ಬೆಂಗಳೂರು: ಮೊದಲ ಆವೃತ್ತಿಯ ಯಶಸ್ಸಿನ ಬಳಿಕ ಎರಡನೇ ಆವೃತ್ತಿಗೆ ಸಜ್ಜಾಗಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಕಪ್ನಲ್ಲಿ ಈ ಸಲ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಡಲಿವೆ.
ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮ್ಯಾನಿಟೇರಿಯನ್ ಮಿಷನ್ ವತಿಯಿಂದ ಆಯೋಜಿಸಲ್ಪಡುವ ಟ್ರೋಫಿಯನ್ನು ಇಂದು ಬೆಂಗಳೂರಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಹಾಗೂ ಮಧುಸೂದನ್ ಅನಾವರಣಗೊಳಿಸಿದರು.
'ಒನ್ ವರ್ಲ್ಡ್ ಒನ್ ಫ್ಯಾಮಿಲಿ' (OWOF) ಕಪ್ ಅನ್ನು ಒಂದು ಮಾನವೀಯ ಉದ್ದೇಶದಿಂದ ಆಯೋಜಿಸಲಾಗುತ್ತಿದ್ದು, ಆ ಮೂಲಕ ನಿವೃತ್ತ ಕ್ರಿಕೆಟ್ ದಿಗ್ಗಜರು ಚಿಕ್ಕಬಳ್ಳಾಪುರ ಜಿಲ್ಲೆಯ ಕ್ರಿಕೆಟ್ ಮೈದಾನದಲ್ಲಿ ಮತ್ತೊಮ್ಮೆ ಒಗ್ಗೂಡಲಿದ್ದಾರೆ. ಫೆಬ್ರವರಿ 8, 2025ರಂದು ಮುದ್ದೇನಹಳ್ಳಿಯ ಸಾಯಿ ಕೃಷ್ಣನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್- 025'ನಲ್ಲಿ ಭಾರತ ಹಾಗೂ ಶ್ರೀಲಂಕಾದ ಮಾಜಿ ಅಂತಾರಾಷ್ಟ್ರೀಯ ದಿಗ್ಗಜ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ.
ಜನವರಿ 2024ರಲ್ಲಿ ನಡೆದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ನ ಮೊದಲ ಆವೃತ್ತಿಯ ಎರಡು ತಂಡಗಳನ್ನು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಆಲ್ರೌಂಡರ್ ಯುವರಾಜ್ ಸಿಂಗ್ ಮುನ್ನಡೆಸಿದ್ದರು. ಈ ತಂಡದಲ್ಲಿ ಏಳು ರಾಷ್ಟ್ರಗಳ ವಿವಿಧ ಮಾಜಿ ಆಟಗಾರರು ಭಾಗಿಯಾಗಿದ್ದರು.
ಈ ಸಲ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ ಮತ್ತು ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್, ಚಮಿಂಡಾ ವಾಸ್ ಅವರಂತಹ ದಿಗ್ಗಜರು ಈ ಬಾರಿ ಭಾರತ ಮತ್ತು ಶ್ರೀಲಂಕಾದ ನಿವೃತ್ತ ದಿಗ್ಗಜರು ಮಾನವೀಯ ಕಾರಣಕ್ಕಾಗಿ ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ಪಂದ್ಯದ ಮೂಲಕ ಸಂಗ್ರಹವಾಗುವ ಹಣವನ್ನು ಸಾಮಾಜಿಕ ಪರಿಣಾಮಕ್ಕಾಗಿ ನಿರ್ದಿಷ್ಟ ಯೋಜನೆಗಳಿಗೆ ಬಳಸಲಾಗುತ್ತದೆ.
''2025ರ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ನಲ್ಲಿ ಭಾರತ ಮತ್ತು ಶ್ರೀಲಂಕಾದ ಪ್ರಸಿದ್ಧ ಕ್ರಿಕೆಟಿಗರು ಅವರ ದೇಶಗಳಿಗಾಗಿ ಅಲ್ಲದೆ ಇಡೀ ಮಾನವೀಯತೆಗಾಗಿ ಕಣಕ್ಕಿಳಿಯಲಿದ್ದಾರೆ. ಈ ಸಲದ ಕ್ರಿಕೆಟ್ ಆಟವು ಗಡಿಗಳನ್ನು ಮೀರಿ ಏಕತೆ, ಕರುಣೆ, ಕಾಳಜಿ, ಸಾಮೂಹಿಕ ಜವಾಬ್ದಾರಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಲಿದೆ. ನಾವು ಗಡಿಗಳನ್ನು ಮಸುಕುಗೊಳಿಸಿ ಮಾನವೀಯತೆಯ ಸಮುದ್ರದಲ್ಲಿ ವಿಲೀನಗೊಳ್ಳುವ ಸಮಯ ಇದಾಗಿದೆ'' ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ನ ಸಂಸ್ಥಾಪಕ ಮಧುಸೂದನ್ ಸಾಯಿ ತಿಳಿಸಿದರು.
ಭಾರತದ ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಮಾತನಾಡಿ, ''ನಿಜವಾದ ಶ್ರೇಷ್ಠತೆ ನಾವು ಗಳಿಸುವ ರನ್ಗಳಲ್ಲಿ ಅಲ್ಲ, ನಾವು ಜೀವಿಸುವ ಜೀವನದಲ್ಲಿ ಅಡಗಿದೆ ಎಂದು ನನಗೆ ಕ್ರಿಕೆಟ್ ಕಲಿಸಿದೆ. ನನ್ನ ಕ್ರೀಡಾ ದಿನಗಳಲ್ಲಿ, ನಾವು ನಮ್ಮ ರಾಷ್ಟ್ರದ ಹೆಮ್ಮೆಗಾಗಿ ಆಡಿದ್ದೇವೆ. ಇಲ್ಲಿ ಮಾನವೀಯತೆಯ ಹೆಮ್ಮೆಗಾಗಿ ಆಡುತ್ತೇವೆ. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಒಂದು ಸಾಮೂಹಿಕ ಗೆಲುವಾಗಿದೆ. ಈ ಗೆಲುವು ಕೇವಲ ಒಂದು ತಂಡ, ಒಂದು ದೇಶ ಅಥವಾ ಒಂದು ಖಂಡಕ್ಕೆ ಸೇರಿದ್ದಲ್ಲ, ಆದರೆ ಅದು ಇಡೀ ಮಾನವೀಯತೆಗೆ ಸೇರಿದ್ದು'' ಎಂದರು.
ಕ್ಯಾಂಪಸ್ನಲ್ಲಿರುವ ಬಾಲಕರಿಗಾಗಿ ಇರುವ ವಸತಿ ಕ್ರಿಕೆಟ್ ಅಕಾಡೆಮಿಗೆ ಜಿ.ಆರ್. ವಿಶ್ವನಾಥ್ ಹೆಸರು ನಾಮಕರಣ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮ್ಯಾನಿಟೇರಿಯನ್ ಮಿಷನ್ ಕುರಿತು : ಕಳೆದ 12 ವರ್ಷಗಳಲ್ಲಿ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮ್ಯಾನಿಟೇರಿಯನ್ ಮಿಷನ್ ಮೂಲಕ 80 ದೇಶಗಳಲ್ಲಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಗತ್ಯಗಳನ್ನು ಪೂರೈಸಿದೆ. ಸಂಪೂರ್ಣವಾಗಿ ಉಚಿತವಾದ ಕಾರ್ಯಕ್ರಮಗಳು ಮತ್ತು ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುವ ಮೂಲಕ ಅನೇಕ ಜಾಗತಿಕ ನಾಯಕರ ಗಮನ ಸೆಳೆದಿದೆ.
ಭಾರತ ತಂಡ : ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸುಬ್ರಹ್ಮಣ್ಯಂ ಬದ್ರಿನಾಥ್, ನಮನ್ ಓಜಾ, ಪ್ರಗ್ಯಾನ್ ಓಜಾ, ಸುಜಿತ್ ಸೋಮಸುಂದರ್, ಅಭಿಮನ್ಯು ಮಿಥುನ್, ಅಶೋಕ್ ದಿಂಡಾ, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಪಾರ್ಥಿವ್ ಪಟೇಲ್, ಮನೋಜ್ ತಿವಾರಿ
ಶ್ರೀಲಂಕಾ ತಂಡ : ಅರವಿಂದ ಡಿ ಸಿಲ್ವಾ, ಅರ್ಜುನ್ ರಣತುಂಗ, ತಿಲಕರತ್ನೆ ದಿಲ್ಶಾನ, ಉಪುಲ್ ತರಂಗ, ತಿಸಾರ ಪರೇರಾ, ತರಂಗ ಪರಣವಿತನ, ನುವಾನ್ ಜೋಯ್ಸಾ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್, ಚಮಿಂದಾ ವಾಸ್, ರವೀಂದ್ರ ಪುಷ್ಪಕುಮಾರ, ಅಸೆಲಾ ಗುಣರತ್ನೆ, ಮಿಲಿಂದ ಸಿರಿವರ್ಧನ, ತಿಲಾನ್ ತುಷಾರ, ರೊಮೇಶ್ ಕಲುವಿತರಣ
ಪಂದ್ಯದ ಸ್ಥಳ : ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ
ದಿನಾಂಕ : 8 ಫೆಬ್ರವರಿ 2025
ಇದನ್ನೂ ಓದಿ: ರಣಜಿ ಟ್ರೋಫಿ: ಹರಿಯಾಣ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡದಲ್ಲಿ ಕೆ.ಎಲ್.ರಾಹುಲ್