ಕರ್ನಾಟಕ

karnataka

10 ವಿಕೆಟ್​ಗಳ ಸೋಲಿಗೆ ಲಖನೌ ತಂಡದ ಮಾಲೀಕ ಕೆಂಡ: ನಾಯಕನ ವಿರುದ್ಧ ಮೈದಾನದಲ್ಲೇ ಆಕ್ಷೇಪ - LSG owner Sanjeev Goenka

By ETV Bharat Karnataka Team

Published : May 9, 2024, 5:11 PM IST

ಲಖನೌ ಸೋಲಿನ ಬಳಿಕ ತಂಡದ ಮಾಲೀಕರು ನಾಯಕ ಕೆಎಲ್​ ರಾಹುಲ್​ರನ್ನು ಬಹಿರಂಗವಾಗಿ ಮೈದಾನದಲ್ಲೇ ಪ್ರಶ್ನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ವಿರುದ್ಧ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ.

ಕೆಎಲ್​ ರಾಹುಲ್​ರನ್ನು ಪ್ರಶ್ನಿಸುತ್ತಿರುವ ತಂಡದ ಮಾಲೀಕ ಸಂಜೀವ್​​ ಗೋಯೆಂಕಾ
ಕೆಎಲ್​ ರಾಹುಲ್​ರನ್ನು ಪ್ರಶ್ನಿಸುತ್ತಿರುವ ತಂಡದ ಮಾಲೀಕ ಸಂಜೀವ್​​ ಗೋಯೆಂಕಾ (Source: video grab)

ಹೈದರಾಬಾದ್:ಕ್ರಿಕೆಟ್​ನಲ್ಲಿ ಸೋಲು- ಗೆಲುವು ಸಹಜ. ಗೆದ್ದಾಗ ಹೊಗಳಿ, ಸೋತಾಗ ತೆಗಳುವುದು ವಾಡಿಕೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಸೋತಾಗ ಕೋಟ್ಯಂತರ ಭಾರತೀಯ ಹೃದಯಗಳು ಭಾರವಾಗಿದ್ದವು. ತಂಡದ ಸದಸ್ಯರು ದಿಕ್ಕೆಟ್ಟಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕ್ರಿಕೆಟ್​ ಅಭಿಮಾನಿಗಳು ನೋವಿನಲ್ಲೂ ನಮ್ಮ ಆಟಗಾರರನ್ನು ಸಂತೈಸಿದರು. ಅದು ಕ್ರೀಡಾಸ್ಫೂರ್ತಿಯ ಸೆಲೆಯಾಗಿತ್ತು.

ನಡೆಯುತ್ತಿರುವ ಐಪಿಎಲ್​ನಲ್ಲಿ ಪ್ಲೇಆಫ್​ಗಾಗಿ ತಂಡಗಳ ನಡುವೆ ಬಿರುಸಿನ ಪೈಪೋಟಿ ಇದೆ. ಒಂದೊಂದು ಪಂದ್ಯವೂ ಮಹತ್ವದ್ದಾಗಿದೆ. ಸೋತಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ಗೆಲುವೊಂದೇ ಏಕೈಕ ಗುರಿಯಾಗಿದೆ. ಇಂತಿಪ್ಪ, ಮೇ 8 ರಂದು ನಡೆದ ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್​​ 10 ವಿಕೆಟ್​ಗಳ ಸೋಲು ಕಂಡಿತು. ಇದು ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ.

ತಂಡದ ಸಾಂಘಿಕ ಪ್ರದರ್ಶನದ ಹೊರತಾಗಿಯೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಸೋಲಿನಿಂದಾಗಿ ಪ್ಲೇ ಆಫ್​ನಿಂದ ಹೊರಬೀಳುವ ಆತಂಕ ಹೆಚ್ಚಾಗಿದೆ. ಇದು ಎಲ್​ಎಸ್​ಜಿ ತಂಡದ ಆಡಳಿತ ಮಂಡಳಿಗೆ ಇನ್ನಿಲ್ಲದ ಕೋಪ ತರಿಸಿದೆ. ಇದಕ್ಕೆ ಸಾಕ್ಷಿ, ಪಂದ್ಯ ಮುಗಿದ ಬಳಿಕ ಮೈದಾನದ ಹೊರಗೆ ಅಭಿಮಾನಿಗಳ ಎದುರಲ್ಲೇ ತಂಡದ ಮಾಲೀಕರು, ನಾಯಕ ಕೆಎಲ್​ ರಾಹುಲ್​ ಜೊತೆ ಮಾತಿನ ಚಕಮಕಿ ನಡೆಸಿದ್ದು.

ರಾಹುಲ್​- ಮಾಲೀಕರ ನಡುವೆ ಬಹಿರಂಗ ಮಾತು:ಮೈದಾನದ ಬೌಂಡರಿ ಗೆರೆಯ ಬಳಿ ಎಲ್​ಎಸ್​ಜಿ ತಂಡದ ಮಾಲೀಕ ಸಂಜೀವ್​​ ಗೋಯೆಂಕಾ ಅವರು ರಾಹುಲ್​ ಎದುರು ಸೋಲಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕನ ನಿರ್ಧಾರಗಳು ಸರಿ ಇಲ್ಲ ಎಂಬಂತೆ ಅವರು ಕೋಪ ತೋರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ತಂಡದ ಮಾಲೀಕರ ಈ ನಡೆದ ನೆಟ್ಟಿಗರ ಆಕ್ಷೇಪಕ್ಕೆ ಕಾರಣವಾಗಿದೆ. ತಂಡದ ನಾಯಕನನ್ನು ಬಹಿರಂಗವಾಗಿ ಪ್ರಶ್ನೆ ಮಾಡುವುದು ಸರಿಯಲ್ಲ. ಹಿನ್ನಡೆಯ ಕುರಿತು ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಯಬೇಕು. ಗೋಯೆಂಕಾ ಅವರ ನಡೆ ಕೆಳಮಟ್ಟದ್ದಾಗಿದೆ ಎಂದು ಟೀಕಿಸಿದ್ದಾರೆ.

ಸೋಲು ತಂಡಕ್ಕೆ ನಿರಾಸೆ ತಂದಿರುವುದು ಸಹಜ. ಆದರೆ, ನಾಯಕನನ್ನು ಹೀಗೆ ಬಹಿರಂಗವಾಗಿ ಪ್ರಶ್ನಿಸುವುದು, ನಿರ್ಧಾರಗಳನ್ನು ಟೀಕಿಸುವುದು ತಪ್ಪು. ತಂಡದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಬೇಕಿತ್ತು ಎಂದು ಬಳಕೆದಾರರೊಬ್ಬರು ವಿಡಿಯೋ ಸಮೇತ ಬರೆದುಕೊಂಡಿದ್ದಾರೆ.

ಇನ್ನೊಬ್ಬ ನೆಟ್ಟಿಗ, ನಾನು ಈ ಹಿಂದೆ ಹಲವು ಬಾರಿ ಕೆಎಲ್ ರಾಹುಲ್ ಅವರನ್ನು ಟೀಕಿಸಿದ್ದೇನೆ. ಆದರೆ, ಈಗ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಮಾಲೀಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂದ್ಯ ಹೀಗಿತ್ತು:ಮೊದಲು ಬ್ಯಾಟ್ ಮಾಡಿದ ಎಲ್​​ಎಸ್​ಜಿ ಬ್ಯಾಟಿಂಗ್​ ವೈಫಲ್ಯದಿಂದ 165 ರನ್​ ಗಳಿಸಿತು. ಗುರಿ ಬೆನ್ನತ್ತಿದ ಸನ್​ರೈಸರ್ಸ್​ ಹೈದರಾಬಾದ್​ ಕೇವಲ 58 ಎಸೆತಗಳಲ್ಲಿ ಅಂದರೆ 9.4 ಓವರ್​ಗಳಲ್ಲಿ 167 ರನ್​ ಗಳಿಸಿ ಗೆಲುವಿನ ಕೇಕೆ ಹಾಕಿತು. ಎಸ್​ಆರ್​ಹೆಚ್​ ಓಪನರ್‌ಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮೈದಾನದ ಮೂಲೆಮೂಲೆಗೂ ಚೆಂಡನ್ನು ಬಾರಿಸಿದರು.

ಇದನ್ನೂ ಓದಿ:ಲಖನೌ 20 ಓವರ್​ಗೆ 165, ಹೈದರಾಬಾದ್​ 58 ಎಸೆತಗಳಲ್ಲಿ 167: ಸನ್​ರೈಸರ್ಸ್​ಗೆ 10 ವಿಕೆಟ್​ಗಳ ಭರ್ಜರಿ ಗೆಲುವು - SRH vs LSG match

ABOUT THE AUTHOR

...view details