ಬೆಂಗಳೂರು: ನಗರದಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಅಭಾವ ಉಂಟಾಗಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಪ್ರಾಣಿ ಪಕ್ಷಿಗಳೂ ಹೊರತಾಗಿಲ್ಲ. ಅಂತೆಯೇ ಸಿಲಿಕಾನ್ ಸಿಟಿಯ ಜಲ ಕ್ಷಾಮದ ತೀವ್ರತೆ ಅರಿತ 'ವಾಟರ್ ಫಾರ್ ವಾಯ್ಸ್ ಲೆಸ್' ಸಂಸ್ಥೆಯು ನಗರದ ಹಲವು ಭಾಗಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿದೆ. ಈ ಮೂಲಕ ಪ್ರಾಣಿ ಪಕ್ಷಿಗಳ ನೀರಿನ ದಾಹವನ್ನು ನೀಗಿಸುವ ಮಹತ್ವದ ಕೆಲಸವನ್ನು ಮಾಡುತ್ತಿದೆ.
ವಾಟರ್ ಫಾರ್ ವಾಯ್ಸ್ ಲೆಸ್ ಸಂಸ್ಥೆಯ ಸ್ವಯಂ ಸೇವಕರು ನೀರಿನ ತೊಟ್ಟಿಗಳನ್ನು ನಗರದ ವಿವಿಧ ಭಾಗಗಳಲ್ಲಿ ನಿರ್ಮಿಸಿ ಪ್ರಾಣಿ ಪಕ್ಷಿಗಳ ನೀರಿನ ಅಗತ್ಯವನ್ನು ಪೂರೈಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯು ಒಟ್ಟು ದೇಶದ 11 ರಾಜ್ಯಗಳ 27 ನಗರಗಳಲ್ಲಿ ಪ್ರಾಣಿ ಪ್ರಿಯರೊಂದಿಗೆ ಕೈಜೋಡಿಸಿ ನೀರಿನ ತೊಟ್ಟಿಗಳನ್ನು ಸ್ಥಾಪಿಸುತ್ತಿದ್ದು, 2015 ರಿಂದ 82,000 ಕ್ಕೂ ಹೆಚ್ಚು ನೀರಿನ ಗುಂಡಿಗಳನ್ನು ಸ್ಥಾಪಿಸಿದೆ.
ಸಂಸ್ಥೆಯ ಸದಸ್ಯರೊಬ್ಬರು ಈ ಕುರಿತು ಮಾಹಿತಿ ನೀಡಿ, ನಗರದ ಹಲವು ಭಾಗಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದಾಹದಲ್ಲಿದ್ದ ನಾಯಿ ಮರಿಯೊಂದು ಕೊಳಚೆ ನೀರು ಕುಡಿಯುತ್ತಿರುವುದನ್ನು ನೋಡಿದ್ದೆವು. ಈ ಘಟನೆಯ ಬಳಿಕ ಪ್ರಾಣಿಗಳಿಗೆ ನೀರು ಒದಗಿಸಲು ಆರಂಭಿಸಿದೆವು. ಮನೆಯ ಹೊರಗೆ ಶಾಶ್ವತ ನೀರಿನ ತೊಟ್ಟಿಯೊಂದನ್ನು ಸ್ಥಾಪಿಸಿದೆವು. ಇದು ನೆರೆಹೊರೆಯವರು ಹಾಗೂ ಸ್ನೇಹಿತರಿಗೂ ಪ್ರೇರಣೆ ನೀಡಿತು. ಈ ಕಾರ್ಯಕ್ಕೆ ಅವರೂ ಕೈಜೋಡಿಸಿದರು. ಮೊದಲಿಗೆ ಕೇವಲ ನೀರು ನೀಡಲು ಮುಂದಾಗಿದ್ದ ಜನರು ನಂತರ ನಮ್ಮೊಂದಿಗೆ ಕೈಜೋಡಿಸಿದರು. ನಂತರ ಇದು ದೊಡ್ಡ ಆಂದೋಲನವಾಗಿ ಬೆಳೆಯತೊಡಗಿತು ಎಂದಿದ್ದಾರೆ.
ನಗರದಲ್ಲಿ ಒಟ್ಟು 26 ಉಚಿತ ನೀರಿನ ತೊಟ್ಟಿ ವಿತರಣಾ ಕೇಂದ್ರಗಳಿವೆ. ಪ್ರಮುಖವಾಗಿ ಯಲಹಂಕ, ಬಸವನಗುಡಿ, ಜಯನಗರ, ಕನಕಪುರ ರಸ್ತೆ, ಹೆಚ್ಎಸ್ಆರ್ ಲೇಔಟ್, ಹಲಸೂರು, ಇಂದಿರಾನಗರ, ವೈಟ್ ಫೀಲ್ಡ್, ಯಶವಂತಪುರ, ರಾಜಾಜಿನಗರ, ವಿಜಯನಗರದಲ್ಲಿ ಉಚಿತ ನೀರಿನ ತೊಟ್ಟಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ www.waterforvoiceless.org ವೆಬ್ಸೈಟ್ಗೆ ಕೂಡ ಭೇಟಿ ನೀಡಬಹುದಾಗಿದೆ.