ಕರ್ನಾಟಕ

karnataka

By ETV Bharat Karnataka Team

Published : Jan 19, 2024, 11:11 PM IST

ETV Bharat / entertainment

ಮುಂದಿನ ವಾರ 'ಕೋಳಿ ಎಸ್ರು', 'ಹದಿನೇಳೆಂಟು' ತೆರೆಗೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಚಿತ್ರಗಳಿವು

ಮುಂದಿನ ಶುಕ್ರವಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ "ಕೋಳಿ ಎಸ್ರು" ಹಾಗೂ "ಹದಿನೇಳೆಂಟು" ತೆರೆಕಾಣಲಿದೆ.

ಮುಂದಿನ ವಾರ ತೆರೆ ಕಾಣಲಿರುವ ಚಿತ್ರಗಳು
ಮುಂದಿನ ವಾರ ತೆರೆ ಕಾಣಲಿರುವ ಚಿತ್ರಗಳು

ಮುಂದಿನ ವಾರ ತೆರೆ ಕಾಣಲಿರುವ ಚಿತ್ರಗಳು

ಮಂಗಳೂರು: ಇದೇ ಜನವರಿ 26ರಂದು ಕನ್ನಡದಲ್ಲಿ ಎರಡು ಕಲಾತ್ಮಕ‌‌ ಸಿನಿಮಾಗಳು ಬಿಡುಗಡೆಯಾಗಲಿವೆ. ಎರಡು ಪ್ರತ್ಯೇಕ ಪ್ರೊಡಕ್ಷನ್ ಹೌಸ್​ನಿಂದ, ಪ್ರತ್ಯೇಕ ನಿರ್ದೇಶಕರುಗಳಿಂದ ನಿರ್ಮಾಣವಾದ ಈ ಸಿನಿಮಾ ಒಂದೇ ದಿನ ಚಿತ್ರಮಂದಿರ ಪ್ರವೇಶಿಸಲಿದೆ. ಆದರೆ ತಮ್ಮ ಸಿನಿಮಾ ಪ್ರಚಾರವನ್ನು ಎರಡೂ ತಂಡಗಳು ಸೇರಿ ಒಟ್ಟಿಗೆ ಮಾಡುತ್ತಿರುವುದು ಮಾತ್ರ ವಿಶೇಷ.

ಕೋಳಿ ಎಸ್ರು, ಹದಿನೇಳೆಂಟು: ಚಂಪಾ ಪಿ. ಶೆಟ್ಟಿ ನಿರ್ದೇಶನದ "ಕೋಳಿ ಎಸ್ರು" ಹಾಗೂ ಪೃಥ್ವಿ ಕೊಣನೂರು ಆ್ಯಕ್ಷನ್​​ ಕಟ್​​ ಹೇಳಿರುವ "ಹದಿನೇಳೆಂಟು" ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಹೆಸರು ತಂದು ಕೊಟ್ಟಿರುವಂತಹ ಚಿತ್ರಗಳು. ಜನವರಿ 26ರಂದು ಈ ಎರಡೂ ಚಿತ್ರಗಳು ಕರ್ನಾಟಕದಾದ್ಯಂತ ಎಲ್ಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಚಿತ್ರಗಳಿವು: 'ಕೋಳಿ ಎಸ್ರು' ಮತ್ತು 'ಹದಿನೇಳೆಂಟು' ಚಿತ್ರಗಳು ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, MAMI, ಹಾಂಕಾಂಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, TIFF ಕಿಡ್ಸ್, Zlin ಚಲನಚಿತ್ರೋತ್ಸವ, ಮೆಲ್ಬೋರ್ನ್ ಫೆಸ್ಟಿವಲ್​, IFFI ಗೋವಾ, ಪ್ರೇಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ನ್ಯೂಯಾರ್ಕ್ ಇಂಡಿಯನ್ ಫಿಲ್ಡ್ ಫೆಸ್ಟಿವಲ್, ಒಟ್ಟಾವ ಇಂಡಿಯನ್ ಫಿಲ್ಡ್ ಫೆಸ್ಟಿವಲ್ ಸೇರಿದಂತೆ ಮೊದಲಾದ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆ ಆಗಿದ್ದವು. ಮಾತ್ರವಲ್ಲದೇ ಸುಮಾರು 40ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡು ಸುಮಾರು 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿವೆ.

ಗ್ರಾಮೀಣ ಕಲಾವಿದರಿಗೆ ಅವಕಾಶ: ಕಾ.ತ. ಚಿಕ್ಕಣ್ಣನವರ ಕಥೆಯಾಧಾರಿತ "ಕೋಳಿ ಎಸ್ರು" ಚಿತ್ರದ ಕಥೆ ಮೈಸೂರಿನ ಗ್ರಾಮೀಣ ಭಾಗದಾಗಿದ್ದು, ಚಿತ್ರದ ಶೂಟಿಂಗ್ ಕೂಡ ಟಿ. ನರಸೀಪುರದ ಸುತ್ತಮುತ್ತಲೇ ಆಗಿದೆ. ಚಿತ್ರದಲ್ಲಿ ಟಿ. ನರಸೀಪುರ, ಚಾಮರಾಜನಗರ ಭಾಷೆಯನ್ನು ಬಳಸಲಾಗಿದೆ. ನೂರಕ್ಕೆ ನೂರು ಭಾಗ ಕಲಾವಿದರು ಮೈಸೂರು, ಮಂಡ್ಯದ ಗ್ರಾಮೀಣ ಕಲಾವಿದರೇ ಎಂಬುದು ವಿಶೇಷ.

"ಹದಿನೇಳೆಂಟು" - ಕಾಲೇಜಿನಲ್ಲಿ ನಡೆಯುವ ಒಂದು ಘಟನೆ. ವಿಡಿಯೋ ವೈರಲ್ ಆಗಿ ಅದರ ಸುತ್ತ ನಡೆಯುವ ಘಟನೆಗಳನ್ನು ಆಧರಿಸಿರುವ ಸಿನಿಮಾ. ಇಂದಿನ ಮಕ್ಕಳು ಹಾಗೂ ಪೋಷಕರು ನೋಡಲೇಬೇಕಾದ ಚಿತ್ರ. ಎರಡೂ ಚಿತ್ರಗಳ ಟ್ರೇಲರ್​​ಗಳು ಪಿಆರ್​ಕೆ ಆಡಿಯೋದಲ್ಲಿ ರಿಲೀಸ್ ಆಗಿ ಜನರಿಂದ ಮೆಚ್ಚುಗೆ ಪಡೆದಿವೆ.

ಹೊಸ ಪ್ರಯೋಗ:ಕೇವಲ ಚಿತ್ರೋತ್ಸವಕ್ಕೆ ಸೀಮಿತವಾಗದೇ ಸಾಮಾನ್ಯ ಪ್ರೇಕ್ಷಕರಿಗೂ ತಲುಪಬೇಕೆಂಬ ಉದ್ದೇಶದಿಂದ ಎರಡೂ ತಂಡ ಒಟ್ಟಾಗಿ ಸೇರಿ ತಮ್ಮ ಚಿತ್ರಗಳ ಬಿಡುಗಡೆಗೆ ಹೊಸ ಯೋಜನೆ ಹಾಕಿಕೊಂಡಿದೆ. ಎರಡೂ ತಂಡಗಳೂ ಸೇರಿ 'ಪರಸ್ಪರ.ಲೈವ್' ಎಂಬ ವೆಬ್​ಸೈಟ್ ಮೂಲಕ ಈಗಾಗಲೇ ಟಿಕೆಟ್ ಕೊಂಡುಕೊಳ್ಳುವ ಯೋಜನೆ ರೂಪಿಸಿದೆ. ದೊಡ್ಡ ಬ್ಯಾನರ್ ಸಿನಿಮಾ ಹೊರತುಪಡಿಸಿ ಮಲ್ಟಿಪ್ಲೆಕ್ಸ್​​ಗಳಲ್ಲಿ ಸಿನಿಮಾಗಳು ಬಿಡುಗಡೆಯಾಗುವ ಒಂದೆರಡು ದಿನದ ಮೊದಲಷ್ಟೇ ಸಿನಿಪ್ರಿಯರು ಅಡ್ವಾನ್ಸ್ ಟಿಕೆಟ್ ಬುಕ್ ಮಾಡಲು ಸಾಧ್ಯ. ಆದರೆ, ಅಷ್ಟು ಕಡಿಮೆ ಅವಧಿಯಲ್ಲಿ ಸಿನಿ ಪ್ರಿಯರನ್ನು ತಲುಪುವುದು ಬಹಳ ಕಷ್ಟಕರ.

ಹಾಗಾಗಿ ಪರಸ್ಪರ.ಲೈವ್ ವೆಬ್​​ಸೈಟ್​ ಆರಂಭಿಸಿ ಅದರಲ್ಲಿ ಟಿಕೆಟ್ ಕಾದಿರಿಸಲು ಈ ಚಿತ್ರತಂಡ ಅವಕಾಶ ಮಾಡಿಕೊಟ್ಟಿದೆ. ಇದು ನೇರವಾಗಿ ಟಿಕೆಟ್ ಬುಕ್ ಮಾಡುವುದಿಲ್ಲ. ಇಲ್ಲಿ ಟಿಕೆಟ್ ಖಾದಿರಿಸಿದರೆ ಸಿನಿಮಾ ತಂಡಕ್ಕೆ ಇಷ್ಟು ಮಂದಿ ಸಿನಿಮಾ ನೋಡಲು ಆಸಕ್ತರಾಗಿದ್ದಾರೆ ಎಂದು ತಿಳಿಯುತ್ತದೆ. ಈ ಎರಡು ಸಿನಿಮಾವನ್ನು 'ಪರಸ್ಪರ.ಲೈವ್'ನಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಸಿನಿಮಾ ತಂಡವೇ ಫೋನ್​ ಕರೆ ಮಾಡಿ ಯಾವ ಥಿಯೇಟರ್​ನಲ್ಲಿ ಸಿನಿಮಾ ನೋಡಲು ಆಸಕ್ತಿ ಎಂಬುದನ್ನು ತಿಳಿದು ಟಿಕೆಟ್ ನೀಡುತ್ತದೆ. ಇದು ಚಿತ್ರರಂಗದಲ್ಲಿ ಹೊಸ ಪ್ರಯೋಗವಾಗಿದೆ.

ಈ ಬಗ್ಗೆ ಮಾತನಾಡಿದ ಕೋಳಿ ಎಸ್ರು ಸಿನಿಮಾ ನಿರ್ದೇಶಕಿ ಚಂಪಾ ಪಿ ಶೆಟ್ಟಿ, ಈ ಎರಡೂ ಚಿತ್ರಗಳು ಜ. 26 ರಂದು ಬಿಡುಗಡೆಯಾಗುತ್ತಿವೆ. ಎರಡು ಚಿತ್ರಗಳು ಕಮರ್ಷಿಯಲ್ ಸಿನಿಮಾಕ್ಕಿಂತ ಭಿನ್ನ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳಿವು. ಕನ್ನಡಕ್ಕೆ ಹೆಮ್ಮೆ ತಂದುಕೊಟ್ಟ ಈ ಚಿತ್ರಗಳನ್ನು ನೋಡಿ ಹಾರೈಸಿ ಎಂದು ತಿಳಿಸಿದ್ದಾರೆ.

ಹದಿನೇಳೆಂಟು ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಮಾತನಾಡಿ, ಈ ಎರಡು ಚಿತ್ರಗಳನ್ನು ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇವೆ. ಹೊಸ ಪ್ರಯತ್ನವಾಗಿ 'ಪರಸ್ಪರ.ಲೈವ್' ಮೂಲಕ ಎರಡೂ ಸಿನಿಮಾಗೂ ಒಟ್ಟಿಗೆ ಟಿಕೆಟ್ ಕಾದಿರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ಶುಕ್ರವಾರ ಸಿನಿಮಾ ತೆರೆಕಾಣಲಿದೆ. ಚಂಪಾ ಪಿ ಶೆಟ್ಟಿ ಅವರು ಹಿಂದೆ 'ಅಮ್ಮಚ್ಚಿಯೆಂಬ ನೆನಪು' ಚಿತ್ರವನ್ನು, ಪೃಥ್ವಿ ಕೋಣನೂರು ಅವರು "ರೈಲ್ವೆ ಚಿನ್" ಹಾಗೂ "ಪಿಂಕಿ ಎಲ್ಲಿ 'ಚಿತ್ರಗಳನ್ನು ನಿರ್ದೇಶಿಸಿದ್ದರು.

ABOUT THE AUTHOR

...view details