ಹುಬ್ಬಳ್ಳಿ:ಗ್ರಾಮಕ್ಕೆ ಮೊದಲ ಬಾರಿಗೆ ಬಂದ ಸಾರಿಗೆ ಬಸ್ಗೆ ಗ್ರಾಮಸ್ಥರು ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದ ಸುದ್ದಿಯನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ ಮತ್ತು ಕೇಳಿರುತ್ತೀರಿ. ಆದರೆ, ಇಲ್ಲೊಂದು ಗ್ರಾಮದಲ್ಲಿ ತಮಗೆ ಒಂದೂವರೆ ದಶಕದಿಂದ ಸೇವೆ ಒದಗಿಸಿ ನಿವೃತ್ತಿಯಾಗುತ್ತಿರುವ ಬಸ್ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಾವನಾತ್ಮಕವಾಗಿ ವಿದಾಯ ಹೇಳಿದ್ದಾರೆ.
ಹೌದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅಲ್ಲಾಪೂರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಗೆ ಕಳೆದ 15 ರಿಂದ 16 ವರ್ಷಗಳಿಂದ ನಿರಂತರ ಸೇವೆ ಸಲ್ಲಿದೆ. ಇಂದು ತನ್ನ ಸೇವೆ ಮುಗಿಸಿ ನಿವೃತ್ತಿಯಾಗುತ್ತಿರುವ ಬಸ್ಗೆ ಅಲ್ಲಾಪೂರ, ಕಡಪಟ್ಟಿ ಹಾಗೂ ಹಳ್ಯಾಳ ಗ್ರಾಮಗಳ ಗ್ರಾಮಸ್ಥರು ತಳಿರು - ತೋರಣ ಕಟ್ಟಿ, ಹೂಗಳಿಂದ ಸಿಂಗಾರ ಮಾಡಿ, ಚಾಲಕ - ನಿರ್ವಾಹಕರಿಗೆ ಸನ್ಮಾನಿಸಿ ಬಳಿಕ ಕೇಸರಿ ಬಾತ್ - ಪಲಾವ್ ಊಟ ಹಾಕಿಸಿ ಬೀಳ್ಕೊಟ್ಟಿದ್ದಾರೆ.
2008ರಲ್ಲಿ ಸೇವೆ ಆರಂಭಿಸಿದ್ದ ಬಸ್:ಹುಬ್ಬಳ್ಳಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಅಲ್ಲಾಪೂರ ಗ್ರಾಮಕ್ಕೆ 2008ರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಘಟಕ-1 ರಿಂದ ಬಸ್ ಸೇವೆ ಪ್ರಾರಂಭಿಸಲಾಗಿತ್ತು. ಅಂದು ಬಸ್ಗೆ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಈ ಬಸ್ ಅಲ್ಲಾಪೂರ, ಕಡಪಟ್ಟಿ ಹಾಗೂ ಹಳ್ಯಾಳ ಗ್ರಾಮಗಳಿಗೆ ಸೇವೆ ಒದಗಿಸಿದೆ. ಮೂರು ಗ್ರಾಮಗಳ ವಿದ್ಯಾರ್ಥಿಗಳು, ಗ್ರಾಮಸ್ಥರು, ರೈತರು, ಕೂಲಿ ಕಾರ್ಮಿಕರು, ನೌಕರರು ಹಾಗೂ ವ್ಯಾಪಾರಸ್ಥರನ್ನು ಹುಬ್ಬಳ್ಳಿಗೆ ಕರೆದೊಯ್ದು, ಕರೆತರುತ್ತಿತ್ತು. ರಾತ್ರಿ ಅಲ್ಲಾಪೂರದಲ್ಲೇ ತಂಗುತ್ತಿದ್ದ ಬಸ್ ಬೆಳಗ್ಗೆ ಗ್ರಾಮದಿಂದ ಹುಬ್ಬಳ್ಳಿಗೆ ಕಡೆಗೆ ಹೊರಡುತ್ತಿತ್ತು.
ಕಿರೀಟ ಬಸ್ ಎಂದೇ ಖ್ಯಾತಿ:ಈ ಬಸ್ ಮುಂಭಾಗದಲ್ಲಿ ಕೆಎಸ್ಆರ್ಟಿಸಿ ಲೋಗೋ ಜೊತೆಗೆ ಎರಡು ಬದಿಯಲ್ಲಿ ನವಿಲುಗಳಿರುವ ಲೋಗೋ ಹಾಕಲಾಗಿತ್ತು. ಇದು ಬಸ್ಗೆ ಕಿರೀಟದಂತೆ ಗೋಚರಿಸುತ್ತಿತ್ತು. ಹೀಗಾಗಿ ಗ್ರಾಮಸ್ಥರು ಇದಕ್ಕೆ ಕಿರೀಟ ಬಸ್ ಎಂದು ಕರೆಯುತ್ತಿದ್ದರು. ಹುಬ್ಬಳ್ಳಿಯಲ್ಲಿ ಒಂದೇ ಮಾದರಿಯ ಹಲವು ಬಸ್ಗಳು ಇದ್ದರೂ ಹಳ್ಯಾಳ, ಕಡಪಟ್ಟಿ, ಅಲ್ಲಾಪೂರ ಗ್ರಾಮಸ್ಥರು, ಅದರಲ್ಲೂ ಅನಕ್ಷರಸ್ಥರು ಕಿರೀಟದಂತೆ ಕಾಣುತ್ತಿದ್ದ ಲೋಗೋ ನೋಡಿ ಇದು ನಮ್ಮೂರ ಬಸ್ ಎಂದು ಸುಲಭವಾಗಿ ಗುರುತಿಸುತ್ತಿದ್ದರು.