ಕರ್ನಾಟಕ

karnataka

ಶಾಲೆಯಲ್ಲಿ ಉದ್ಯಾನ ನಿರ್ಮಿಸಿ ಬಾನಾಡಿಗಳ ಬಾಯಾರಿಕೆ ತೀರಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕಿ - garden at school

By ETV Bharat Karnataka Team

Published : Apr 1, 2024, 10:21 AM IST

Updated : Apr 1, 2024, 12:43 PM IST

ಹಾವೇರಿಯ ಹಾನಗಲ್​ ತಾಲೂಕಿನ ಹಳ್ಳಿಬೈಲ್​ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ತನ್ನ ವಿದ್ಯಾರ್ಥಿಗಳ ಜೊತೆಗೂಡಿ ಶಾಲೆಯಲ್ಲಿ ಚಿಕ್ಕ ಉದ್ಯಾನ ನಿರ್ಮಿಸಿ ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡುವ ಕಾರ್ಯ ಮಾಡಿದ್ದಾರೆ.

ಬಾನಾಡಿಗಳ ಬಾಯಾರಿಕೆ ತೀರಿಸುತ್ತಿರುವ ಸರ್ಕಾರಿ ಶಿಕ್ಷಕಿ
ಬಾನಾಡಿಗಳ ಬಾಯಾರಿಕೆ ತೀರಿಸುತ್ತಿರುವ ಸರ್ಕಾರಿ ಶಿಕ್ಷಕಿ

ಶಾಲೆಯಲ್ಲಿ ಉದ್ಯಾನ

ಹಾವೇರಿ:ಪ್ರಸ್ತುತ ವರ್ಷ ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಜಾನುವಾರುಗಳಿರಲಿ ಮನುಷ್ಯರೇ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ಹೀಗಾಗಿ ತಮ್ಮ ಸುತ್ತಮುತ್ತಲಿನ ಪಕ್ಷಿಗಳಿಗೆ ನೀರಿನ ದಾಹ ಮತ್ತು ಆಹಾರದ ಕೊರತೆಯಾಗದಂತೆ ಹಾನಗಲ್​ ತಾಲೂಕಿನ ಹಳ್ಳಿಬೈಲ್​ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜ್ಯೋತಿ ಸುರಳೇಶ್ವರ್​ ನೋಡಿಕೊಳ್ಳುತ್ತಿದ್ದಾರೆ.

ಜ್ಯೋತಿ ಸುರಳೇಶ್ವರ ಶಾಲೆಯಲ್ಲಿ ಚಿಕ್ಕ ಉದ್ಯಾನ ನಿರ್ಮಿಸಿದ್ದಾರೆ. ಶಾಲೆಯ ಆವರಣದಲ್ಲಿ ಸುಮಾರು 200ಕ್ಕೂ ಅಧಿಕ ಗಿಡಗಳನ್ನು ಹಚ್ಚಿದ್ದಾರೆ. ಅದರಲ್ಲಿ ಬೆಳೆದು ನಿಂತಿರುವ ಸುಮಾರು 50ಕ್ಕೂ ಅಧಿಕ ಗಿಡಗಳಲ್ಲಿ ಪಕ್ಷಿಗಳಿಗಾಗಿ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ. ಉಪಯೋಗಿಸಿ ಬಿಟ್ಟ ಪ್ಲಾಸ್ಟಿಕ್ ಬಾಟಲಿ ಮತ್ತು ಡಬ್ಬಿಗಳನ್ನು ಉಪಯೋಗಿಸಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಕುಡಿಯಲು ನೀರು ಹಾಕಿದ್ದಾರೆ. ಚಿಕ್ಕ ಚಿಕ್ಕ ಡಬ್ಬಿಗಳಲ್ಲಿ ಪಕ್ಷಿಗಳಿಗೆ ಆಹಾರದ ಹಸಿವು ನೀಗಿಸಲು ಅಕ್ಕಿಭತ್ತ ಸೇರಿದಂತೆ ವಿವಿಧ ಕಾಳುಗಳನ್ನು ಇರಿಸಿದ್ದಾರೆ.

ಈ ಬಾಟಲಿ ಡಬ್ಬಿಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕಿ ಜ್ಯೋತಿ ನಿರ್ವಹಣೆ ಮಾಡುತ್ತಾರೆ. ನಿತ್ಯ ಯಾವ ಯಾವ ಬಾಟಲಿಗಳಲ್ಲಿ ನೀರು ಖಾಲಿಯಾಗಿದೆ ಯಾವ ಯಾವ ಡಬ್ಬಿಗಳಲ್ಲಿ ಆಹಾರ ಕಡಿಮೆಯಾಗಿದೆ, ಅವುಗಳನ್ನು ನೋಡಿಕೊಂಡು ನೀರು ಮತ್ತು ಆಹಾರ ಹಾಕುತ್ತಾರೆ. ಇವರ ಈ ಪ್ರಯೋಗ ಯಶಸ್ವಿಯಾಗಿದ್ದು, ನೀರು, ಕಾಳು ಅರಸಿಕೊಂಡು ಪಕ್ಷಿಗಳು ಶಾಲೆಯ ಉದ್ಯಾನಕ್ಕೆ ಬರುತ್ತಿವೆ. ಕಾಗೆ, ಗುಬ್ಬಿ, ಅಳಿಲು, ಕೋಗಿಲೆ ಸೇರಿದಂತೆ ವಿವಿಧ ಪಕ್ಷಿಗಳು ಈ ಆಹಾರ ಸೇವಿಸುತ್ತಿವೆ.

ಶಿಕ್ಷಕಿ ಜ್ಯೋತಿ ಮಕ್ಕಳಿಗೆ ಪರಿಸರದಲ್ಲಿ ಪಕ್ಷಿಗಳ ಪ್ರಾಣಿಗಳ ಪಾತ್ರವೇನು ಎಂಬುವುದರ ಕುರಿತಂತೆ ಪಾಠ ಮಾಡುತ್ತಾರೆ. ಇದರಿಂದ ಉತ್ತೇಜಿತರಾದ ವಿದ್ಯಾರ್ಥಿಗಳು ಮನೆಯ ಸುತ್ತಮುತ್ತ ಸಹ ಪಕ್ಷಿಗಳಿಗೆ ಪ್ರಾಣಿಗಳಿಗೆ ಸಹಾಯವಾಗಲು ಬಾಟಲಿ ಮತ್ತು ಡಬ್ಬಿಗಳನ್ನು ಕಟ್ಟಿ ನೀರು ಮತ್ತು ಕಾಳುಕಡಿ ಹಾಕುತ್ತಿದ್ದಾರೆ. ಇದರಿಂದ ನಮ್ಮ ಸುತ್ತಮುತ್ತ ಪ್ರಾಣಿ ಪಕ್ಷಿಗಳ ಆಗಮನ ಅಧಿಕವಾಗಿದೆ. ಇದಲ್ಲದೇ ಅವುಗಳು ಇಂಚರ ನಮಗೆ ಸಾಕಷ್ಟು ಸಂತಸ ತರುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಒಂದರಿಂದ ಐದನೇ ತರಗತಿಯವರೆಗೆ ಸುಮಾರು 65 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಬೇಸಿಗೆ ಸಮಯದಲ್ಲಿ ಮನುಷ್ಯರು ತಮಗೆ ಬೇಕಾದ ಆಹಾರ ನೀರು ಪಡೆದುಕೊಳ್ಳುತ್ತಾರೆ. ಆದರೆ, ಪ್ರಾಣಿಪಕ್ಷಿಗಳ ಪಾಡು ಯಾರಿಗೂ ಬೇಡ. ಅವುಗಳ ಸಹಾಯಕ್ಕಾಗಿ ಈ ರೀತಿ ವ್ಯವಸ್ಥೆ ಮಾಡಿದ್ದೇವೆ. ಅದರಲ್ಲೂ ಈ ವರ್ಷ ಭೀಕರ ಬರಗಾಲ ಆವರಿಸಿದೆ. ಜಲಮೂಲಗಳು ಬಹುತೇಕ ಬತ್ತಿವೆ. ಇದರಿಂದ ಪ್ರಾಣಿಗಳು ಕಾಡಿಗೆ ಬರುತ್ತಿವೆ. ಪಕ್ಷಿಗಳು ನೀರಿನ ದಾಹ ತೀರಿಸಿಕೊಳ್ಳಲು ಕೀಲೋಮೀಟರ್​​​ ದೂರ ಹಾರಿ ಹೋಗುವ ಅನಿವಾರ್ಯತೆ ಇದೆ. ಪರಿಸರದಲ್ಲಿ ಪ್ರತಿಯೊಂದು ಪ್ರಾಣಿ ಪಕ್ಷಿಯದ್ದು ಮಹತ್ತರವಾದ ಪಾತ್ರವಿದೆ. ಪ್ರಾಣಿ ಪಕ್ಷಿಗಳ ಸಂಖ್ಯೆ ಸಮತೋಲನದಲ್ಲಿದ್ದರೆ ಪರಿಸರ ಸಮತೋಲನದಲ್ಲಿರುತ್ತೆ ಎಂದು ಶಿಕ್ಷಕಿ ಜ್ಯೋತಿ ತಿಳಿಸಿದ್ದಾರೆ.

ಶಿಕ್ಷಕಿ ಕೇವಲ ಗಿಡ ಮರಗಳನ್ನು ನೆಟ್ಟಿದ್ದಲದೇ ಪ್ರತಿಮರಕ್ಕೂ ಪರಿಸರ ಪ್ರೇಮ ಸಾರುವ ಶಿರ್ಷಿಕೆಗಳನ್ನು ಹಾಕಿದ್ದಾರೆ. ಆ ಮೂಲಕ ಮಕ್ಕಳಿಗೆ ಪರಿಸರ ಪ್ರೇಮ ಬೆಳೆಸುತ್ತಿದ್ದಾರೆ. ಇವರ ಕಾರ್ಯಕ್ಕೆ ಶಾಲೆಯ ಸಿಬ್ಬಂದಿ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಭೀಕರ ಬರಗಾಲ; ಬಾಡಿಗೆ ಟ್ಯಾಂಕರ್ ನೀರು ಪಡೆದು ಅಡಿಕೆ ತೋಟ ಉಳಿಸಲು ರೈತರ ಶತಪ್ರಯತ್ನ - FARMERS PURCHASING WATER FOR CROP

Last Updated : Apr 1, 2024, 12:43 PM IST

ABOUT THE AUTHOR

...view details