ಕರ್ನಾಟಕ

karnataka

ಎಫ್​ಎಸ್​ಎಲ್​ ವರದಿ ಬಯಲು: ಬಿಗ್​ ಬಾಸ್​ ವಿಜೇತ ಎಲ್ವಿಶ್​ ಯಾದವ್​ ವಿಚಾರಣೆಗೆ ಪೊಲೀಸರ ಸಿದ್ಧತೆ

By ETV Bharat Karnataka Team

Published : Feb 17, 2024, 10:22 AM IST

ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಫ್​ಎಸ್​ಎಲ್ ವರದಿ ಬಂದಿದ್ದು, ಮತ್ತೊಮ್ಮೆ ಎಲ್ವಿಶ್​ ಯಾದವ್​ ವಿಚಾರಣೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

Bigg Boss winner Elvish Yadav
ಬಿಗ್​ ಬಾಸ್​ ವಿಜೇತ ಎಲ್ವಿಶ್​ ಯಾದವ್

ನವದೆಹಲಿ: ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷದ ಪೂರೈಕೆ ಪ್ರಕರಣ ಸಂಬಂಧ ಎಫ್​ಎಸ್​ಎಲ್​ ವರದಿ ಹೊರ ಬೀಳುತ್ತಿದ್ದಂತೆ ನೋಯ್ಡಾ ಪೊಲೀಸರು ಮತ್ತೊಮ್ಮೆ ತನಿಖೆ ತೀವ್ರಗೊಳಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಿಂದಿ ಬಿಗ್ ಬಾಸ್ ಒಟಿಟಿ 2​ ವಿಜೇತ ಹಾಗೂ ಯೂಟ್ಯೂಬರ್​ ಎಲ್ವಿಶ್​ ಯಾದವ್​ನನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಈಗಾಗಲೇ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಇದರಿಂದಾಗಿ ಯೂಟ್ಯೂಬರ್​ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಸದ್ಯ ಈ ಪ್ರಕರಣದ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ. ಬಾಕ್ಸ್​ನಲ್ಲಿ ಪತ್ತೆಯಾಗಿದ್ದ ವಿಷ ಕೋಬ್ರಾ ಹಾಗೂ ಕ್ರೈಟ್​ ಜಾತಿಯ ಹಾವುಗಳದ್ದು ಎಂಬುದು ವರದಿಯಲ್ಲಿ ದೃಢಪಟ್ಟಿದ್ದು, ಅದರಲ್ಲಿ ಶೇಕಡಾವಾರು ವಿಷ ಎಷ್ಟು ಎಂಬ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಇದುವರೆಗೂ ವಿಚಾರಣೆ ಹೊರತುಪಡಿಸಿ ಎಲ್ವಿಶ್​ ಯಾದವ್​ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಎಲ್ವಿಶ್​ ಯಾದವ್​ ಅವರನ್ನು ಬಂಧಿಸಲು ಬೇಕಾದ ಯಾವುದೇ ಪುರಾವೆಗಳನ್ನು ಪೊಲೀಸರು ಇನ್ನೂ ಕಂಡುಕೊಂಡಿಲ್ಲ ಎನ್ನಲಾಗಿದೆ.

9 ಹಾವು, 20 ಎಂಎಲ್​ ವಿಷ ಪತ್ತೆ: ಪ್ರಕರಣದ ವರದಿ ಬಗ್ಗೆ ಮಾಹಿತಿ ನೀಡಿದ ಡಿಸಿಎಪಿ ವಿದ್ಯಾಸಾಗರ್​ ಮಿಶ್ರಾ, "ಎಫ್​ಎಸ್​ಎಲ್​ನ ತನಿಖಾ ವರದಿ ಬಂದಿದ್ದು, ತಂಡ ಅಧ್ಯಯನ ನಡೆಸುತ್ತಿದೆ. ವರದಿಯ ಆಧಾರದ ಮೇಲೆ ತನಿಖೆ ಮುಂದುವರಿಯಲಿದೆ. ಎಲ್ಲ ಆರೋಪಿಗಳು ಜೈಲಿನಿಂದ ಹೊರಗಿರುವ ಕಾರಣ, ನೋಯ್ಡಾ ಪೊಲೀಸರು ಪ್ರಕರಣದ ಆರೋಪಪಟ್ಟಿ ಸಲ್ಲಿಸಲು ಯಾವುದೇ ಆತುರ ತೋರುತ್ತಿಲ್ಲ. ಎಲ್ಲ ಸಾಕ್ಷಿಗಳು ಹಾಗೂ ಪುರಾವೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ವಶಪಡಿಸಿಕೊಂಡ ಹಾವುಗಳ ವೈದ್ಯಕೀಯ ಪರೀಕ್ಷೆ:ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಹಾವುಗಳ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಹಾವುಗಳ ವಿಷ ಗ್ರಂಥಿಯನ್ನು ಈಗಾಗಲೇ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಇದುವರೆಗೆ ಪತ್ತೆಯಾಗಿರುವ ಹಾವುಗಳ ಸಂಖ್ಯೆ 11ಕ್ಕೆ ತಲುಪಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಹಾವುಗಳನ್ನು ಸೂರಜ್​ಪುರ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ. ಸದ್ಯ ನೋಯ್ಡಾ ಪೊಲೀಸ್​ ಠಾಣೆಯ ಸೆಕ್ಟರ್​ 20ರ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಫಿಪಲ್ಸ್​ ಫಾರ್​ ಅನಿಮಲ್ಸ್​ ಸಂಸ್ಥೆಯ ಅಧಿಕಾರಿ ಗೌರವ್​ ಗುಪ್ತಾ ಅವರು, ಎಲ್ವಿಶ್​ ಯಾದವ್​ ವಿರುದ್ಧ 2023ರ ನವೆಂಬರ್​ನಲ್ಲಿ ನೋಯ್ಡಾ ಪೊಲೀಸರಿಗೆ ದೂರು ನೀಡಿದ್ದರು. ಎಲ್ವಿಶ್​ ದೆಹಲಿ ಎನ್​ಸಿಆರ್​ನಲ್ಲಿರುವ ಫಾರ್ಮ್​ ಹೌಸ್​ನಲ್ಲಿ ಹಾವುಗಳೊಂದಿಗೆ ವಿಡಿಯೋ ಶೂಟ್​ ಮಾಡುತ್ತಾರೆ. ಹಾಗೂ ಈ ಹಾವುಗಳ ವಿಷವನ್ನು ರೇವ್​ ಪಾರ್ಟಿಗಳಲ್ಲಿ ಅಕ್ರಮವಾಗಿ ಬಳಸುತ್ತಾರೆ ಎಂದು ಆರೋಪಿಸಿದ್ದರು. ಎಫ್​ಐಆರ್​ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ದಾಳಿ ವೇಳೆ ದೆಹಲಿಯ ಮೊಲಾರ್​ಬಂಡ್​ ನಿವಾಸಿಗಳಾದ ಐವರು ಹಾವಾಡಿಗರನ್ನು ಬಂಧಿಸಲಾಗಿತ್ತು. ಅವರ ಬಳಿ ಒಂಬತ್ತು ಹಾವುಗಳು ಹಾಗೂ 20 ಎಂಎಲ್​ ವಿಷ ಪತ್ತೆಯಾಗಿತ್ತು. ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಐದು ನಾಗರಹಾವು, ಎರಡು ತಲೆಯ ಹಾವು, ಹೆಬ್ಬಾವು ಮತ್ತು ಕುದುರೆ ಬಾಲದ ಹಾವು ಇದರಲ್ಲಿ ಸೇರಿದ್ದವು. ಪತ್ತೆಯಾದ ಹಾವುಗಳು ಹಾಗೂ ವಿಷವನ್ನು ಎಫ್​ಎಸ್​ಎಲ್​ ತನಿಖೆಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದೆ.

ಎಲ್ವಿಶ್​ ಯಾದವ್​ ಸ್ಪಷ್ಟನೆ:ಕಳೆದ ವರ್ಷ ನವೆಂಬರ್​ ಪ್ರಕರಣ ದೊಡ್ಡದಾಗುತ್ತಿದ್ದಂತೆ ಇಲ್ವಿಶ್​ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂ ನಲ್ಲಿ ಲೈವ್​ ಬಂದು ಸ್ಪಷ್ಟನೆ ನೀಡಿದ್ದರು. "ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ನಿರಾಪರಾಧಿ, ಇದರಲ್ಲಿ ಯಾವುದೇ ಸತ್ಯವಿಲ್ಲ. ಈ ಪ್ರಕರಣದಲ್ಲಿ ನಾನು ಭಾಗಿಯಾಗಿರುವುದು, ಶೇಕಡಾ 1ರಷ್ಟು ಸಾಬೀತಾದರೂ ನಾನು ಜವಾಬ್ದಾರಿ ಹೊರಲು ಸಿದ್ಧನಿದ್ದೇನೆ. ಪುರಾವೆ ಇಲ್ಲದೇ ನನ್ನ ವಿರುದ್ಧ ಹೇಳಿ, ನನ್ನ ಹೆಸರನ್ನು ಹಾಳು ಮಾಡಲು ಹೋಗಬೇಡಿ" ಎಂದು ಹೇಳಿದ್ದರು.

ಇದನ್ನೂ ಓದಿ:ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಆರೋಪ: ಪೊಲೀಸರೆದುರು ಹೇಳಿಕೆ ದಾಖಲಿಸಿದ ಎಲ್ವಿಶ್​ ಯಾದವ್

ABOUT THE AUTHOR

...view details