ಕರ್ನಾಟಕ

karnataka

'ರಾಜ್ಯದ ನೆಲ ಮತ್ತು ಜಲದ ಬಗ್ಗೆ ದಿ.ಅನಂತ್​​ ಕುಮಾರ್ ಅವರಿಗೆ ಅಪಾರ ಕಾಳಜಿಯಿತ್ತು': ಜನ್ಮದಿನದಂದು ನೆನೆದ ಆರ್​​​. ಅಶೋಕ್ - Late Ananth Kumar birthday

By ETV Bharat Karnataka Team

Published : 4 hours ago

ಇಂದು ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರ 65ನೇ ವರ್ಷದ ಜನ್ಮ ದಿನಾಚರಣೆ. ಈ ಹಿನ್ನೆಲೆ ರಾಜ್ಯದ ಹಲವೆಡೆ ಅವರ ನೆನಪಿನಲ್ಲಿ ಉತ್ತಮ ಸಮಾಜ ಕಾರ್ಯ ನಡೆದಿದೆ. ಈ ಕುರಿತು ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಮಾಹಿತಿ ನೀಡಿದ್ದಾರೆ.

ದಿ.ಅನಂತ್ ಕುಮಾರ್ ಅವರ 65ನೇ ವರ್ಷದ ಜನ್ಮ ದಿನಾಚರಣೆ.
ದಿ.ಅನಂತ್ ಕುಮಾರ್ ಅವರ 65ನೇ ವರ್ಷದ ಜನ್ಮ ದಿನಾಚರಣೆ. (ETV Bharat)

ಬೆಂಗಳೂರು: 'ಕರ್ನಾಟಕ ರಾಜ್ಯದ ನೆಲ ಮತ್ತು ಜಲದ ವಿಷಯವಾಗಿ ದಿವಂಗತ ಅನಂತಕುಮಾರ್​ ಅವರಿಗೆ ಅಪಾರ ಕಾಳಜಿಯಿತ್ತು. ಆತ್ಮೀಯ ಸ್ನೇಹಿತರಾಗಿದ್ದ ಅವರು ಈ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಒಳ್ಳೆಯದು ಎಂದು ಯಾವಾಗಲೂ ಅನ್ನಿಸುತ್ತದೆ'ಎಂದು ವಿರೋಧ ಪಕ್ಷದ ನಾಯಕ ಆರ್​​​. ಅಶೋಕ್​​ ಹೇಳಿದರು.

ದಿವಂಗತ ಅನಂತಕುಮಾರ್‌ 65 ವರ್ಷದ ಜನ್ಮದಿನಾಚರಣೆಯ ಅಂಗವಾಗಿ ಇಂದು ಸೌತ್‌ ಎಂಡ್‌ ವೃತ್ತದಲ್ಲಿರುವ ಅನಂತ ಪ್ರೇರಣಾ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, "ಅಭಿವೃದ್ಧಿಯ ವಿಷಯ ಬಂದರೆ ಅನಂತಕುಮಾರ್​ ಅವರು ಪಕ್ಷಾತೀತವಾಗಿ ಯೋಚಿಸುತ್ತಿದ್ದರು. ಕರ್ನಾಟಕ ರಾಜ್ಯದ ನೆಲ ಮತ್ತು ಜಲದ ವಿಷಯವಾಗಿ ಅವರು ನೀಡಿರುವ ಕೊಡುಗೆ ದೊಡ್ಡದು. ನಮ್ಮ ರಾಜ್ಯದಲ್ಲಿ ಪಕ್ಷ ಸಂವರ್ಧನೆಗೂ ಅವರ ಕೊಡುಗೆ ಅಪಾರವಾಗಿದೆ. ಆತ್ಮೀಯ ಸ್ನೇಹಿತರಾಗಿದ್ದ ಅವರ ಜೊತೆಗೂಡಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೆ. ಈಗಲೂ ಹಲವಾರು ಸಂದರ್ಭಗಳಲ್ಲಿ ಅವರು ಇದ್ದಿದ್ದರೆ ಒಳ್ಳೆಯದಿತ್ತು" ಎಂದು ಅನಿಸುತ್ತದೆ ಎಂದರು.

ದಿ.ಅನಂತ್ ಕುಮಾರ್ ಅವರ 65ನೇ ವರ್ಷದ ಜನ್ಮ ದಿನಾಚರಣೆ. (ETV Bharat)

ಜೋಧಪುರ ಹಾಗೂ ಬೆಂಗಳೂರಿನಲ್ಲಿ ಅನಂತಕುಮಾರ್ ಅವರ 65ನೇ ಜನ್ಮ ದಿನಾಚರಣೆ:ಕರ್ನಾಟಕದಲ್ಲಿ ಜನಿಸಿ ರಾಷ್ಟ್ರ ವ್ಯಾಪಿ ನಾಯಕರಾಗಿ ಬೆಳೆದ ಅನಂತಕುಮಾರ್​ ಅವರ 65ನೇ ಜನ್ಮ ದಿನಾಚರಣೆ ಕಾರ್ಯಕ್ರಮ ರಾಜಸ್ಥಾನದ ಜೋಧಪುರದಲ್ಲಿರುವ ಅದಮ್ಯ ಚೇತನ ಸಂಸ್ಥೆಯಲ್ಲಿ ಹಾಗೂ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಆಚರಿಸಲಾಗಿದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, "ಅನಂತಕುಮಾರ್‌ ಅವರ 65ನೇ ಜನ್ಮ ದಿನಾಚರಣೆಯನ್ನು ರಾಜಸ್ಥಾನದ ಜೋಧಪುರ ಹಾಗೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆಚರಿಸಲಾಗಿದೆ. ಜೋಧಪುರದಲ್ಲಿ ಹಸಿರು ಜೀವನ ಶೈಲಿಯ ಪ್ಲೇಟ್ ಬ್ಯಾಂಕ್​​ ಗಂಟೆಗೆ 15,000 ಚಪಾತಿ ತಯಾರಿಸುವ ಸ್ವಯಂಚಾಲಿತ ಯಂತ್ರ ಹಾಗೂ ನಿತ್ಯ ಅನ್ನದಾನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ".

"ಜನ್ಮದಿನದ ಸಂಭ್ರಮದಲ್ಲಿ ರಾಜಸ್ಥಾನದ ಮಂತ್ರಿಗಳಾದ ಕೆ.ಕೆ. ಬಿಷ್ಣೋಯಿ, ಜೋಗಾರಾಮ್​ ಪಟೇಲ್​, ಜೋರಾರಾಮ್​​ ಕುಂಭಾವತ್​ ಮತ್ತು ಶಾಸಕರುಗಳಾದ ಅತುಲ್​ ಬನ್ಸಾಲಿ, ದೇವೇಂದ್ರ ಜೋಶಿ, ಮಹೇಂದ್ರಸಿಂಗ್​ ರಾಠೋಡ್​​, ರಾವಣಾ ರಜಪೂತ ಸಮಾಜದ ಅಧ್ಯಕ್ಷ ರಾಜೇಂದ್ರ ಸಿಂಗ್​ ಮುಂತಾದವರ ಜೊತೆಗೆ ಕರ್ನಾಟಕದ ಸಂಸದ ಗೋವಿಂದ ಕಾರಜೋಳ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು" ಎಂದು ತೇಜಸ್ವಿನಿ ಅನಂತಕುಮಾರ್‌ ತಿಳಿಸಿದ್ದಾರೆ.

ಅಲ್ಲದೆ, "ಅನಂತಕುಮಾರ್​ ಅವರು ಪರಿಸರದ ರಕ್ಷಣೆಗೆ ಪೂರಕವಾಗಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಸ್ಯಾಗ್ರಹ ಆಂದೋಲನಕ್ಕೆ 2015ರಲ್ಲಿ ಕರೆ ನೀಡಿದ್ದರು. ಅದೇ ವರ್ಷ ಅವರ ಜನ್ಮದಿನವಾದ ಸೆಪ್ಟೆಂಬರ್​ 22 ರಂದು ಬಿ.ಪಿ ವಾಡಿಯಾ ರಸ್ತೆಯ ಅನಂತವನದಲ್ಲಿ ರುದ್ರಾಕ್ಷಿ, ಕದಂಬ, ಬಿಲ್ವ ಮುಂತಾದ ವಿಶೇಷ ಗಿಡಗಳನ್ನು ನೆಟ್ಟಿದ್ದರು. ಇಂದು ಆ ಗಿಡಗಳು 30 ಅಡಿಗಿಂತಲೂ ದೊಡ್ಡದಾಗಿ ಬೆಳೆದು ಆ ಪ್ರದೇಶ ಹಸಿರುಮಯವಾಗಿ ಸುಂದರ ವನವಾಗಿದೆ. ಹೀಗಾಗಿ ಅನಂತವನದಲ್ಲಿಯೂ ಗಿಡ ನೆಡುವ ಕಾರ್ಯಕ್ರಮದ ಮೂಲಕ ಜನ್ಮ ದಿನವನ್ನು ಆಚರಿಸಲಾಯಿತು".

"ಸೌತ್‌ಎಂಡ್‌ ವೃತ್ತದಲ್ಲಿ ಅನಂತಕುಮಾರ್ ಅವರ ಸ್ಮರಾಣಾರ್ಥವಾಗಿ ನಿರ್ಮಿಸಿರುವ ಬೆಂಗಳೂರಿನ ಅನಂತ ಪ್ರೇರಣಾ ಕೇಂದ್ರದಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿನಿತ್ಯ ಅನ್ನದಾನ ನಡೆಯುವ ಸ್ಥಳಗಳಾದ ಬೆಂಗಳೂರಿನ ಅದಮ್ಯ ಚೇತನ, ಜಯನಗರ 4ನೇ ಹಂತ ಕನ್ನಡ ಕಟ್ಟೆ, ನಗರ್ತಪೇಟೆಯ ನಗರೇಶ್ವರ ದೇವಸ್ಥಾನ, ಹಲಸೂರಿನ ಲೇಕ್‌ ವ್ಯೂ ಮಹಾಗಣಪತಿ ದೇವಸ್ಥಾನ, ಲಾಲ್‌ಬಾಗ್‌ ಪಶ್ಚಿಮ ದ್ವಾರದ ಅನಂತಸ್ಮೃತಿ ವನದಲ್ಲಿ ಸಹ ಅವರ ಜನ್ಮದಿನವನ್ನು ಆಚರಿಸಲಾಯಿತು" ಎಂದು ತೇಜಸ್ವಿನಿ ಅನಂತಕುಮಾರ್‌ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ, ಕಲಬುರಗಿಯಲ್ಲಿ ಜನ್ಮದಿನದ ಆಚರಣೆ: "ಹುಬ್ಬಳಿಯ ಅದಮ್ಯ ಚೇತನ, ಅನಂತ ಪ್ರೇರಣಾ ಕೆಂದ್ರ, ಕಲಬುರಗಿಯ ಅದಮ್ಯ ಚೇತನ, ಅನೇಕ ಶಾಲಾ ಕಾಲೇಜುಗಳಲ್ಲಿಯೂ ಜನ್ಮದಿನವನ್ನು ಆಚರಿಸಲಾಯಿತು" ಎಂದು ತೇಜಸ್ವಿನಿ ಅನಂತಕುಮಾರ್‌ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:"ಸಾರಿಗೆ ಸಂಜೀವಿನಿ" ಮೂಲಕ ಉಚಿತ ಹೃದಯ ತಪಾಸಣಾ ಯೋಜನೆ: ಕೆಎಸ್ಆರ್​ಟಿಸಿಗೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ - KSRTC GOT SKOCH NATIONAL AWARD

ABOUT THE AUTHOR

...view details