ಕರ್ನಾಟಕ

karnataka

ETV Bharat / state

ನಿರಂತರ ಶೋಧದ ಬಳಿಕ ಕೆಂಪೇಗೌಡರನ್ನು ಬಂಧಿಸಿಟ್ಟ ಸೆರೆಮನೆ ಪತ್ತೆ - Anegondi Prison Discovered

ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಸೆರೆಮನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಪತ್ತೆಯಾಗಿದೆ.

By ETV Bharat Karnataka Team

Published : Jun 26, 2024, 6:16 PM IST

Updated : Jun 27, 2024, 11:43 AM IST

CONTINUOUS SEARCH  KEMPEGOWDA WAS DETAINED  PRISON IN ANEGONDI  KOPPAL
ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಸೆರೆಮನೆ ಆನೆಗೊಂದಿಯಲ್ಲಿ ಪತ್ತೆ (ETV Bharat)

ಗಂಗಾವತಿ(ಕೊಪ್ಪಳ):ಯಲಹಂಕದ ನಾಡಪ್ರಭು, ಆಧುನಿಕ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರನ್ನು ಬಂಧಿಸಿ ಕೊಪ್ಪಳದ ಆನೆಗೊಂದಿಯ ಕಾರಾಗೃಹದಲ್ಲಿ ಇಡಲಾಗಿತ್ತು ಎಂಬ ಸಂಗತಿ ವಿಜಯನಗರದ ಅರಸರ ಕಾಲದ ಇತಿಹಾಸದಿಂದ ತಿಳಿಯುತ್ತದೆ. ಆದರೆ ಬಂಧಿಸಿಟ್ಟಿದ್ದ ಸೆರೆಮನೆ ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ ಸೆರೆಮನೆಯ ಅವಶೇಷಗಳನ್ನು ಹಿರಿಯ ಇತಿಹಾಸ ಸಂಶೋಧಕ ಶರಣಬಸಪ್ಪ ಕೊಲ್ಕಾರ ಪತ್ತೆ ಹಚ್ಚಿದ್ದಾರೆ.

ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಸೆರೆಮನೆ ಆನೆಗೊಂದಿಯಲ್ಲಿ ಪತ್ತೆ (ETV Bharat)

ಆನೆಗೊಂದಿಯ ಅಧುನಿಕ ಗ್ರಾಮದಿಂದ ಸಮೀಪದ ಬೃಹತ್ ಬೆಟ್ಟಗುಡ್ಡಗಳ ಸಾಲಲ್ಲಿರುವ 'ಜಿಂಜರ' ಬೆಟ್ಟ ಎಂಬಲ್ಲಿ ವಿಜಯನಗರದ ಅರಸರ ಕಾಲದ ಕಟ್ಟಡದ ಅವಶೇಷಗಳು ಸಿಕ್ಕಿವೆ. ಇದೇ ಕೆಂಪೇಗೌಡರ ಕಾರಾಗೃಹ ಎಂದು ಶರಣಬಸಪ್ಪ ಕೊಲ್ಕಾರ ಸ್ಪಷ್ಟಪಡಿಸಿದ್ದಾರೆ.

ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಸೆರೆಮನೆ ಆನೆಗೊಂದಿಯಲ್ಲಿ ಪತ್ತೆ (ETV Bharat)

ಕೆಂಪೇಗೌಡರನ್ನು ಬಂಧಿಸಿದ್ದೇಕೆ?:ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ವಿಜಯನಗರದ ಅರಸ ಅಳಿಯ ರಾಮರಾಯನ ಕಾಲದಲ್ಲಿ ತನ್ನ ರಾಜ್ಯದಲ್ಲಿ ಉಂಟಾದ ಆರ್ಥಿಕ ದುಸ್ಥಿತಿಯನ್ನು ಸುಧಾರಿಸಿ ಪ್ರಜೆಗಳನ್ನು ರಕ್ಷಿಸಲು ಸಾಮ್ರಾಟನ ಅನುಮತಿ ಪಡೆಯದೇ ಕೆಂಪೇಗೌಡ, ಬೈರೇಶ್ವರ ಹೆಸರಿನ ಸ್ವಂತ ನಾಣ್ಯಗಳನ್ನು ಟಂಕಿಸಿ ಚಲಾಯಿಸಿದ್ದರು ಎನ್ನಲಾಗಿದೆ. ಇದರಿಂದ ಕೆರಳಿದ ಅಳಿಯ ರಾಮರಾಯ, ಕೆಂಪೇಗೌಡರನ್ನು ರಾಜಧಾನಿ ವಿಜಯನಗರದಲ್ಲಿ ನಡೆಯುತ್ತಿದ್ದ ದಸರಾ ಉತ್ಸವಕ್ಕೆ ಆಹ್ವಾನಿಸುತ್ತಾನೆ. ಕೆಂಪೇಗೌಡರು ಬಂದಾಗ ಬಂಧಿಸಿ ಆನೆಗೊಂದಿ ಸೆರೆಮನೆಗೆ ತಳ್ಳುತ್ತಾನೆ. ಗೌಡರು 1560ರಿಂದ 5 ವರ್ಷಗಳ ಕಾಲ ಆನೆಗೊಂದಿ ಸೆರೆಮನೆಯಲ್ಲಿ ಬಂಧನದಲ್ಲಿದ್ದರು.

ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಸೆರೆಮನೆ ಆನೆಗೊಂದಿಯಲ್ಲಿ ಪತ್ತೆ (ETV Bharat)
ರಾಜದ್ರೋಹ ಎಸಗಿದ್ದಕ್ಕಾಗಿ 1565ರಲ್ಲಿ ಕೆಂಪೇಗೌಡ, ಭಾರಿ ಮೊತ್ತದ ದಂಡ ತೆತ್ತು ಬಿಡುಗಡೆಯಾಗುತ್ತಾರೆ. ಈ ಸಂಗತಿಯನ್ನು ಮೈಸೂರ್ ಗ್ಯಾಜೆಟಿಯರ್​ನಲ್ಲಿ (1997) ಉಲ್ಲೇಖಿಸಲಾಗಿದೆ ಎಂದು ಶರಣಬಸಪ್ಪ ವಿವರಿಸಿದರು.

ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಸೆರೆಮನೆಗಾಗಿ ನಿರಂತರ ಸೋಧ ನಡೆಸಿದ ಡಾ.ಶರಣಬಸಪ್ಪ ಕೋಲ್ಕಾರ್, ಸಾಂದರ್ಭಿಕ ಸನ್ನಿವೇಶಗಳನ್ನು ಪರಿಶೀಲಿಸಿ ಆನೆಗೊಂದಿಯ ಒಂಟಿ ಸಾಲು, ಆನೆ ಸಾಲು ಎಂಬ ಕಟ್ಟಡವೇ ಆನೆಗೊಂದಿ ಸೆರೆಮನೆ ಇರಬೇಕೆಂದು ಈ ಹಿಂದೆ ಅಂದಾಜಿಸಿದ್ದರು. ಆದರೆ ಆನೆಗೊಂದಿಯಲ್ಲಿ ಪ್ರಚಲಿತವಾಗಿರುವ ಮೌಖಿಕ ಹೇಳಿಕೆಗಳು ಗೌಡರನ್ನು ಜಿಂಜರ ಬೆಟ್ಟದಲ್ಲೇ ಬಂಧನದಲ್ಲಿಡಲಾಗಿತ್ತು ಎಂಬುದನ್ನು ಸೂಚಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಶೋಧಿಸಿದಾಗ ಬೆಟ್ಟದ ಮೇಲಿನ ವಿಶಾಲ ಜಾಗದಲ್ಲಿ ಸುತ್ತಲೂ ರಕ್ಷಣಾ ಗೋಡೆಗಳು ಕಂಡುಬಂದಿವೆ.

ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಸೆರೆಮನೆ (ETV Bharat)

ಅಲ್ಲದೇ ಬೆಟ್ಟದಲ್ಲಿ ಅಲ್ಲಲ್ಲಿ ಕಾವಲು ಗೋಪುರಗಳು, ಕಾವಲುಗಾರರ ಮನೆಗಳು, ಸೈನಿಕರ ವಸತಿಗಳು, ಭದ್ರತಾ ಕಟ್ಟಡ (ಸೆರೆಮನೆ), ಕಣಜ ಮತ್ತು ನೈಸರ್ಗಿಕ ನೀರಿನ ಕೊಳಗಳು ಕಂಡುಬಂದಿವೆ. ಈ ಬೆಟ್ಟ ಸುಮಾರು 400 ಮೀಟರ್ ಎತ್ತರಲ್ಲಿದ್ದು ಅತ್ಯಂತ ಗೌಪ್ಯ ಸ್ಥಳದಲ್ಲಿದೆ. ಕೆಳಭಾಗದಿಂದ ಗಮನಿಸಿದರೆ ಬೆಟ್ಟದ ಮೇಲೆ ಕಟ್ಟಡ ಇರುವುದು ತಿಳಿಯುವುದಿಲ್ಲ. ಮೌಖಿಕ ಪರಂಪರೆ ಮತ್ತು ಕಟ್ಟಡಗಳ ಸಾಂದರ್ಭಿಕ ಸನ್ನಿವೇಶವನ್ನು ಪರಿಶೀಲಿಸಿ ಅವಶೇಷಗಳನ್ನು ಗಮನಿಸಿದಾಗ ಇದು ಖಚಿತವಾಗಿ ಸೆರೆಮನೆ ಎಂಬುದು ತಿಳಿಯುತ್ತದೆ.

ಈ ಕುರಿತು ರಾಜ್ಯ ಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಂಪಿ ಉತ್ಸವದಲ್ಲಿ ನಡೆಸಿದ 'ವಿಜಯನಗರ ಅಧ್ಯಯನ ವಿಚಾರ ಸಂಕಿರಣ'ದಲ್ಲೂ ಪ್ರಬಂಧ ಮಂಡಿಸಲಾಗಿದೆ ಎಂದು ಡಾ. ಶರಣಬಸಪ್ಪ ಕೋಲ್ಕಾರ್ ಮಾಹಿತಿ ನೀಡಿದರು.

ಇದನ್ನೂ ಓದಿ:ಗಂಗಾವತಿ: ಆನೆಗೊಂದಿಯ ರಾಜವಂಶಸ್ಥೆ ರಾಣಿ ವಿಜಯಲಕ್ಷ್ಮಿ ನಿಧನ - Rani Vijayalakshmi No more

Last Updated : Jun 27, 2024, 11:43 AM IST

ABOUT THE AUTHOR

...view details