ಕರ್ನಾಟಕ

karnataka

ಬಾರ್ಬಡೋಸ್‌ನಲ್ಲೇ ಟೀಂ ಇಂಡಿಯಾ ಬಾಕಿ; ಇಂದು ಸಂಜೆ ಸ್ವದೇಶಕ್ಕೆ ಪ್ರಯಾಣ ಸಾಧ್ಯತೆ - Indian Cricket Team

By PTI

Published : Jul 2, 2024, 11:48 AM IST

ಭೀಕರ ಚಂಡಮಾರುತದಿಂದಾಗಿ ಬಾರ್ಬಡೋಸ್​ನಲ್ಲೇ ಸಿಲುಕಿರುವ ಟೀಂ ಇಂಡಿಯಾ, ಇಂದು ಸಂಜೆ ಸ್ವದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

ಟೀಂ ಇಂಡಿಯಾ
ಟೀಂ ಇಂಡಿಯಾ (ಫೋಟೋ ಕೃಪೆ BCCI)

ಬ್ರಿಡ್ಜ್​ಟೌನ್​(ಬಾರ್ಬಡೊಸ್​): ಚಂಡಮಾರುತದಿಂದಾಗಿ ಬಾರ್ಬಡೋಸ್​ನಲ್ಲಿ ಸಿಲುಕಿರುವ ಟಿ20 ವಿಶ್ವಕಪ್​ ವಿಜೇತ ಭಾರತ ತಂಡ ಇಂದು ಸಂಜೆ ಸ್ವದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಮುಂದಿನ 6ರಿಂದ 12 ಗಂಟೆಯೊಳಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಬಾರ್ಬಡೋಸ್​ ಪ್ರಧಾನಿ ಮಿಯಾ ಮೊಟ್ಲಿ ತಿಳಿಸಿದ್ದಾರೆ.

ಬಾರ್ಬಡೋಸ್​ನಲ್ಲಿ ಸೋಮವಾರ ಬೆರಿಲ್​ ಚಂಡಮಾರುತ ಅಪ್ಪಳಿಸಿದ್ದರಿಂದ ವಿಮಾನಯಾನ ಸೇರಿದಂತೆ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವಿಶ್ವಕಪ್​ ಟೂರ್ನಿಗಾಗಿ ಬಾರ್ಬಡೋಸ್​ಗೆ ತೆರಳಿದ್ದ ಟೀಂ ಇಂಡಿಯಾ ಫೈನಲ್​ ಪಂದ್ಯದ ಬಳಿಕ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿಕೊಂಡಿದೆ. ತಂಡದ ಆಟಗಾರರೊಂದಿಗೆ ಸಹಾಯಕ ಸಿಬ್ಬಂದಿ, ಕೆಲವು ಬಿಸಿಸಿಐ ಅಧಿಕಾರಿಗಳು ಮತ್ತು ಆಟಗಾರರ ಕುಟುಂಬಗಳು ಕಳೆದೆರಡು ದಿನಗಳಿಂದ ನಗರದಲ್ಲಿ ಬೀಡುಬಿಟ್ಟಿದ್ದಾರೆ.

ಪ್ರಧಾನಿ ಮೋಟ್ಲಿ ಪ್ರತಿಕ್ರಿಯಿಸಿ, ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನ ಸಂಪೂರ್ಣವಾಗಿ ತಿಳಿಯಾಗುವ ನಿರೀಕ್ಷೆ ಇದೆ. ಆದರೆ ಈ ಬಗ್ಗೆ ಮುಂಚಿತವಾಗಿ ಏನನ್ನೂ ಹೇಳಬಯಸುವುದಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯಲಾಗುತ್ತದೆ. ಸದ್ಯ ಏರ್​ಪೋರ್ಟ್​ ಸಿಬ್ಬಂದಿ ಅಂತಿಮ ತಪಾಸಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೋಮವಾರ 'ಬೆರಿಲ್' ಚಂಡಮಾರುತ ಬಾರ್ಬಡೋಸ್ ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಹಾನಿ ಮಾಡಿದೆ. ಸುಮಾರು ಮೂರು ಲಕ್ಷ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಭಾನುವಾರ ಸಂಜೆಯಿಂದ ಎಲ್ಲಾ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಸುದ್ದಿಸಂಸ್ಥೆಯ ವರದಿ ಪ್ರಕಾರ, ಭಾರತೀಯ ತಂಡ ಮತ್ತು ಇತರರು ಸ್ಥಳೀಯ ಕಾಲಮಾನ ಮಂಗಳವಾರ ಸಂಜೆ 6 ಗಂಟೆಗೆ ಅಂದರೆ ಬುಧವಾರ ಬೆಳಗಿನ ಜಾವ 3:30ಕ್ಕೆ ಬ್ರಿಡ್ಜ್‌ಟೌನ್‌ನಿಂದ ಹೊರಟು ಭಾರತೀಯ ಕಾಲಮಾನ ಪ್ರಕಾರ, ಬುಧವಾರ ರಾತ್ರಿ 8.45ಕ್ಕೆ ಇಲ್ಲಿಗೆ ತಲುಪಲಿದ್ದಾರೆ.

ವಿಶ್ವವಿಜೇತ ಟೀಂ ಇಂಡಿಯಾ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಲಿದ್ದಾರೆ. ಆದರೆ ಆ ಕಾರ್ಯಕ್ರಮದ ವೇಳಾಪಟ್ಟಿ ಅಂತಿಮವಾಗಿಲ್ಲ.

ಇದನ್ನೂ ಓದಿ:ಇನ್​ಸ್ಟಾಗ್ರಾಮ್​ನಲ್ಲಿ ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿಯ ಒಂದೇ ಒಂದು ಪೋಸ್ಟ್​: ಬಾಲಿವುಡ್ ಜೋಡಿಯ ದಾಖಲೆ ಉಡೀಸ್!​ - Virat Kohli Instagram post

ABOUT THE AUTHOR

...view details