ಕರ್ನಾಟಕ

karnataka

ETV Bharat / state

ಒಂದೇ ವಾರದಲ್ಲಿ ಇಬ್ಬರು ಕಂದಮ್ಮಗಳನ್ನು ಸಾಯಿಸಿ, ತಾವೇ ಮಣ್ಣು ಮಾಡಿದ್ದ ತಾಯಿ - ಪ್ರಿಯಕರನ ಬಂಧನ - MOTHER KILLED HER CHILDREN

ರಾಮನಗರದಲ್ಲಿ ಪ್ರಿಯಕರನ ಜೊತೆಗೂಡಿ ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಒಂದು ವಾರದ ಅವಧಿಯಲ್ಲಿ ಸಾಯಿಸಿ ಮಣ್ಣು ಮಾಡಿರುವ ಆರೋಪ ಕೇಳಿಬಂದಿದೆ.

ಅಕ್ರಮ ಸಂಬಂಧಕ್ಕಾಗಿ ಇಬ್ಬರು ಕಂದಮ್ಮಗಳನ್ನು ಸಾಯಿಸಿ, ತಾವೇ ಮಣ್ಣು ಮಾಡಿದ ತಾಯಿ, ಪ್ರಿಯಕರನ ಬಂಧನ
ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : Oct 14, 2024, 11:46 AM IST

Updated : Oct 14, 2024, 12:01 PM IST

ರಾಮನಗರ:ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕಾಗಿ ಪ್ರಿಯಕರನ ಜೊತೆ ಸೇರಿಕೊಂಡು ಪುಟ್ಟ ಕಂದಮ್ಮಗಳನ್ನು ಸಾಯಿಸಿರುವ ಆರೋಪ ಪ್ರಕರಣ ರಾಮನಗರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮೃತ ಮಕ್ಕಳ ತಂದೆಯ ದೂರಿನಂತೆ, ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ಕಬೀಲಾ (2), ಕಬೀಲನ್ (11) ತಿಂಗಳು ಸಾವನ್ನಪ್ಪಿರುವ ಪುಟ್ಟ ಕಂದಮ್ಮಗಳು. ಕೊಲೆ ಆರೋಪಿಗಳು ಮೂಲತಃ ಬೆಂಗಳೂರು ಎ.ಕೆ. ಕಾಲೋನಿಯ ನಿವಾಸಿಗಳಾಗಿದ್ದು, ರಾಮನಗರ ಟೌನ್​ನ ಮಂಜುನಾಥ್​​​ ನಗರದಲ್ಲಿ ವಾಸವಾಗಿದ್ದರು. ಸ್ವೀಟಿ, (24) ಗ್ರೆಗೋರಿ ಫ್ರಾನ್ಸಿಸ್​(27) ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ.

ಮೃತ ಮಕ್ಕಳ ತಂದೆ ನೀಡಿದ ದೂರಿನ ಪ್ರಕಾರ: ಅಕ್ಟೋಬರ್​ 12ರಂದು ಮೃತ ಮಕ್ಕಳ ತಂದೆ ಶಿವ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ, "4 ವರ್ಷದ ಹಿಂದೆ ಸ್ವೀಟಿಯನ್ನು ಮದುವೆಯಾಗಿದ್ದು ನಮಗೆ ಕಬಿಲಾ (2 ವರ್ಷ) ಮತ್ತು ಕಬಿಲನ್ (11 ತಿಂಗಳು) ಇಬ್ಬರು ಗಂಡು ಮಕ್ಕಳಿದ್ದರು. ನನ್ನ ಹೆಂಡತಿ ಸ್ವೀಟಿ ಮನೆ ಕೆಲಸ ಮಾಡುತ್ತಿದ್ದಳು. ಜುಲೈ​ 30ರಂದು ನನ್ನ ಹೆಂಡತಿ ಇದ್ದಕ್ಕಿದ್ದಂತೆ ನನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಎಲ್ಲಿಗೋ ಹೊರಟು ಹೋಗಿದ್ದಳು. ನಂತರ ಒಂದೂವರೆ ತಿಂಗಳು ಬಿಟ್ಟು ಮನೆಗೆ ಒಬ್ಬಳೆ ಬಂದಿದ್ದಳು. ನನ್ನ ಮಕ್ಕಳನ್ನು ಎಲ್ಲಿ ಎಂದು ಕೇಳಿದ್ದಕ್ಕೆ ಹಾಸ್ಟೆಲ್​ನಲ್ಲಿ ಇದ್ದಾರೆ ಎಂದು ಹೇಳಿದ್ದಳು".

"ನಂತರ ನೋಡೋಣಾ ಎಂದು ಹೋದಾಗ ಕಬೀಲಾನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆನಂತರ ನಾವು ಮಕ್ಕಳನ್ನು ಅಲ್ಲಿಂದ ವಾಪಸ್ ಮನೆಗೆ ಕರೆದುಕೊಂಡು ಬಂದು, ಸ್ವೀಟಿಯನ್ನು ಯಾಕೆ ಮನೆಯಿಂದ ಹೋಗಿದ್ದಿ ಎಂದು ಕೇಳಿದಕ್ಕೆ 'ನೀನು ಬ್ಯಾಂಕ್​ನಲ್ಲಿ ಇಟ್ಟಿದ್ದ ದುಡ್ಡನ್ನು ನಾನು ತೆಗೆದುಕೊಂಡು ಖರ್ಚು ಮಾಡಿಕೊಂಡಿರುತ್ತೇನೆ. ಅದಕ್ಕೆ ನೀವು ಏನಾದರೂ ಮಾಡುತ್ತೀರಾ ಅಂತಾ ರಾಮನಗರಕ್ಕೆ ಹೊರಟು ಹೋಗಿದ್ದೆ. ಇನ್ನು ಮುಂದೆ ಈ ರೀತಿ ಮಾಡಲ್ಲ' ಎಂದು ಹೇಳಿ ಒಂದು ವಾರ ಮನೆಯಲ್ಲಿಯೇ ಇದ್ದಳು".

"ಮನೆಯಲ್ಲಿ ಇದ್ದ ವೇಳೆ ಅವಳು ತೆಗೆದುಕೊಂಡು ಬಂದಿದ್ದ ಬ್ಯಾಗ್​ನಲ್ಲಿ ಗ್ರೆಗೊರಿ ಪ್ರಾನ್ಸಿಸ್ ಎಂಬುವನ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದಳು. ಅದನ್ನು ನೋಡಿ ಆಧಾರ್​ ಕಾರ್ಡ್​ನಲ್ಲಿದ್ದ ನಂಬರ್​ಗೆ ಕರೆ ಮಾಡಿದಾಗ ಅವನು ತಾನು ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಅದಕ್ಕೆ ಅವಳಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಈಗ ವಾಪಸ್ ಅವರ ತಂಟೆಗೆ ಬರಬೇಡಿ ಸುಮ್ಮನಿರಿ ಎಂದು ಹೇಳಲಾಗಿತ್ತು".

"ಆದರೇ ದಿನಾಂಕ ಸೆ. 15ರಂದು ಪತ್ನಿ ಸ್ವೀಟಿ ಇದ್ದಕ್ಕಿದ್ದಂತೆ ಮನೆಯಿಂದ ಮಕ್ಕಳ ಜೊತೆಗೆ ಹೊರಟು ಹೋಗಿದ್ದಳು. ಇದರಿಂದ ನಾನು ಅವಳು ಅವನ ಜೊತೆಯಲ್ಲಿಯೇ ಹೋಗಿರಬಹುದೆಂದು ಸೆ. 17 ರಂದು ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಕಾಣೆಯಾಗಿರುತ್ತಾರೆಂದು ದೂರು ನೀಡಿದ್ದೆ. ಆ ಮೇಲೆ ಹೆಂಡತಿ ತನ್ನ ಮಕ್ಕಳೊಂದಿಗೆ ರಾಮನಗರದಲ್ಲಿ ಇದ್ದಾರೆ ಎಂದು ಗೊತ್ತಾಗಿ ಅವರನ್ನು ಹುಡುಕಿಕೊಂಡು ಅ. 12ರಂದು ರಾಮನಗರಕ್ಕೆ ಬಂದು ವಿಚಾರಿಸಿದಾಗ ಇಬ್ಬರು ಮಕ್ಕಳ ಸಹಿತ ನನ್ನ ಹೆಂಡತಿ ಸ್ವೀಟಿ ಮತ್ತು ಗ್ರೆಗೊರಿ ಪ್ರಾನ್ಸಿಸ್ ಬಾಡಿಗೆಗೆ ಇರುವುದಾಗಿ ಗೊತ್ತಾಯಿತು".

"ಅಲ್ಲಿ ಅಕ್ಕ-ಪಕ್ಕದಲ್ಲಿ ವಿಚಾರ ಮಾಡಿದಾಗ ಎರಡು ಮಕ್ಕಳು ಈಗ್ಗೆ 10-12 ದಿನಗಳ ಹಿಂದೆ ಸತ್ತು ಹೋಗಿದ್ದು, ರಾಮನಗರದಲ್ಲಿ ದಪನ್ ಮಾಡಿದ್ದಾರೆಂದು ತಿಳಿಯುತ್ತದೆ. ಈ ಮಾಹಿತಿಯಿಂದ ನಾನು ರಾಮನಗರದ ಸ್ಮಶಾನದ ಹತ್ತಿರ ಹೋಗಿ ಅಲ್ಲಿನ ಕಾವಲುಗಾರರನ್ನು ಕೇಳಿದಾಗ ಅ. 01 ರಂದು ಒಂದು ಮಗು ಸತ್ತು ಹೋಗಿದ್ದಾಗಿ ಗಂಡ ಹೆಂಡತಿ ಅಂತಾ ಹೇಳಿ ಇಬ್ಬರು ಬಂದು ದಪನ್ ಮಾಡಿ ಹೋಗಿದ್ದರು. ಮತ್ತೆ ಇದಾದ ಒಂದು ವಾರದಲ್ಲಿ ಅ. 07 ರಂದು ಮತ್ತೊಂದು ಮಗುವನ್ನು ದಪನ್ ಮಾಡಲು ಬಂದಿದ್ದರು. ಆಗ ನಾನು ಅನುಮಾನ ಬಂದು ದಪನ್ ಮಾಡಿದ್ದನ್ನು ಫೋಟೋ ಮತ್ತು ವಿಡಿಯೋವನ್ನು ತೆಗೆದಿದ್ದೆ ಎಂದು ತೋರಿಸಿದ್ದರು".

"ನನ್ನ ಹೆಂಡತಿ ಗ್ರೆಗೊರಿ ಪ್ರಾನ್ಸಿಸ್ ಜತೆ ಬರುವಾಗ ನನ್ನ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾಳೆ. ಮಕ್ಕಳು ಮುಂದೆ ಅವರಿಬ್ಬರ ಸಂಬಂಧಕ್ಕೆ ಅಡ್ಡಿಯಾಗಬಹುದೆಂದು ಒಳಸಂಚು ಮಾಡಿ ನನ್ನ ಇಬ್ಬರು ಮಕ್ಕಳನ್ನು ಅವರೇ ಉದ್ದೇಶ ಪೂರ್ವಕವಾಗಿ, ಈಗ ವಾಸವಿದ್ದ ಬಾಡಿಗೆ ಮನೆಯಲ್ಲಿ ಹೊಡೆದು ಬಡೆದು ಸಾಯಿಸಿದ್ದಾರೆ. ಬಳಿಕ ಯಾರಿಗೂ ಗೊತ್ತಾಗದಂತೆ ತಾವಿಬ್ಬರೇ ಇಬ್ಬರು ಮಕ್ಕಳ ಡೆಡ್ ಬಾಡಿಯನ್ನು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಇಂದು 2 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ರಾಮನಗರದ ಐಜೂರು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ .

ಇದನ್ನೂ ಓದಿ:ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ, ಓರ್ವನ ಹತ್ಯೆ

Last Updated : Oct 14, 2024, 12:01 PM IST

ABOUT THE AUTHOR

...view details