ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳ ಪಾಲಿಗೆ ಏಪ್ರಿಲ್ 24 ವಿಶೇಷವಾದ ದಿನ. ಯಾಕೆಂದರೆ ಕನ್ನಡದ ಚಿತ್ರರಂಗದ ಐಕಾನ್ ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ 95ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಗಾಯಕ ಮನೋಜವಂ ಆತ್ರೇಯ ಅವರ ಸಾರಥ್ಯದಲ್ಲಿ ಮೈ ನೇಮ್ ಇಸ್ ರಾಜ್ (ಭಾಗ 3) ಕಾರ್ಯಕ್ರಮ ನಡೆಯಲಿದೆ.
ಅಣ್ಣಾವ್ರ ಹುಟ್ಟು ಹಬ್ಬದಿನದೊಂದು ಸಂಜೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಸ್ವಾಮಿ ವಿವೇಕಾನಂದ ಟ್ರಸ್ಟ್ ಹಾಗೂ ಟೀಮ್ ಆತ್ರೇಯ ಅವರಿಂದ ಗೀತ ನಮನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ರಾಜ್ ಗೀತ ನಮನ ಎಂಬ ಹೆಸರಿನಲ್ಲಿ ಖ್ಯಾತ ಗಾಯಕ ಮನೋಜವಂ ಆತ್ರೇಯ ಅವರ ಸಾರಥ್ಯದಲ್ಲಿ ಹೆಸರಾಂತ ಗಾಯಕರು ರಾಜಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ. ಈ ಕಾರ್ಯಕ್ರಮದ ಕುರಿತು ಗಾಯಕ ಮನೋಜವಂ ಆತ್ರೇಯ ಅಂಡ್ ಟೀಮ್ ಒಂದಿಷ್ಟು ಮಾಹಿತಿಯನ್ನ ನೀಡಿದೆ.
ಮೊದಲು ಮಾತನಾಡಿದ ಗಾಯಕ ಮನೋಜವಂ ಆತ್ರೇಯ, ನಾನು ಹಾಗೂ ನನ್ನ ಕುಟುಂಬದವರು ರಾಜಕುಮಾರ್ ಅವರ ಅಭಿಮಾನಿಗಳು. ಅವರ ಹುಟ್ಟುಹಬ್ಬದ ದಿನ ಏನಾದರೂ ಸಮಾರಂಭ ಮಾಡಬೇಕೆಂದುಕೊಂಡು ಟೀಮ್ ಆತ್ರೇಯ ತಂಡದಿಂದ (Team Aatreya) ಪ್ರತಿವರ್ಷ "ಮೈ ನೇಮ್ ಇಸ್ ರಾಜ್" ಎಂಬ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ಇದರ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ಈ ಬಾರಿ ನಮ್ಮೊಂದಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಕೂಡ ಜೊತೆಯಾಗಿದೆ. ಏಪ್ರಿಲ್ 24 ರ ಸಂಜೆ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ "ಮೈ ನೇಮ್ ಇಸ್ ರಾಜ್" ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಖ್ಯಾತಿಯ ಚನ್ನಪ್ಪ ಹುದ್ದರ್, ಪೃಥ್ವಿ ಭಟ್, ಮೈತ್ರಿ ಅಯ್ಯರ್ ಸೇರಿದಂತೆ ಹೆಸರಾಂತ ಗಾಯಕರು ಅಂದು ಹಾಡಲಿದ್ದಾರೆ. 12ಕ್ಕೂ ಅಧಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಾದ್ಯ ಕಲಾವಿದರು ಈ ಕಾರ್ಯಕ್ರಮದಲ್ಲಿರುತ್ತಾರೆ. ರಾಜಕುಮಾರ್ ಅವರು ಸಿನಿಮಾ, ಧ್ವನಿಸುರುಳಿ ಸೇರಿದಂತೆ 5000ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ರಾಜಕುಮಾರ್ ಅವರು ಕೇವಲ ಹಾಡುಗಾರರಷ್ಟೇ ಆಗಿರಲಿಲ್ಲ. ಕೆಲವು ವಾದ್ಯಗಳನ್ನು ನುಡಿಸುತ್ತಿದ್ದರು. ಅವರೊಬ್ಬ ಸರಸ್ವತಿ ಪುತ್ರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದಕ್ಕೆ ಅವರು ಹಾಡಿರುವ ಮಾಣಿಕ್ಯ ವೀಣಾ, ನಾದಮಯ, ಮೇಘ ಬಂತು ಮೇಘ ಮುಂತಾದ ಹಾಡುಗಳೇ ಸಾಕ್ಷಿ. ಈ ಬಾರಿ ರಾಜ್ ಗೀತ ನಮನ ಎಂಬ ಹೆಸರಲ್ಲಿ ಅವರು ಹಾಡಿರುವ ಸಂಗೀತಮಯ ಹಾಡುಗಳನ್ನು ಪ್ರಸ್ತುತಪಡಿಸುತ್ತಾ ಅಣ್ಣಾವ್ರಲ್ಲಿದ್ದ ಒಬ್ಬ ಶ್ರೇಷ್ಠ ಸಂಗೀತಗಾರನನ್ನು ಗೌರವಿಸಿ ಈ ಕಾರ್ಯಕ್ರಮವನ್ನು ಸಮರ್ಪಿಸುತಿದ್ದೇವೆ ಅಂದರು.