ಕ್ರೇಜಿಸ್ಟಾರ್ ವಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿರುವ 'ದ ಜಡ್ಜ್ ಮೆಂಟ್' ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. MMB legacy ಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಿರ್ಮಾಪಕ ಉದಯ್ ಕೆ ಮಹ್ತಾ ಟ್ರೇಲರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಗುಡ್ ಲಕ್ ಹೇಳಿದರು. ಬಳಿಕ ಚಿತ್ರತಂಡದವರು ಈ ಚಿತ್ರದ ಅನುಭ ಹಂಚಿಕೊಂಡರು.
ಮೊದಲಿಗೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ, ಇದು ರವಿಚಂದ್ರನ್ ಅವರಿಗಾಗಿಯೇ ಮಾಡಿರುವ ಕಥೆ. ಲೀಗಲ್ ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದೆ. 'ಯದ್ಧಕಾಂಡ' ಚಿತ್ರದಲ್ಲಿ ವಕೀಲರಾಗಿ ರವಿಚಂದ್ರನ್ ಅವರ ಅಭಿನಯ ಇಂದಿಗೂ ಜನಪ್ರಿಯ. ಬಹಳ ವರ್ಷಗಳ ನಂತರ ಈ ಚಿತ್ರದಲ್ಲಿ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್, ಧನ್ಯ, ಮೇಘನಾ ಗಾಂವ್ಕರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ಅವರನ್ನು ಒಳಗೊಂಡ ಬಹು ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಇನ್ನು ಈ ಕಥೆ ಸಿನಿ ಪ್ರೇಕ್ಷಕರಿಗೆ ನಿರಾಸೆ ಮಾಡೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ದ ಜಡ್ಜ್ ಮೆಂಟ್' ಚಿತ್ರ ತಂಡ (ETV Bharat)
ಬಳಿಕ ಮಾತನಾಡಿದ ನಟ ರವಿಚಂದ್ರನ್, ನಿರ್ದೇಶಕರು ಬಂದು ಕಥೆ ಹೇಳಿದಾಗ ಇಷ್ಟವಾಯಿತು. ಅಭಿನಯಿಸಲು ಒಪ್ಪಿಕೊಂಡೆ. ಈ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ಸಾಮಾನ್ಯವಾಗಿ ನನ್ನ ಸಿನಿಮಾ ಹಾಡುಗಳ ಮೂಲಕ ಜನಪ್ರಿಯ. ಆದರೆ, ನನಗೆ ಈ ಚಿತ್ರದಲ್ಲಿ ಒಂದು ಹಾಡೂ ಇಲ್ಲ. ಈ ಚಿತ್ರದ ಹೆಸರು ಜಡ್ಜ್ ಮೆಂಟ್. ಆದರೆ, ನಮ್ಮ ಸಿನಮಾ ನೋಡಿ ಪ್ರೇಕ್ಷಕ ನೀಡುವ ಜಡ್ಜ್ ಮೆಂಟ್ ಅಂತಿಮ ಅಂದರು.
ಈ ಚಿತ್ರದಲ್ಲಿ ಅಭಿನಯಿಸಿರುವ ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್, ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ರವಿಶಂಕರ್ ಗೌಡ, ರಾಜೇಂದ್ರ ಕಾರಂತ್, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಗಿ, ನವಿಲ ಮುಂತಾದ ಕಲಾವಿದರು ತಮ್ಮ ಅನುಭವವನ್ನ ಹಂಚಿಕೊಂಡರು. ಈ ಸಂಧರ್ಭದಲ್ಲಿ ನಿರ್ಮಾಪಕರಾದ ಗುರುರಾಜ್ ಕುಲಕರ್ಣಿ(ನಾಡಗೌಡ), ಶರದ್ ನಾಡಗೌಡ, ವಿಶ್ವನಾಥ್ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ್, ಪ್ರತಿಮಾ ಬಿರಾದಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
'ದ ಜಡ್ಜ್ ಮೆಂಟ್' ಚಿತ್ರ ತಂಡ (ETV Bharat)
G9 communication media & entertainment ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಅವರು ಕ್ಯಾಮರಾ ವರ್ಕ್ ಇದೆ. ಕೆಂಪರಾಜ್ ಅವರ ಸಂಕಲನವಿದೆ. ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಪ್ರಮೋದ್ ಮರವಂತೆ ಹಾಡನ್ನು ಹಾಗೂ ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ವಾಸುದೇವ ಮೂರ್ತಿ ಈ ಸಿನಿಮಾಗೆ ಚಿತ್ರಕಥೆಯನ್ನ ಬರೆದಿದ್ದಾರೆ. ಸದ್ಯ ಟ್ರೇಲರ್ನಿಂದಲೇ ಕೂತಹಲ ಹುಟ್ಟಿಸಿರುವ 'ದ ಜಡ್ಜ್ ಮೆಂಟ್' ಇದೇ ಮೇ 24 ರಂದು ಕರ್ನಾಟಕ ಮಾತ್ರವಲ್ಲದೆ, ಡೆಲ್ಲಿ, ಮುಂಬೈ, ಲಕ್ನೋ, ಗೋವಾ, ಆಂದ್ರಪ್ರದೇಶ ಸೇರಿದಂತೆ ದೇಶದ ವಿವಿಧ ಕಡೆ ಪ್ರತಿಷ್ಠಿತ ರಿಲಯನ್ಸ್ ಎಂಟರ್ ಟೈನ್ಮೆಂಟ್ ಸಂಸ್ಥೆ ಮೂಲಕ ಬಿಡುಗಡೆಯಾಗಲಿದೆ.
ಇದನ್ನೂ ಓದಿ:5 ವರ್ಷಗಳ ನಂತರ 'CHEF ಚಿದಂಬರ'ನಾಗಿ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾದ ಅನಿರುದ್ಧ್ - CHEF Chidambara