ಕರ್ನಾಟಕ

karnataka

ETV Bharat / sports

ಮುಂಬೈನಲ್ಲಿ ವಿಶ್ವಕಪ್​ ವಿಜೇತ ಭಾರತಕ್ಕೆ 'ಅಭಿಮಾನಿ ಸಾಗರ'ದ ಸ್ವಾಗತ; ಕ್ರಿಕೆಟಿಗರ ಭವ್ಯ ಮೆರವಣಿಗೆ! - Team India Victory Parade

ಮುಂಬೈನ ಮರೀನ್‌ ಡ್ರೈವ್‌ ಇಂದು ಟಿ-20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್‌ ತಂಡದ ವಿಜಯೋತ್ಸವ ಪರೇಡ್‌ಗೆ ಸಾಕ್ಷಿಯಾಯಿತು. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡದ ಮೆರವಣಿಗೆ ನಡೆದ 17 ವರ್ಷಗಳ ಬಳಿಕ ರೋಹಿತ್​ ಶರ್ಮಾ ಬಳಗ 'ಅಭಿಮಾನ ಸಾಗರ'ದಲ್ಲಿ ಮಿಂದೆದ್ದಿತು.

By ETV Bharat Karnataka Team

Published : Jul 4, 2024, 10:09 PM IST

ಟಿ-20 ವಿಶ್ವಕಪ್​ ವಿಜೇತ ಭಾರತಕ್ಕೆ 'ಅಭಿಮಾನ ಸಾಗರ'ದ ಝೇಂಕಾರ; ನೆಚ್ಚಿನ ಕ್ರಿಕೆಟಿಗರ ಭವ್ಯ ಮೆರವಣಿಗೆ!
ಮುಂಬೈನ್‌ ಮರೀನ್‌ ಡ್ರೈವ್‌ನಲ್ಲಿ ಕಿಕ್ಕಿರಿದು ಸೇರಿರುವ ಕ್ರಿಕೆಟ್‌ ಅಭಿಮಾನಿಗಳು (IANS)

ಮುಂಬೈ(ಮಹಾರಾಷ್ಟ್ರ):ಟಿ-20 ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ ಮುಂಬೈನಲ್ಲಿ ಗುರುವಾರ ಸಂಜೆ ಭವ್ಯ ಸ್ವಾಗತ ದೊರೆಯಿತು. ಅರಬ್ಬಿ ಸಮುದ್ರ ತೀರದ ಮರೀನ್ ಡ್ರೈವ್​ನಲ್ಲಿ ಲಕ್ಷಾಂತರ ಜನದ ಮಧ್ಯೆ ನೆಚ್ಚಿನ ಕ್ರಿಕೆಟಿಗರ ಭವ್ಯ ಮೆರವಣಿಗೆ ಸಾಗಿತು. ಕಿಕ್ಕಿರಿದು ಸೇರಿದ್ದ ಕ್ರಿಕೆಟ್‌ಪ್ರೇಮಿಗಳ ಜೈಕಾರ ಮುಗಿಲು ಮುಟ್ಟಿತ್ತು. ಮತ್ತೊಂದೆಡೆ, ವಾಂಖೆಡೆ ಮೈದಾನ ಹರ್ಷೋದ್ಗಾರಗಳಿಂದ ಪ್ರತಿಧ್ವನಿಸಿತು.

ಕೆರಿಬಿಯನ್ ದ್ವೀಪ ಬಾರ್ಬಡೊಸ್‌ನಲ್ಲಿ ಜೂನ್​ 29ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಈ ಮೂಲಕ ತಂಡ 17 ವರ್ಷಗಳ ಬಳಿಕ ಮತ್ತೆ ವಿಶ್ವಕಪ್​ಗೆ ಮುತ್ತಿಕ್ಕಿತು.

ಹೀಗಾಗಿ ವಿಜೇತ ತಂಡದ ಭವ್ಯ ಸ್ವಾಗತಕ್ಕೆ ಇಡೀ ದೇಶವೇ ಕಾಯುತ್ತಿತ್ತು. ಆದರೆ, ಬೆರಿಲ್ ಚಂಡಮಾರುತದ ಹಿನ್ನೆಲೆಯಲ್ಲಿ ತಂಡ ತವರಿಗೆ ಮರಳುವುದು ನಾಲ್ಕು ದಿನ ವಿಳಂಬವಾಯಿತು. ಇಂದು ಬೆಳಗ್ಗೆ ನಾಯಕ ರೋಹಿತ್​ ಶರ್ಮಾ ನೇತೃತ್ವದ ಟೀಂ, ದೆಹಲಿಗೆ ಬಂದಿಳಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಖುಷಿ ಇಮ್ಮಡಿಯಾಯಿತು.

ವಿಜಯೋತ್ಸವದ ಪರೇಡ್​ಗೆ 'ವಾಟರ್ ಸೆಲ್ಯೂಟ್':ಸ್ವದೇಶಕ್ಕೆ ಬರುತ್ತಿದ್ದಂತೆ ವಿಶ್ವ ಚಾಂಪಿಯನ್‌ ಕ್ರಿಕೆಟಿಗರು ಮೊದಲು ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿಂದ ವಿಜಯೋತ್ಸವ ಪರೇಡ್‌ಗಾಗಿ ವಿಮಾನದಲ್ಲಿ ಮುಂಬೈಗೆ ಸಂಜೆ ಆಗಮಿಸಿದರು. ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆಯ ವೇಳೆಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರಿದ್ದ ವಿಸ್ತಾರಾ ವಿಮಾನಕ್ಕೆ 'ವಾಟರ್ ಸೆಲ್ಯೂಟ್' ನೀಡಲಾಯಿತು.

ಕಿಕ್ಕಿರಿದ ಕ್ರಿಕೆಟ್ ಅಭಿಮಾನಿಗಳು: ನಂತರ ಮರೀನ್ ಡ್ರೈವ್​ಗೆ ವಿಶ್ವ ಚಾಂಪಿಯನ್ನರು ಆಗಮಿಸಿದರು. ಇಲ್ಲಿನ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಮೈದಾನದವರೆಗೆ ಒಂದು ಕಿ.ಮೀ. ದೂರ ಆಕರ್ಷಕ ವಿಜಯೋತ್ಸವ ಪರೇಡ್​ ಸಾಗಿತು. ವಿಶ್ವಕಪ್ ವಿಜೇತರಿಗೆ ಸ್ವಾಗತ ಕೋರಲು ಹಾಗೂ ಕಪ್​ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಮಧ್ಯಾಹ್ನದಿಂದಲೇ ಆಗಮಿಸತೊಡಗಿದರು. ಮುಂಬೈನ ಮೂಲೆ-ಮೂಲೆಗಳಿಂದಲೂ ಜ ಬಂದು ಸೇರಿದರು. ಮಕ್ಕಳು, ಯುವಕರು, ಮಹಿಳೆಯರು, ಹಿರಿಯ ನಾಗರಿಕರಾದಿಯಾಗಿ ವಯಸ್ಸಿನ ಎಲ್ಲೆ ಮೀರಿದ ಜನಸಾಗರ ಅರಬ್ಬಿ ಸಮುದ್ರದ ತೀರದಲ್ಲಿ ಜಮಾಯಿಸಿತು.

2 ಗಂಟೆ ಪರೇಡ್ ವಿಳಂಬ: ಕ್ರಿಕೆಟಿಗರ ವಿಜಯೋತ್ಸವದ ಮೆರವಣಿಗೆಗಾಗಿ ವಿಶೇಷವಾದ ತೆರೆದ ಡೆಕ್ ಬಸ್‌ ಸಿದ್ಧಪಡಿಸಲಾಗಿತ್ತು. ಸಂಜೆ 5 ಗಂಟೆಗೆ ಪರೇಡ್ ಆರಂಭವಾಗಿತ್ತು. ಆದರೆ, 2 ಗಂಟೆಗಳ ಕಾಲ ತಡವಾಗಿ ಆರಂಭವಾದರೂ, ರಸ್ತೆಗಳಲ್ಲಿ ಅಭಿಮಾನಿ ಸಾಗರ ಕರಗಲಿಲ್ಲ. 7 ಗಂಟೆ ಸುಮಾರಿಗೆ ಬಸ್​ನಲ್ಲಿ ವಿಶ್ವಕಪ್‌ ಸಹಿತ ಮೆಚ್ಚಿನ, ನೆಚ್ಚಿನ ಆಟಗಾರರು ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ರೋಮಾಂಚನಗೊಂಡರು. ಆಟಗಾರರು ಟ್ರೋಫಿಯನ್ನು ಅಭಿಮಾನಿಗಳತ್ತ ತೋರಿಸುತ್ತಾ ಉತ್ಸಾಹ ಹೆಚ್ಚಿಸಿದರು.

ತುಂಬಿ ತುಳುಕಿದ ವಾಂಖೆಡೆ:ಚಾಂಪಿಯನ್ನರು ಬಸ್​ನಲ್ಲಿ ಸಾಗುತ್ತಿದ್ದಂತೆ ಆಕಾಶ ಗಾಢವಾದ ಮಾನ್ಸೂನ್ ಮೋಡಗಳಿಂದ ಕವಿದು ತುಂತುರು ಮಳೆ ಹನಿಗಳನ್ನು ಸುರಿಸಿತು. ಈ ಮೂಲಕ ಭಾರತೀಯ ಕ್ರಿಕೆಟಿಗರು ಪ್ರಕೃತಿಯ ಸ್ವಾಗತವನ್ನೂ ಸ್ವೀಕರಿಸಿದರು!. ಮತ್ತೊಂದೆಡೆ, ಮಳೆಯ ನಡುವೆಯೇ ಅಭಿಮಾನಿಗಳು ಛತ್ರಿಗಳನ್ನು ಹಿಡಿದು ಮೈದಾನದತ್ತ ಜೈಕಾರ ಹಾಕುತ್ತಾ ಹೆಜ್ಜೆ ಹಾಕಿದರು.

17 ವರ್ಷಗಳ ನಂತರ ಮುಂಬೈ ಬೀದಿಗಳಲ್ಲಿ ವಿಜಯೋತ್ಸವ:ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶಾವಕಾಶ ನೀಡಲಾಯಿತು. ಹೀಗಾಗಿ ಸಾವಿರಾರು ಜನರು ಸಂಜೆ 5 ಗಂಟೆಯ ಸುಮಾರಿಗೆ ಗೇಟ್‌ಗಳ ಹೊರಗೆ ಕಾಯುತ್ತಿದ್ದರು. ಗೇಟ್​ಗಳನ್ನು ತೆರೆಯುತ್ತಿದ್ದಂತೆ ಅಭಿಮಾನಿಗಳು ನುಗ್ಗಿ ಒಳಹೋದರು. ಅಪಾರ ಜನರಿಂದ ತುಂಬಿ ತುಳುಕಿದ್ದ ವಾಂಖೆಡೆಯಲ್ಲಿ ಡಿಜೆ ಸದ್ದು ಕೂಡ ಜೋರಾಗಿತ್ತು.

ಮುಂಬೈ ಬೀದಿಗಳಲ್ಲಿ ಟಿ-20 ವಿಶ್ವಕಪ್ ವಿಜೇತ ತಂಡದ ಎರಡನೇ ವಿಜಯೋತ್ಸವ ಪರೇಡ್ ಇದಾಗಿದೆ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡದ ವಿಜಯೋತ್ಸವ ಮೆರವಣಿಗೆ ವಿಮಾನ ನಿಲ್ದಾಣದಿಂದ ವಾಂಖೆಡೆ ಸ್ಟೇಡಿಯಂವರೆಗೆ ನಡೆದಿತ್ತು.

ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿ ಮಾಡಿದ ಟೀಂ ಇಂಡಿಯಾ : ವಿಡಿಯೋ ರಿಲೀಸ್​

ABOUT THE AUTHOR

...view details