ಕರ್ನಾಟಕ

karnataka

ಮುಂದಿನ ವರ್ಷ ತೆಲಂಗಾಣದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಆರಂಭ: ಸಿಎಂ ರೇವಂತ್​ ರೆಡ್ಡಿ - Sports University

By ETV Bharat Karnataka Team

Published : Aug 25, 2024, 3:40 PM IST

ತೆಲಂಗಾಣದಲ್ಲಿ ಕ್ರೀಡಾ ವಿಶ್ವ ವಿದ್ಯಾಲಯವೊಂದನ್ನು ಆರಂಭಿಸುವುದಾಗಿ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.

ಎನ್​ಎಂಡಿಸಿ ಹೈದರಾಬಾದ್ ಮ್ಯಾರಥಾನ್​ನ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿದರು
ಎನ್​ಎಂಡಿಸಿ ಹೈದರಾಬಾದ್ ಮ್ಯಾರಥಾನ್​ನ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿದರು (IANS)

ಹೈದರಾಬಾದ್: ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವಂಥ ಸಾಮರ್ಥ್ಯದ ಕ್ರೀಡಾಪಟುಗಳನ್ನು ರೂಪಿಸುವ ಉದ್ದೇಶದಿಂದ ತೆಲಂಗಾಣ ಸರ್ಕಾರವು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಭಾನುವಾರ ಹೇಳಿದರು. ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕ್ರೀಡಾ ವಿಶ್ವವಿದ್ಯಾಲಯವು ಅಂತರರಾಷ್ಟ್ರೀಯ ತರಬೇತುದಾರರನ್ನು ನೇಮಿಸಿಕೊಳ್ಳಲಿದೆ ಎಂದು ಅವರು ಘೋಷಿಸಿದರು.

ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಎನ್​ಎಂಡಿಸಿ ಹೈದರಾಬಾದ್ ಮ್ಯಾರಥಾನ್​ನ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು. ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿನ ಕೌಶಲ್ಯ ತರಬೇತಿ ನೀಡಲು ಇತ್ತೀಚೆಗೆ ಸ್ಥಾಪಿಸಲಾದ ಯಂಗ್ ಇಂಡಿಯಾ ಸ್ಕಿಲ್ಸ್ ವಿಶ್ವವಿದ್ಯಾಲಯದ ಮಾದರಿಯಲ್ಲಿಯೇ ಯಂಗ್ ಇಂಡಿಯಾ ಸ್ಪೋರ್ಟ್ಸ್ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ತಾವು ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದಾಗ, ಅಂತಾರಾಷ್ಟ್ರೀಯ ಮಟ್ಟದ ಒಲಿಂಪಿಕ್ ಕ್ರೀಡಾಪಟುಗಳನ್ನು ರೂಪಿಸಿದ, ಸಿಯೋಲ್​ನಲ್ಲಿರುವ ಕೊರಿಯನ್ ನ್ಯಾಷನಲ್ ಸ್ಪೋರ್ಟ್ಸ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದನ್ನು ಅವರು ಉಲ್ಲೇಖಿಸಿದರು. ಹೈದರಾಬಾದ್​ನಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ದಕ್ಷಿಣ ಕೊರಿಯಾದ ಕ್ರೀಡಾ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

2036ರ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಯೋಜಿಸುತ್ತಿದ್ದು, ಹೈದರಾಬಾದ್​ನಲ್ಲಿ ಒಲಿಂಪಿಕ್ಸ್ ಆಯೋಜಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಿದ್ದೇನೆ ಎಂದು ರೇವಂತ್ ರೆಡ್ಡಿ ಹೇಳಿದರು.

ರಾಜ್ಯ ಸರ್ಕಾರವು ಒಲಿಂಪಿಕ್ಸ್ ಆತಿಥ್ಯ ವಹಿಸಲು ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯಗಳನ್ನು ರಚಿಸುವ ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಂಕಲ್ಪ ಮಾಡಿದೆ ಎಂದ ಅವರು, ಹೈದರಾಬಾದ್ ಅನ್ನು ಇಡೀ ದೇಶದ ಕ್ರೀಡಾಕೇಂದ್ರವನ್ನಾಗಿ ಮಾಡಲು ನಾವು ಬಯಸುತ್ತೇವೆ ಎಂದು ಹೇಳಿದರು.

ಇತ್ತೀಚಿನ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತೆಲಂಗಾಣ ಕ್ರೀಡಾಪಟುಗಳು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಅವರು, 2028 ರಲ್ಲಿ ಅವರು ಭಾರತಕ್ಕೆ ಗರಿಷ್ಠ ಪದಕಗಳನ್ನು ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಗಚಿಬೌಲಿ ಕ್ರೀಡಾ ಗ್ರಾಮದ ವೈಭವವನ್ನು ಪುನಃಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಪ್ರತಿಜ್ಞೆ ಮಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್​ಗೆ ಗ್ರೂಪ್ 1 ಸರ್ಕಾರಿ ಹುದ್ದೆ ನೀಡಲು ಮತ್ತು ಬಾಕ್ಸಿಂಗ್ ಚಾಂಪಿಯನ್ ನಿಖತ್ ಝರೀನ್ ಅವರಿಗೆ 2 ಕೋಟಿ ರೂ.ಗಳ ಬಹುಮಾನ ಮತ್ತು ಡಿಎಸ್​ಪಿ ಕೇಡರ್ ಸರ್ಕಾರಿ ಹುದ್ದೆಯನ್ನು ನೀಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ : ಶಿಖರ್​ ಧವನ್​ ನಿವೃತ್ತಿಗೆ ವಿಶೇಷ ರೀತಿಯಲ್ಲಿ​ ಶುಭ ಹಾರೈಸಿದ ಕಿಂಗ್​ ಕೊಹ್ಲಿ - Virat Kohli Wishes to Dhawan

ABOUT THE AUTHOR

...view details