ಕನ್ನಡ ಚಿತ್ರರಂಗದಲ್ಲಿ ನಾನಾ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಅದ್ಧೂರಿ ಮೇಕಿಂಗ್ ಹಾಗೂ ಕಮರ್ಷಿಯಲ್ ಚಿತ್ರಗಳ ನಡುವೆ ಮಕ್ಕಳ ಸಿನಿಮಾ ಸಂಖ್ಯೆ ಕಡಿಮೆಯಾಗಿವೆ. ಆದರೀಗ ಚಂದನವನದಲ್ಲಿ ಮಕ್ಕಳ ಚಿತ್ರವೊಂದು ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿಯ ಆಗಮನ ಆಗಲಿದೆ. ಅವರೇ ಗೌರಿ ಶ್ರೀನಿವಾಸ್. ಇವರ ನಿರ್ದೇಶನದಲ್ಲಿ ರೂಪುಗೊಂಡಿರುವ ಸಿನಿಮಾದ ಶೀರ್ಷಿಕೆ 'ಜರ್ನಿ ಆಫ್ ಬೆಳ್ಳಿ'.
ಈವರೆಗೂ ನಾನಾ ಕಥಾಹಂದರಗಳ ಒಂದಿಷ್ಟು ಮಕ್ಕಳ ಸಿನಿಮಾಗಳು ಕನ್ನಡದಲ್ಲಿ ತೆರೆಕಂಡಿವೆ. ಅದರಲ್ಲಿ ಚಿನ್ನಾರಿಮುತ್ತದಂಥಾ ಚಿತ್ರ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೀಗ ಚಿತ್ರೀಕರಣವನ್ನೆಲ್ಲ ಸಂಪೂರ್ಣವಾಗಿ ಮುಗಿಸಿಕೊಂಡಿರುವ ಜರ್ನಿ ಆಫ್ ಬೆಳ್ಳಿ ಚಿತ್ರ ಕೂಡಾ ಅಂಥಾದ್ದೊಂದು ಛಾಪು ಮೂಡಿಸುವ ಲಕ್ಷಣಗಳು ದಟ್ಟವಾಗಿವೆ. ಇದು ಓರ್ವ ಪುಟ್ಟ ಹುಡುಗಿಯ ಸುತ್ತ ಕದಲುವ ಕಥಾನಕವನ್ನೊಳಗೊಂಡ ಚಿತ್ರ. ಪುಟ್ಟ ಹುಡುಗಿ, ಆರ್ಮಿ ಫ್ಯಾಮಿಲಿಯ ಭೂಮಿಕೆಯಲ್ಲಿ ನಡೆಯುವ ಅಪರೂಪದ ಕಥೆಯೊಂದು 'ಜರ್ನಿ ಆಫ್ ಬೆಳ್ಳಿ'ಯ ಜೀವಾಳವಂತೆ.
ಸಮನ್ವಿ ಪಾಟೀಲ್ ಈ ಚಿತ್ರದ ಪ್ರಧಾನ ಪಾತ್ರ ನಿರ್ವಹಿಸಿದ್ದಾಳೆ. ಮಕ್ಕಳಲ್ಲಿ ಹೊಸ ಆಲೋಚನೆ ತುಂಬಬಲ್ಲ, ಎಳೇ ಮನಸ್ಸುಗಳ ಭಾವಲೋಕದಲ್ಲಿ ಸಮ್ಮೋಹಕವಾದ ಛಾಪುಮೂಡಿಸಬಲ್ಲ ಈ ಸಿನಿಮಾ ಎಲ್ಲ ವಯೋಮಾನದವರಿಗೂ ಹಿಡಿಸುವಂತಿದೆ ಎಂಬುದು ಚಿತ್ರತಂಡದ ಭರವಸೆ. ಇದುವರೆಗೂ ಹೆಮ್ಮೆಯ ಸೈನಿಕರ ಜೀವನಗಾಥೆಯ ನಾನಾ ಮಗ್ಗುಲುಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಲಾಗಿದೆ. ಆದರೆ, ಪುಟ್ಟ ಮಗುವೊಂದರ ಕಣ್ಣುಗಳಲ್ಲಿ ಕದಲೋ ಕಥೆ ಕನ್ನಡದ ಮಟ್ಟಿಗೆ ಇದೇ ಮೋದಲೇನೋ. ಅಂಥದ್ದೊಂದು ಹೊಸತನದ ಕಥೆಯೊಂದಿಗೆ ಗೌರಿ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ತುಳು ಭಾಷೆಯಲ್ಲಿ ಕಾರ್ನಿಕೊದ ಕಲ್ಲುರ್ಟಿ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಮಹೇಂದ್ರ ಕುಮಾರ್ ಜರ್ನಿ ಆಫ್ ಬೆಳ್ಳಿ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ.