ಒಂದೊಳ್ಳೆ ಸಂದೇಶದ ಮೂಲಕ ಪ್ರೇಕ್ಷಕರೆದುರು ಹಾಜರಾಗುವ ನಿರ್ದೇಶಕ ಮಧುಚಂದ್ರ. ಈ ಹಿಂದೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದ ಮೂಲಕ ಗಮನ ಸೆಳೆದಿದ್ದ ಮಧುಚಂದ್ರ ಅವರೀಗ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಈ ಬಾರಿಯೂ ಫ್ರೆಶ್ ಕಥೆಯೇ. ಸದ್ಯಕ್ಕೆ ಕಥೆ ಬಗ್ಗೆ ಗುಟ್ಟುರಟ್ಟು ಮಾಡದ ವಾಸ್ಕೋಡಿಗಾಮಾ ಸಿನಿಮಾ ಖ್ಯಾತಿಯ ಡೈರೆಕ್ಟರ್ ಮಧುಚಂದ್ರ ತಮ್ಮ ಮುಂದಿನ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ. ಟೈಟಲ್ ಈವೆಂಟ್ ಕೂಡ ಸಾಮಾನ್ಯವಾಗಿಲ್ಲ. ವಿಭಿನ್ನ.. ಹೀಗೂ ಟೈಟಲ್ ಲಾಂಚ್ ಮಾಡಬಹುದು ಎನ್ನುವುದನ್ನು ತೋರಿಸಿದ್ದಾರೆ.
ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನು ಕರೆದುಕೊಂಡು ಬಂದು ಟೈಟಲ್ ಲಾಂಚ್ ಮಾಡಿಸುತ್ತೇನೆ ಎಂದು ನಿರ್ದೇಶಕರು ನಿರ್ಮಾಪಕರಿಗೆ ಮಾತು ಕೊಟ್ಟಿರುತ್ತಾರೆ. ಕಮಲ್ ಹಾಸನ್ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಇಡೀ ತಂಡ ಅವರಿಗಾಗಿ ಕಾತರದಿಂದ ಕಾಯುತ್ತಿರುತ್ತದೆ. ಆದರೆ, ಕಹಾನಿ ಮೇ ಟ್ವಿಸ್ಟ್ ಎಂಬಂತೆ ಅಲ್ಲಿ ಕಮಲ್ ಹಾಸನ್ ಬದಲು ಬಂದಿದ್ದು ಬೇರೆಯವರು. ಕಾರ್ಯಕ್ರಮದ ಆಯೋಜಕರು ಕಮಲ್ ಹಾಸನ್ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹಾಸನದಿಂದ ಕಮಲಾ ಎಂಬುವವರನ್ನು ಕರೆದುಕೊಂಡು ಬಂದು ಚೀಟ್ ಮಾಡುತ್ತಾರೆ. ಬಳಿಕ ನಿರ್ದೇಶಕರಿಗೆ ನಿರ್ಮಾಪಕರೆಲ್ಲರೂ ಗೂಸಾ ಕೊಡ್ತಾರೆ. ಹೀಗೆ ತಮಾಷೆ ಆಗಿರುವ ವಿಡಿಯೋ ಮೂಲಕ ಚಿತ್ರದ ಶೀರ್ಷಿಕೆ ರಿವೀಲ್ ಮಾಡಲಾಗಿದೆ.
ಮಧುಚಂದ್ರ ತಮ್ಮ ಹೊಸ ಪ್ರಯತ್ನಕ್ಕೆ 'Mr.ರಾಣಿ' ಎಂಬ ಟೈಟಲ್ ಇಟ್ಟಿದ್ದಾರೆ. ಶೀರ್ಷಿಕೆ ಎಷ್ಟು ಕ್ರೇಜಿ ಆಗಿದೆಯೋ ಕಥೆ ಕೂಡ ಅಷ್ಟೇ ಕ್ರೇಜಿಯಾಗಿದೆ ಎನ್ನುತ್ತಾರೆ ಮಧುಚಂದ್ರ. 'Mr.ರಾಣಿ' ಚಿತ್ರದಲ್ಲಿ ಲಕ್ಷ್ಮಿ ನಿವಾಸ ಸೀರಿಯಲ್ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್ ನಾಯಕ - ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಶ್ರೀವಸ್ತ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ, ಆನಂದ್, ಚಕ್ರವರ್ತಿ ದಾವಣಗೆರೆ ತಾರಾ ಬಳಗದಲ್ಲಿದ್ದಾರೆ.