ಕರ್ನಾಟಕ

karnataka

ETV Bharat / opinion

ಚೀನಾ- ಭಾರತ ನಡುವಿನ ಎಲ್​ಎಸಿ ಬಿಕ್ಕಟ್ಟು ಪರಿಹಾರ ಯಾವಾಗ, ಉಭಯ ರಾಷ್ಟ್ರಗಳ ನಿಲುವೇನು? - Line of Actual Control

ಚೀನಾ ಮತ್ತು ಭಾರತದ ನಡುವಿನ ಗಡಿ ಬಿಕ್ಕಟ್ಟು ಇತ್ಯರ್ಥದ ಪ್ರಯತ್ನ ನಡೆಯುತ್ತಿದ್ದರೂ, ಯಾವುದೇ ಫಲ ಕಾಣುತ್ತಿಲ್ಲ. ಈಚೆಗೆ ಕಝಾಕಿಸ್ತಾನದಲ್ಲಿ ನಡೆದ ಶಾಂಘೈ ಸಹಕಾರ ಶೃಂಗಸಭೆಯ ನಂತರವೂ ಈ ನಿರೀಕ್ಷೆ ಹುಸಿಯಾಗಿದೆ.

By Major General Harsha Kakar

Published : Jul 8, 2024, 9:38 PM IST

ಚೀನಾ- ಭಾರತ ನಡುವಿನ ಎಲ್​ಎಸಿ ಬಿಕ್ಕಟ್ಟು
ಚೀನಾ- ಭಾರತ ನಡುವಿನ ಎಲ್​ಎಸಿ ಬಿಕ್ಕಟ್ಟು (ETV Bharat)

ಭಾರತ ಮತ್ತು ಚೀನಾದ ಮಧ್ಯೆ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಉಭಯ ರಾಷ್ಟ್ರಗಳ ನಡುವಿನ ಗಡಿವಿವಾದ ಬಗೆಹರಿದಿಲ್ಲ. ಜೊತೆಗೆ ಎರಡು ಮಹತ್ವಾಕಾಂಕ್ಷಿ ರಾಷ್ಟ್ರಗಳ ನಡುವಿನ ಸ್ಪರ್ಧೆಯು ಮತ್ತಷ್ಟು ಹೆಚ್ಚಿದೆ. ಹೀಗಾಗಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಸಾಂಪ್ರದಾಯಿಕವಾಗಿ ಶುಭಾಶಯಗಳನ್ನೂ ಕೋರಿಲ್ಲ. ಇದು ಭಾರತದ ಮೇಲೆ ಚೀನಾದ ಅಸಂತುಷ್ಟ ಭಾವವನ್ನು ತೋರಿಸುತ್ತದೆ.

ಕೆಲ ದಿನಗಳ ಹಿಂದೆ ಕಝಾಕಿಸ್ತಾನದ ಅಸ್ತಾನಾದಲ್ಲಿ ನಡೆದ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯಿ ಭೇಟಿಯಾಗಿದ್ದರು. ಮಾತುಕತೆಯ ಬಳಿಕ ಕೊನೆಯಲ್ಲಿ ಇಬ್ಬರೂ ಜಂಟಿ ಹೇಳಿಕೆ ನೀಡುತ್ತಾರೆ ಎಂಬ ನಿರೀಕ್ಷೆ ಎಂದಿನಂತೆ ಹುಸಿಯಾಯಿತು. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಮೂರನೇ ಅವಧಿಯ ಮೋದಿ ಸರ್ಕಾರದಲ್ಲಿನ ಮೊದಲ ಸಭೆಯು ಕೆಲವು ಸಕಾರಾತ್ಮಕ ಫಲಿತಾಂಶವನ್ನು ಉಂಟುಮಾಡುತ್ತದೆ ಎಂಬ ಭರವಸೆ ಇತ್ತು.

ಉಭಯ ರಾಷ್ಟ್ರಗಳ ಸಂವಾದದ ಬಳಿಕ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ವಿದೇಶಾಂಗ ಸಚಿವ ಜೈಶಂಕರ್ ಅವರು, ‘ಗಡಿ ಪ್ರದೇಶಗಳಲ್ಲಿ ಉಳಿದಿರುವ ಸಮಸ್ಯೆಗಳ ಶೀಘ್ರ ಪರಿಹಾರದ ಕುರಿತು ಚರ್ಚಿಸಲಾಗಿದೆ. ರಾಜತಾಂತ್ರಿಕತೆ ಮತ್ತು ಸೇನಾ ಪಡೆಗಳ ಮೂಲಕ ಸಮಸ್ಯೆ ಪರಿಹಾರ ಯತ್ನಗಳನ್ನು ನಡೆಸಲಾಗುವುದು. ಎರಡು ರಾಷ್ಟ್ರಗಳ ನಡುವಿನ ಗಡಿಯನ್ನು ಗೌರವಿಸುವುದು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವುದು ಅತ್ಯಗತ್ಯ. ಪರಸ್ಪರ ಗೌರವ, ಸಂವೇದನಾಶೀಲತೆ ಮತ್ತು ಹಿತಾಸಕ್ತಿಯನ್ನು ಕಾಪಾಡುವುದು ದ್ವಿಪಕ್ಷೀಯ ಸಂಬಂಧಗಳಿಗೆ ಸಹಕಾರಿ ಎಂದು ಹೇಳಿದ್ದರು.

ವಿದೇಶಾಂಗ ಇಲಾಖೆಯು ಹೇಳಿಕೆ ಬಿಡುಗಡೆ ಮಾಡಿ, "ಗಡಿ ಪ್ರದೇಶಗಳಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವುದು ಎರಡೂ ಕಡೆಯ ಹಿತಾಸಕ್ತಿಯಲ್ಲ ಎಂದು ಇಬ್ಬರು ಸಚಿವರು ಒಪ್ಪಿಕೊಂಡಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಗೌರವಿಸಬೇಕು. ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕು" ಎಂದು ಹೇಳಿತ್ತು.

ಆದರೆ, ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಾಮ್ಯತೆ ಇರಲಿಲ್ಲ. ಚೀನಾ ರಾಯಭಾರ ಕಚೇರಿ ಹೇಳಿಕೆ ಪ್ರಕಾರ, 'ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ದೃಷ್ಟಿಕೋನದಿಂದ ನೋಡಬೇಕು. ಸಂವಹನವನ್ನು ಬಲಪಡಿಸಬೇಕು. ಚೀನಾ-ಭಾರತ ಸಂಬಂಧಗಳ ಉತ್ತಮ ಮತ್ತು ಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಭಿನ್ನಾಭಿಪ್ರಾಯಗಳನ್ನು ನಿರ್ವಹಿಸಬೇಕು. ಎರಡೂ ಕಡೆಯವರು ಸಕಾರಾತ್ಮಕ ಚಿಂತನೆಗೆ ಬದ್ಧರಾಗಿರಬೇಕು. ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಬೇಕು ಎಂದಿತ್ತು.

ಗಡಿ ಸಮಸ್ಯೆ ಬಗ್ಗೆ ಮೋದಿ ಹೇಳಿದ್ದಿಷ್ಟು:18ನೇ ಲೋಕಸಭೆ ಚುನಾವಣಾ ಪೂರ್ವದಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಡಿ ಬಿಕ್ಕಟ್ಟನ್ನು ಪರಿಹರಿಸುವ ಬಗ್ಗೆ ಮೋದಿ ಸುಳಿವು ನೀಡಿದ್ದರು. "ನಮ್ಮ ಗಡಿಯಲ್ಲಿನ ದೀರ್ಘಕಾಲದ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ದ್ವಿಪಕ್ಷೀಯ ಸಂವಹನವನ್ನು ಹೆಚ್ಚಿಸಬೇಕು. ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಧನಾತ್ಮಕ ಮತ್ತು ರಚನಾತ್ಮಕ ದ್ವಿಪಕ್ಷೀಯ ಮಾತುಕತೆ ನಡೆಸಬೇಕು. ನಮ್ಮ ಗಡಿಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ" ಎಂದಿದ್ದರು.

ಪ್ರಧಾನಿ ಮೋದಿ ಮೂರನೇ ಬಾರಿಗೆ ಪುನರಾಯ್ಕೆಯಾದ ನಂತರ ಚೀನಾದ ಸರ್ಕಾರಿ ಪತ್ರಿಕೆಯಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯು ಭಾರತ-ಚೀನಾ ಸಂಬಂಧಗಳನ್ನು ಒಳಗೊಂಡ ಸಂಪಾದಕೀಯ ಪ್ರಕಟಿಸಿತು. ಎಲ್​ಎಸಿ ವಿವಾದವು ಇತ್ತೀಚಿನ ವಿಷಯವಲ್ಲ, ದಶಕಗಳಿಂದಲೂ ಅಸ್ತಿತ್ವದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಭಾರತವು ದೇಶೀಯ ನೀತಿಗಳ ಮೇಲೆ ನಿಗ್ರಹ ಸೇರಿದಂತೆ ಚೀನಾ ವಿರೋಧಿ ಕ್ರಮಗಳನ್ನು ತೆಗೆದುಕೊಂಡಿದೆ. ಅರ್ಥಾತ್​ ಚೀನೀ ಕಂಪನಿಗಳ ಮೇಲೆ ನಿರ್ಬಂಧ, ವೀಸಾ ಅಮಾನತಿನಂತಹ ಕ್ರಮಗಳು ಋಣಾತ್ಮಕ ಮನೋಭಾವವನ್ನು ತೋರಿಸುತ್ತದೆ ಎಂದು ಪ್ರಸ್ತಾಪಿಸಿತ್ತು.

ಈ ಮೂಲಕ ಚೀನಾವು ಭಾರತದೊಂದಿಗೆ ಸಾಮಾನ್ಯ ಸಂಬಂಧಗಳನ್ನು ಮುಂದುವರಿಸಿಕೊಂಡು ಹೋಗಲು ಬಯಸಿದರೂ, 2020ರ ಹಿಂದಿನಂತೆ ಇರಲು ಬಯಸುವುದಿಲ್ಲ. ಎಲ್​ಎಸಿ ಬಿಕ್ಕಟ್ಟನ್ನು ಮುಂದು ಮಾಡಿಕೊಂಡು ಭಾರತವನ್ನು ನಿಯಂತ್ರಿಸುವ ಇರಾದೆ ಅದರಾಗಿತ್ತು. ಆದರೆ, ಭಾರತ ಸರ್ಕಾರ ಎಲ್​ಎಸಿ ಬಿಕ್ಕಟ್ಟನ್ನು ಸಡಿಲಿಸದೆ ಬಲವಾದ ಹಿಡಿತದಿಂದ ರಾಜತಾಂತ್ರಿಕವಾಗಿ ಚೀನಾವನ್ನು ಎದುರಿಸುತ್ತಿದೆ.

ಭಾರತದ ವಿರುದ್ಧ ಚೀನಾ ಕಿಡಿಕಿಡಿ:ಅಮೆರಿಕದ ನಿಯೋಗವು ಹಿಮಾಚಲಪ್ರದೇಶದ ಧರ್ಮಶಾಲಾಕ್ಕೆ ಭೇಟಿ ನೀಡಿ, ಚೀನಿ ಅಧ್ಯಕ್ಷನ ವಿರುದ್ಧ ಟೀಕೆ ಮಾಡಲು ಅವಕಾಶ ನೀಡಿದ್ದು, ಟಿಬೆಟ್​ ಧರ್ಮಗುರು ದಲೈಲಾಮಾ ಅವರ ಜನ್ಮದಿನಕ್ಕೆ ಪ್ರಧಾನಿ ಮೋದಿ ಅವರು ಶುಭ ಕೋರಿದ್ದು, ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು, ಚೀನಾವನ್ನು ಕೆರಳಿಸಿತ್ತು. ಆದರೆ, ಇದ್ಯಾವುದಕ್ಕೂ ಬಗ್ಗಲ್ಲ ಎಂಬ ಸಂದೇಶವನ್ನು ಭಾರತ ಕಳುಹಿಸಿತ್ತು.

ಇದಕ್ಕೆ ಚೀನಾ ಖಾರವಾಗಿ ಪ್ರತಿಕ್ರಿಯಿಸಿತ್ತು. ಅಮೆರಿಕದ ನಿಯೋಗ ಧರ್ಮಶಾಲಾ ಭೇಟಿ, ದಲೈಲಾಮಾ ಅವರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದನ್ನು ಪ್ರಶ್ನಿಸಿತ್ತು. ಹೀಗಾಗಿಯೇ ಚೀನಾ ಮೋದಿ ಪ್ರಧಾನಿಯಾಗಿ ಮೂರನೇ ಪುನರಾಯ್ಕೆಯಾದ ನಂತರವೂ ಶುಭಾಶಯಗಳ ವಿನಿಮಯ ಮಾಡಿಲ್ಲ. ಜೊತೆಗೆ ತೈವಾನ್​ ಪ್ರಧಾನಿ ಶುಭಾಶಯಗಳ ಬಗ್ಗೆಯೂ ಆಕ್ಷೇಪ ಎತ್ತಿತ್ತು.

ಚೀನಾದೊಂದಿಗಿನ ಭಿನ್ನಾಭಿಪ್ರಾಯದಿಂದ ಪ್ರಧಾನಿ ಮೋದಿ ಅವರು ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಭಾಗವಹಿಸಲಿಲ್ಲ. ಇದು ಚೀನಾದ ಪ್ರಾಬಲ್ಯವಿರುವ ಯಾವುದೇ ಸಭೆಯನ್ನು ಭಾರತ ಅನುಮೋದಿಸುವುದಿಲ್ಲ ಎಂಬ ಸಂದೇಶವಾಗಿದೆ. ಈ ವರ್ಷ ಪಾಕಿಸ್ತಾನದಲ್ಲಿ ಶಾಂಘೈ ಸಹಕಾರ ಶೃಂಗಸಭೆ ನಡೆಯಲಿದೆ. ಮುಂದಿನ ವರ್ಷ ಚೀನಾದಲ್ಲಿ ನಿಗದಿಯಾಗಿದೆ. ಎರಡೂ ಶೃಂಗಗಳಿಗೆ ಪ್ರಧಾನಿ ಮೋದಿ ಗೈರಾಗುವುದು ನಿಶ್ಚಿತವಾಗಿದೆ.

ಸೇನಾ ಜಮಾವಣೆ ಮುಂದುವರಿಕೆ:ಗಡಿ ಸಮಸ್ಯೆ ಬಗ್ಗೆ ಎರಡು ದೇಶದ ಸೇನೆಗಳ ನಡುವೆ 21 ಸುತ್ತಿನ ಮಾತುಕತೆಗಳು ನಡೆದಿವೆ. ರಾಜತಾಂತ್ರಿಕ ಮಟ್ಟದಲ್ಲಿ ಅನೇಕ ಸಭೆಗಳನ್ನು ನಡೆಸಿದರೂ, ಯಾವುದೇ ಪ್ರಯೋಜನವಾಗಿಲ್ಲ. 2022 ರ ಡಿಸೆಂಬರ್‌ನಲ್ಲಿ ಯಾಂಗ್ಝಿಯಲ್ಲಿ ನಡೆದ ಘರ್ಷಣೆಯ ನಂತರ LAC ಉದ್ದಕ್ಕೂ ಸೇನಾ ಜಮಾವಣೆ ಮುಂದುವರಿದಿದೆ. ಮತ್ತೆ ದೊಡ್ಡ ಸಂಘರ್ಷ ನಡೆದಿಲ್ಲವಾದರೂ, ಅಸಮಾಧಾನ ಹೊಗೆಯಾಡುತ್ತಲೇ ಇದೆ. ಹೀಗಾಗಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಎರಡೂ ಕಡೆಯವರು ಮೂಲಸೌಕರ್ಯವನ್ನು ಸುಧಾರಿಸುವತ್ತ ಚಿತ್ತ ಹರಿಸಿದ್ದಾರೆ.

ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ನಡೆಯುವ ಮಾತುಕತೆಗಳು ಉದ್ವಿಗ್ನತೆಯನ್ನು ನಿಯಂತ್ರಣದಲ್ಲಿಟ್ಟಿವೆ. ಆದಾಗ್ಯೂ ಕುತಂತ್ರಿ ಚೀನಾದ ದಾಳಿಯನ್ನು ತಡೆಯಲು ಭಾರತೀಯ ಸಶಸ್ತ್ರ ಪಡೆಗಳು ಸದಾ ಕಾಲ ಎಚ್ಚರ ವಹಿಸಬೇಕು. ಅಮೆರಿಕ ಸೇರಿದಂತೆ ಚೀನಾದ ವಿರೋಧಿ ರಾಷ್ಟ್ರಗಳ ಜೊತೆಗೆ ತನ್ನ ಸಂಬಂಧವನ್ನು ವೃದ್ಧಿಸುತ್ತಾ ಪ್ರತಿ ವೇದಿಕೆಯಲ್ಲಿ ಡ್ರ್ಯಾಗನ್​ ರಾಷ್ಟ್ರವನ್ನು ಎದುರಿಸಬೇಕು.

ಇದನ್ನೂ ಓದಿ:ಭಾರತ - ರಷ್ಯಾ ವಾರ್ಷಿಕ ಶೃಂಗಸಭೆ: ದ್ವಿಪಕ್ಷೀಯ ವ್ಯಾಪಾರವೇ ಪ್ರಮುಖ ಚರ್ಚಾ ವಿಷಯವೇಕೆ?, ಇಲ್ಲಿದೆ ವಿಸ್ತೃತ ವರದಿ - India Russia Annual Summit

For All Latest Updates

ABOUT THE AUTHOR

...view details