ಕರ್ನಾಟಕ

karnataka

ETV Bharat / international

ಭಾರತದೊಂದಿಗೆ ಗಡಿ ಗಸ್ತು ವ್ಯವಸ್ಥೆ ಒಪ್ಪಂದ ದೃಢಪಡಿಸಿದ ಚೀನಾ

ವಾಸ್ತವ ನಿಯಂತ್ರಣ ರೇಖೆಯ ಬಳಿ ಗಸ್ತು ವ್ಯವಸ್ಥೆ ಪುನಾರಂಭಕ್ಕೆ ಒಪ್ಪಂದವಾಗಿರುವುದು ನಿಜ ಎಂದು ಚೀನಾ ಹೇಳಿದೆ.

ಭಾರತ ಹಾಗೂ ಚೀನಾ ಮಿಲಿಟರಿ ಅಧಿಕಾರಿಗಳು, ಪಕ್ಕದ ಚಿತ್ರದಲ್ಲಿ ವಕ್ತಾರ ಲಿನ್ ಜಿಯಾನ್
ಭಾರತ ಹಾಗೂ ಚೀನಾ ಮಿಲಿಟರಿ ಅಧಿಕಾರಿಗಳು, ಪಕ್ಕದ ಚಿತ್ರದಲ್ಲಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ (IANS)

By ETV Bharat Karnataka Team

Published : 4 hours ago

ಬೀಜಿಂಗ್: ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ವ್ಯವಸ್ಥೆಯನ್ನು ಪುನಾರಂಭಿಸುವ ಕುರಿತು ನವದೆಹಲಿ ಮತ್ತು ಬೀಜಿಂಗ್ ನಡುವೆ ಒಪ್ಪಂದವಾಗಿರುವುದನ್ನು ಚೀನಾ ಮಂಗಳವಾರ ದೃಢಪಡಿಸಿದೆ.

"ಕಳೆದ ಕೆಲವು ವಾರಗಳಿಂದ, ಚೀನಾ-ಭಾರತ ಗಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚೀನಾ ಮತ್ತು ಭಾರತಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ನಿರಂತರ ಮಾತುಕತೆ ನಡೆಸುತ್ತಿವೆ. ಚೀನಾ ಹೆಚ್ಚಾಗಿ ಪ್ರತಿಪಾದಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳು ಒಮ್ಮತಕ್ಕೆ ಬಂದಿವೆ. ಮುಂದೆ, ಈ ನಿರ್ಣಯಗಳನ್ನು ಜಾರಿಗೆ ತರಲು ಚೀನಾ ಭಾರತದೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಂಗಳವಾರ ಬೀಜಿಂಗ್​ನಲ್ಲಿ ನಡೆದ ದೈನಂದಿನ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಇದೇ ವಿಷಯದ ಕುರಿತಾಗಿ ಸೋಮವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ನೀಡಿದ್ದ ಹೇಳಿಕೆ ಬಹುತೇಕ ಚೀನಾದ ಹೇಳಿಕೆಯೊಂದಿಗೆ ತಾಳಿಕೆಯಾಗುತ್ತದೆ.

"ಕಳೆದ ಹಲವಾರು ವಾರಗಳಿಂದ, ಭಾರತ ಮತ್ತು ಚೀನಾದ ರಾಜತಾಂತ್ರಿಕ ಮತ್ತು ಮಿಲಿಟರಿ ಸಮಾಲೋಚಕರು ವಿವಿಧ ವೇದಿಕೆಗಳಲ್ಲಿ ಪರಸ್ಪರ ನಿಕಟ ಸಮಲೋಚನೆ ನಡೆಸಿದ್ದಾರೆ. ಈ ಚರ್ಚೆಗಳ ಪರಿಣಾಮವಾಗಿ, ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ವ್ಯವಸ್ಥೆಗಳ ಬಗ್ಗೆ ಒಪ್ಪಂದಕ್ಕೆ ಬರಲಾಗಿದೆ. ಈ ಒಪ್ಪಂದದ ಪರಿಣಾಮದಿಂದ ಗಡಿಯಲ್ಲಿ ತಟಸ್ಥ ಸ್ಥಿತಿ ನಿರ್ಮಾಣವಾಗಲಿದೆ ಮತ್ತು 2020 ರಿಂದ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸಮಸ್ಯೆಗಳು ಪರಿಹಾರವಾಗಲಿದೆ. ನಾವು ಈ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ" ಎಂದು ಮಿಸ್ರಿ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ಭಾರತ-ಚೀನಾ ಗಡಿ ಪ್ರದೇಶಗಳ ಪಶ್ಚಿಮ ವಲಯದ ಇತರ ಪ್ರದೇಶಗಳಲ್ಲಿ ಚೀನಾದ ಯೋಧರು ಎಲ್ಎಸಿಯನ್ನು ಉಲ್ಲಂಘಿಸುತ್ತಿರುವ ಪ್ರಯತ್ನಗಳ ಮಧ್ಯೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಎರಡೂ ದೇಶಗಳು ಸ್ಥಾಪಿತ ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಚರ್ಚೆಗಳಲ್ಲಿ ತೊಡಗಿವೆ.

ಇತ್ತೀಚಿನ ಒಪ್ಪಂದವು ಗಡಿ ಪ್ರದೇಶಗಳಲ್ಲಿ ಇರಬೇಕಾದ ಮತ್ತು 2020ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಶಾಂತಿ ಮತ್ತು ನೆಮ್ಮದಿಯ ವಾತಾವರಣವನ್ನು ಸೃಷ್ಟಿಸಲಿದೆ ಎಂದು ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಸೋಮವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ 16ನೇ ಬ್ರಿಕ್ಸ್ ನಾಯಕರ ಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಜಾನ್​ಗೆ ತೆರಳಿದ ಸ್ವಲ್ಪ ಸಮಯದ ನಂತರ ಗಡಿ ಗಸ್ತು ಒಪ್ಪಂದದ ಬಗ್ಗೆ ಬೀಜಿಂಗ್ ದೃಢೀಕರಣ ನೀಡಿದೆ.

ಇದನ್ನೂ ಓದಿ: ಪ್ಯಾಲೆಸ್ಟೈನ್​ ಜನರಿಗೆ 30 ಟನ್ ಔಷಧ, ಆಹಾರ ಸಾಮಗ್ರಿ ರವಾನಿಸಿದ ಭಾರತ

ABOUT THE AUTHOR

...view details