗಿ 108 ಜನರು ನೋಂದಣಿ ಕಾರ್ಯವನ್ನು ಮಾಡಿದರು. ಸತ್ತ ಮೇಲೆ ದೇಹವು ಮಣ್ಣು ಬೂದಿ ಆಗುವ ಬದಲು ಇತರರಿಗೆ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ನಾವು ಈ ನಿರ್ಣಯ ಮಾಡಿದ್ದೇವೆ. ನಮ್ಮ ಕುಟುಂಬಸ್ಥರು ಗ್ರಾಮಸ್ಥರ ಒಪ್ಪಿಗೆ ಪಡೆದುಕೊಂಡು ಈ ನಿರ್ಣಯವನ್ನು ತೆಗೆದುಕೊಂಡಿದ್ದೇವೆ, ಗ್ರಾಮದಲ್ಲಿ ಹಲವರು ಈಗಾಗಲೇ ದೇಹ ದಾನ ಮಾಡಿದ್ದಾರೆ".
ಕಲಿಕೆಗಾಗಿ ಒಂದೇ ಊರಿನಿಂದ 185 ದೇಹ ದಾನಕ್ಕೆ ಒಪ್ಪಿಗೆ (ETV Bharat) "ಇದರಲ್ಲಿ ಯಾವುದೇ ಜಾತಿ ಪಂಥ - ಮೇಲು ಕಿಳು ಎಂಬುದು ಇಲ್ಲ. ಇದಕ್ಕೆ ಸ್ಥಳೀಯ ಶ್ರೀಗಳು ಕೂಡ ಸಹಮತಿ ಸೂಚಿಸಿದ್ದಾರೆ. ಯಾವುದೇ ವಿರೋಧ ಕೂಡ ಇದುವರೆಗೆ ಬಂದಿಲ್ಲ. ಶವ ಸಾಗಣೆಗೂ ಮೊದಲು ನಾವು ಪೂಜಾ ಕೈಂಕರ್ಯಗಳು ನೆರವೇರಿಸಲಾಗುವುದು. ನಂತರ ಶವಗಳ ಹಸ್ತಾಂತರ ಮಾಡುತ್ತೇವೆ. ಧರ್ಮದಲ್ಲಿ ವೈದಾನಿಕತೆಯನ್ನು ಹುಡುಕಿಡಿಕೊಂಡು ಈಗಿನ ವಸ್ತು ಸ್ಥಿತಿಗೆ ಹೊಂದಿಕೊಂಡು ನಾವು ಬದಲಾವಣೆಯಾಗುವುದು ಅವಶ್ಯಕತೆ ಇದೆ. ಈ ದೇಹದಿಂದ ಇನ್ನೊಬ್ಬರಿಗೆ ಉಪಯೋಗವಾಗಲಿ ಎಂಬುದಷ್ಟೇ ನಮ್ಮ ಆಶಯವಾಗಿದೆ" ಎಂದು ಹೇಳಿದರು.
ಡಾ. ಮಹಾಂತೇಶ ರಾಮಣ್ಣವರ್ ಮಾತನಾಡಿ, "ನಮ್ಮ ತಂದೆ ಬಸವಣ್ಯಪ್ಪ ಸಹ ದಂತ ವೈದ್ಯರಾಗಿದ್ದರು. ಜೊತೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು. 2008ರ ನವೆಂಬರ್ 13ರಂದು ತಂದೆ ಮೃತಪಟ್ಟಾಗ ಅವರ ದೇಹವನ್ನು ಕೆಎಲ್ಇ ಸಂಸ್ಥೆಗೆ ದಾನ ಮಾಡಿದ್ದರು. ಅಷ್ಟೇ ಅಲ್ಲ ಎರಡು ವರ್ಷಗಳ ಬಳಿಕ ತಂದೆಯ ದೇಹವನ್ನು ತಾವೇ ಛೇದಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದೆ. ಬಳಿಕ ಅನೇಕರು ದೇಹದಾನ ಮಾಡಲು ಮುಂದಾಗಿದ್ದರು. ಇವರ ಮಾರ್ಗದಲ್ಲಿ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೆ ಅನೇಕ ಕಡೆಗಳಲ್ಲಿ ನಿರಂತರವಾಗಿ ದೇಹದಾನವನ್ನು ಅನೇಕರು ಮಾಡುತ್ತಿದ್ದಾರೆ. ಒಬ್ಬರ ದೇಹದಾನದಿಂದ 7 ಜನರ ಪ್ರಾಣ ಉಳಿಸಬಹುದು. ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಸಹ ಇದು ಸಹಕಾರಿಯಾಗಲಿದೆ".
"ದೇಹದಾನದ ಜಾಗೃತಿ ಫಲವಾಗಿ ಈಗಾಗಲೇ ಕೆಎಲ್ಇ ಸಂಸ್ಥೆಗೆ 5 ಸಾವಿರಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ 200ಕ್ಕೂ ಹೆಚ್ಚು ದೇಹಗಳನ್ನು ದಾನವನ್ನಾಗಿ ಸಹ ಪಡೆಯಲಾಗಿದೆ. ಹೀಗೆ ದೇಹದಾನದ ಬಳಿಕ ಮೃತ ದೇಹಕ್ಕೆ ವಿದ್ಯಾರ್ಥಿಗಳು ಗೌರವ ಸಲ್ಲಿಸಿ ಬಳಿಕ ಛೇದಿಸಿ ಅಧ್ಯಯನ ಮಾಡೋ ಪ್ರಕ್ರಿಯೆ ನಿರಂತವಾಗಿ ನಡೆದಿದೆ. ಇನ್ನು ಬೆಳಗಾವಿಯ ಕೆಎಲ್ಇ ಅಷ್ಟೇ ಅಲ್ಲದೇ ರಾಜ್ಯದ ಅನೇಕ ಕಾಲೇಜುಗಳಿಗೆ ಬೆಳಗಾವಿಯಿಂದಲೇ ದೇಹಗಳನ್ನು ರವಾನೆ ಮಾಡಲಾಗಿದೆ. ದೇಹದಾನ ಜಾಗೃತಿಯಿಂದ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ 187 ಜನ ಈಗಾಗಲೇ ನೊಂದಣಿ ಮಾಡಿ ದೇಶದಲ್ಲಿ ಅತಿ ಹೆಚ್ಚು ದೇಹ ದಾನ ಮಾಡಿರುವ ಗ್ರಾಮ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಜತೆಗೆ ಮಹಾಲಿಂಗಪುರದಲ್ಲಿ 100 ನೋಂದಣಿ ಮಾಡಿದ್ದು, ಇತ್ತೀಚಿಗೆ ಬೆಳಗಾವಿ ತಾಲೂಕಿನಲ್ಲಿಯೂ ಪ್ರತಿ ಗ್ರಾಮದಲ್ಲಿ ದೇಹದಾನಕ್ಕೆ ಜನ ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ" ಎಂದು ಹೇಳಿದರು.
ಒಬ್ಬರ ದೇಹದಾನದಿಂದ ಅನೇಕರ ಪ್ರಾಣ ಉಳಿಸಬಹುದು. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಕ್ರಾಂತಿಯೇ ಆರಂಭವಾಗಿದೆ. ಸತ್ತ ಮೇಲೆ ಮಣ್ಣಲ್ಲಿ ಮಣ್ಣವಾಗುವ ಬದಲು ಅನ್ಯರಿಗೆ ಉಪಯೋಗ ಆಗಬೇಕು ಎನ್ನುವ ಘೋಷ ವಾಕ್ಯ ಎಲ್ಲ ಕಡೆ ಪರಿಣಾಮಕಾರಿಯಾಗಿ ಜನರಲ್ಲಿ ನಾಟುತ್ತಿದೆ.
ಇದನ್ನೂ ಓದಿ:ಮೃತ ಮಗಳ ಹೆಸರಲ್ಲಿ 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ದಾನ: ಸಂಬಳವನ್ನೇ ಮೀಸಲಿಟ್ಟಿರುವ ASI ಲೋಕೇಶಪ್ಪ - Donation in daughter name