ಕರ್ನಾಟಕ

karnataka

By ETV Bharat Karnataka Team

Published : Jun 12, 2024, 10:00 PM IST

ETV Bharat / entertainment

ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಬಂಧನ: ಚಿತ್ರ ನಿರ್ಮಾಪಕರಿಗೆ ಆತಂಕ - Actor Darshan

ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಬಂಧನವಾಗಿದ್ದು ಕೆಲವು ಚಿತ್ರ ನಿರ್ಮಾಪಕರಲ್ಲಿ ಆತಂಕ ಶುರುವಾಗಿದೆ. 'ಕಾಟೇರ' ಸಿನಿಮಾ ಯಶಸ್ವಿಯಾದ ಬಳಿಕ ಪ್ರಕಾಶ್ ನಿರ್ದೇಶನದ 'ಡೆವಿಲ್' ಸೇರಿದಂತೆ ಹಲವು ಚಿತ್ರಗಳನ್ನು ದರ್ಶನ್ ಒಪ್ಪಿಕೊಂಡಿದ್ದರು.

ACTOR DARSHAN
ನಟ ದರ್ಶನ್ (ETV Bharat)

ದರ್ಶನ್ ತಮ್ಮ ಮಾಸ್ ಇಮೇಜ್​ನಿಂದ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ. ಆದರೆ, ಇದೀಗ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಅಪಹರಣ, ಅಮಾನವೀಯ ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಹೀಗಾಗಿ, ದರ್ಶನ್ ನಂಬಿ ಹಣ ಹೂಡಿರುವ ಕೆಲವು ಚಿತ್ರ ನಿರ್ಮಾಪಕರಲ್ಲಿ ಆತಂಕ ಶುರುವಾಗಿದೆ. ಈ ಪ್ರಕರಣದಲ್ಲಿ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ ಎಂಬ ಸಂಗತಿ ಈ ಆತಂಕಕ್ಕೆ ಕಾರಣ.

ದರ್ಶನ್ ಮುಂದಿನ ಸಿನಿಮಾಗಳು:ದರ್ಶನ್ ಚಿತ್ರಕ್ಕೆ ಹಾಕಿದ ಹಣ ತಂದುಕೊಡಬಲ್ಲ ನಟ ಎಂದು ಹೇಳಲಾಗುತ್ತದೆ. ಹಾಗಾಗಿಯೇ ನಿರ್ಮಾಪಕರು ಅವರನ್ನು ಹುಡುಕಿಕೊಂಡು ಬರುತ್ತಿದ್ದರು. ಅದರಂತೆ ಹಲವು ಚಿತ್ರಗಳಿಗೆ ಒಪ್ಪಿಗೆ ಸೂಚಿಸಿದ್ದರು. 'ಕಾಟೇರ' ಸಿನಿಮಾ ಸಕ್ಸಸ್ ಬಳಿಕ 'ಡೆವಿಲ್ ದ ಹೀರೋ' ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದು ಚಿತ್ರೀಕರಣ ನಡೆಯುತ್ತಿದೆ. ಈ ಹಿಂದೆ 'ತಾರಕ್' ಚಿತ್ರ ಮಾಡಿದ್ದ ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ 'ಡೆವಿಲ್' ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಟೀಸರ್​ನಿಂದಲೇ ಕೌತುಕ ಹುಟ್ಟಿಸಿರುವ 'ಡೆವಿಲ್' ಕೇವಲ 25 ದಿನಗಳ ಕಾಲ ಶೂಟಿಂಗ್ ಆಗಿದೆ ಎಂಬ ಮಾಹಿತಿ ಇದೆ. ಮೊದಲ ಶೆಡ್ಯೂಲ್‌ನಲ್ಲಿ ಆ್ಯಕ್ಷನ್ ಸಿಕ್ವೇನ್ಸ್ ವೇಳೆ ದರ್ಶನ್ ಎಡಗೈಗೆ ಗಾಯವಾದ್ದರಿಂದ ಶೂಟಿಂಗ್ ಮುಂದಕ್ಕೆ ಹಾಕಬೇಕಾಯಿತು. ರೇಣುಕಾಸ್ವಾಮಿ ಘಟನೆ ನಡೆಯುವ ಎರಡು ದಿನ ಮುನ್ನ ಎರಡನೇ ಹಂತದ ಶೂಟಿಂಗ್ ಆರಂಭವಾಗಿತ್ತು. ಮಂಗಳವಾರ ದರ್ಶನ್​ ಚಿತ್ರತಂಡದಲ್ಲಿ ಭಾಗವಹಿಸಬೇಕಿತ್ತು. ಆದರೆ, ಅಷ್ಟರಲ್ಲಿ ಗಂಭೀರ ಸ್ವರೂಪದ ಕೊಲೆ ಕೇಸ್‌ನಲ್ಲಿ ಸಿಲುಕಿದ್ದಾರೆ.

ದರ್ಶನ್ ಬಂಧನದ ಸುದ್ದಿ ಕೇಳಿ ಬರುತ್ತಿದ್ದಂತೆ ನಿರ್ದೇಶಕ ಪ್ರಕಾಶ್ ಚಿತ್ರದ ಚಿತ್ರೀಕರಣ ನಿಲ್ಲಿಸಿದ್ದಾರೆ ಎಂಬ ವರದಿ ಇದೆ. 'ಡೆವಿಲ್' ಚಿತ್ರವನ್ನು ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡುವುದಾಗಿ ಪ್ರಕಾಶ್ ಈ ಹಿಂದೆಯೇ ಹೇಳಿದ್ದರು. ದರ್ಶನ್​ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಆದರೀಗ ಚಿತ್ರವು ಮುಂದಕ್ಕೆ ಹೋಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ದರ್ಶನ್ ಈ ಪ್ರಕರಣದಿಂದ ಹೊರಬರುವವರೆಗೂ ಚಿತ್ರೀಕರಣ ಕಷ್ಟಸಾಧ್ಯ. ಹಾಗಾಗಿ ಈ ಮೊದಲು ಹೇಳಿದ ದಿನದ ಬದಲು ಚಿತ್ರದ ಬಿಡುಗಡೆ ದಿನಾಂಕ ಸ್ವಲ್ಪ ದಿನಗಳ ಮುಂದಕ್ಕೆ ಹೋಗಬಹುದು ಎನ್ನುತ್ತದೆ ಗಾಂಧಿನಗರ.

'ಡೆವಿಲ್' ಬಳಿಕ ದರ್ಶನ್ 'ಸಿಂಧೂರ ಲಕ್ಷ್ಮಣ' ಚಿತ್ರಕ್ಕೂ ಸಹಿ ಹಾಕಿದ್ದರು. 'ಕ್ರಾಂತಿ' ನಿರ್ಮಾಪಕ ಬಿ.ಸುರೇಶ್ ನಿರ್ಮಾಣ ಹಾಗೂ ತರುಣ್ ಸುಧೀರ್ ನಿರ್ದೇಶನದ ಈ ಚಿತ್ರ ಇನ್ನೇನು ಶುರುವಾಗಬೇಕಿತ್ತು. ಈ ಮಧ್ಯೆ ಜೋಗಿ ಪ್ರೇಮ್ ನಿರ್ದೇಶನದ, ಕೆವಿಎನ್ ಪ್ರೋಡಕ್ಷನ್ ಅಡಿ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹಾಗೆಯೇ 'ಜಗ್ಗುದಾದ' ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದ ನಿರ್ದೇಶಕ ರಾಘವೇಂದ್ರ ಹೆಗ್ಡೆ ಜೊತೆಗೂ ಮಗದೊಂದು ಸಿನಿಮಾ ಮಾಡುವುದಾಗಿಯೂ ಹೇಳಿದ್ದರು.

'ಸಿಂಧೂರ ಲಕ್ಷ್ಮಣ' ಶೂಟಿಂಗ್ ಬಳಿಕ ಈ ಚಿತ್ರದ ಆರಂಭಗೊಳ್ಳಲಿದೆ. ಇದಷ್ಟೇ ಅಲ್ಲದೇ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರ ನಿರ್ಮಾಪಕ ಬಿವಿಎಸ್​ಎನ್ ಪ್ರಸಾದ್ ಜೊತೆಗೂ ಹೊಸ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದರು. ಇದರೊಂದಿಗೆ ತಮಿಳು ನಿರ್ಮಾಪಕ ರಮೇಶ್ ಪಿಳ್ಳೈ ಅವರ ಜೊತೆಗೆ ಹಾಗೂ ಹೈದರಾಬಾದ್ ನಿರ್ಮಾಪಕ ರಘುನಾಥ್ ಎಂಬವರೊಂದಿಗೂ ಕೂಡ ಹೊಸ ಚಿತ್ರದ ಬಗ್ಗೆ ದರ್ಶನ್​ ಮಾತುಕತೆ ನಡೆಸಿರುವುದಾಗಿ ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.

ಇದನ್ನೂ ಓದಿ:'ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್-ಪವಿತ್ರಾ ನಿರಪರಾಧಿಗಳು': ವಕೀಲ ನಾರಾಯಣಸ್ವಾಮಿ - Darshan Advocate Narayanaswamy

ABOUT THE AUTHOR

...view details