ಹಾವೇರಿ: ನಟ ಪುನೀತ್ ರಾಜ್ಕುಮಾರ್ ಅಪ್ಪಟ ಅಭಿಮಾನಿಯೊಬ್ಬರು, ಅವರ ಜೊತೆ ನಟಿಸಬೇಕೆಂಬ ಆಸೆ ಈಡೀರಿಲ್ಲ ಎಂದು ತಮ್ಮ ಮನೆಯ ಆವರಣದಲ್ಲೇ ಅವರಿಗೊಂದು ದೇವಸ್ಥಾನ ಕಟ್ಟಿಸಿದ್ದಾರೆ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ಪ್ರಕಾಶ್ ಎನ್ನುವವರು ತಮ್ಮ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅವರಿಗೆ ದೇವಸ್ಥಾನ ಕಟ್ಟಿಸಿದವರು.
ಅಪ್ಪಟ ಅಭಿಮಾನಿಯಿಂದ 'ಅಪ್ಪು'ಗೆ ದೇವಸ್ಥಾನ ನಿರ್ಮಾಣ (ETV Bharat) ಪ್ರಕಾಶ್ ವೃತ್ತಿಯಲ್ಲಿ ಡ್ಯಾನ್ಸ್ ಮಾಸ್ಟರ್. ಪ್ರಕಾಶ್ಗೆ ನಟ ಡಾ. ಪುನೀತ್ ರಾಜ್ಕುಮಾರ್ ಎಂದರೆ ಪಂಚಪ್ರಾಣ. ಅವರ ಜೊತೆ ನಟಿಸಬೇಕು ಎಂಬುದು ಪ್ರಕಾಶ್ ಅವರ ಅದಮ್ಯ ಆಸೆಯಾಗಿತ್ತು. ಈ ಬಗ್ಗೆ ಪುನೀತ್ಗೆ ಹೇಳಬೇಕು, ಅವರ ಜೊತೆ ನಟಿಸಬೇಕು ಎಂದು ಹಲವು ಬಾರಿ ಪುನೀತ್ ಭೇಟಿಗೆ ತೆರಳಿದ್ದರು. ಆದರೆ, ಅವರನ್ನು ಭೇಟಿಯಾಗುವ ಅವಕಾಶ ಪ್ರಕಾಶ್ಗೆ ಸಿಕ್ಕಿರಲಿಲ್ಲ. ಕೊನೆಗೆ ದೂರದಿಂದ ನೋಡಿದ ತೃಪ್ತಿಯಿಂದ ಪ್ರಕಾಶ್ ಮನೆಗೆ ಮರಳಿದ್ದರು.
ಆದರೆ ಅವರ ಜೊತೆ ನಟಿಸಬೇಕೆಂಬ ಆಸೆ ಜೀವಂತವಾಗಿತ್ತು. ಪುನೀತ್ ರಾಜ್ ಕುಮಾರ್ ಅಗಲಿದ್ದು, ಪ್ರಕಾಶ್ ಕನಸು ನುಚ್ಚುನೂರು ಮಾಡಿತ್ತು. "ಪುನೀತ್ ರಾಜ್ಕುಮಾರ್ ನನ್ನ ದೇವರು. ಅವರು ನಮ್ಮ ಜೊತೆ ಇದ್ದಾರೆ. ದೇವರ ಜೊತೆ ನಟಿಸದಿದ್ದರೇ ಏನಾತು, ನನ್ನ ದೇವರಿಗೆ ನಮ್ಮ ಮನೆಯ ಆವರಣದಲ್ಲಿ ದೇವಸ್ಥಾನ ಕಟ್ಟಿಸಿದರೇ ಹೇಗೆ" ಎಂದು ಪ್ರಕಾಶ್ ಇದೀಗ ತಮ್ಮ ಮನೆಯ ಆವರಣದಲ್ಲಿ ಪುನೀತ್ ರಾಜ್ಕುಮಾರ್ಗೆ ಚಿಕ್ಕದಾದ ದೇವಸ್ಥಾನ ಕಟ್ಟಿಸಿದ್ದಾರೆ.
ಅಪ್ಪಟ ಅಭಿಮಾನಿಯಿಂದ 'ಅಪ್ಪು'ಗೆ ದೇವಸ್ಥಾನ ನಿರ್ಮಾಣ (ETV Bharat) ಅವರ ಜೊತೆ ನಟಿಸಲಾಗದಿದ್ದರೂ, ಏನು ಕೊನೆಯ ಪಕ್ಷ ಅವರಿಗೆ ದೇವಸ್ಥಾನ ಕಟ್ಟಿಸುವ ಆಸೆಯನ್ನು ಪ್ರಕಾಶ್ ಈಡೇರಿಸಿಕೊಂಡಿದ್ದಾರೆ. ಐದು ಲಕ್ಷ ರೂಪಾಯಿಗೂ ಅಧಿಕ ರೂಪಾಯಿ ಖರ್ಚು ಮಾಡಿ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಇನ್ನೇನು ಬೆರಳೆಣಿಕೆಯಷ್ಟು ದಿನಗಳಲ್ಲಿ ದೇವಸ್ಥಾನ ಪೂರ್ಣಗೊಳ್ಳಲಿದೆ. ಪುನೀತ್ ಅವರನ್ನು ಹೋಲುವ ಪ್ರತಿಮೆ ಮಾಡಿಸಲಾಗುತ್ತಿದ್ದು, ಪೂರ್ಣವಾಗುತ್ತಿದ್ದಂತೆ ಪ್ರತಿಮೆ ಸ್ಥಾಪಿಸಿ ದೇವಸ್ಥಾನ ಉದ್ಘಾಟನೆ ಮಾಡಬೇಕು ಎಂದು ಪ್ರಕಾಶ್ ನಿರ್ಧರಿಸಿದ್ದಾರೆ.
ಇದಕ್ಕಾಗಿ ಹೀಗಾಗಲೇ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿ ಉದ್ಘಾಟನೆಗೆ ಆಹ್ವಾನ ನೀಡಿ ಬಂದಿದ್ದಾರೆ. ಅಂದುಕೊಂಡಂತೆ ನಡೆದರೆ ಈ ತಿಂಗಳಲ್ಲಿ ಹಾವೇರಿ ತಾಲೂಕಿನ ಯಲಗಚ್ಚದಲ್ಲಿ ಪುನೀತ್ ರಾಜ್ಕುಮಾರ್ ದೇವಸ್ಥಾನ ಉದ್ಘಾಟನೆಯಾಗಲಿದೆ. ದೇವಸ್ಥಾನದಲ್ಲಿ ಪುನೀತ್ ಅಭಿನಯದ ಚಿತ್ರಗಳನ್ನು ಬರೆಸಲಾಗುತ್ತದೆ. ಅಲ್ಲದೇ ಪುನೀತ್ ಅಪರೂಪದ ಚಿತ್ರಗಳನ್ನು ದೇವಸ್ಥಾನದಲ್ಲಿ ಪ್ರದರ್ಶಿಸುವ ಇಂಗಿತ ಪ್ರಕಾಶ್ ಅವರದ್ದು.
ಅಪ್ಪಟ ಅಭಿಮಾನಿಯಿಂದ 'ಅಪ್ಪು'ಗೆ ದೇವಸ್ಥಾನ ನಿರ್ಮಾಣ (ETV Bharat) ದೇವಸ್ಥಾನದಲ್ಲಿ ಪುನೀತ್ ಪ್ರತಿಮೆ ಪ್ರತಿಷ್ಠಾಪನೆವರೆಗೆ ಪಾದರಕ್ಷೆ ಹಾಕದೆ ಪ್ರಕಾಶ್ ನಡೆದಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಕಾಶ್, "ಪುನೀತ್ ಜೊತೆ ನಟಿಸದಿದ್ದರೇನಾಯಿತು, ಅವರ ಪ್ರತಿಮೆಗೆ ನಿತ್ಯ ಪೂಜೆ ಸಲ್ಲಿಸುವ ಸೌಭಾಗ್ಯ ದೊರಕಿದೆ. ಅದೇ ಸಾಕು." ಎನ್ನುತ್ತಾರೆ. ಪ್ರಕಾಶ್ ಅವರ ಈ ಕಾರ್ಯಕ್ಕೆ ಯಲಗಚ್ಚ ಸೇರಿದಂತೆ ವಿವಿಧ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಮುಂದೆ ದೇವಸ್ಥಾನ ವಿಸ್ತರಿಸುವ ಆಸೆ ಇರುವ ಪ್ರಕಾಶ್, ಸ್ಥಿತಿವಂತರಾದರೆ ದೊಡ್ಡದಾದ ದೇವಸ್ಥಾನ ಕಟ್ಟಿಸುವ ಇಚ್ಛೆ ಹೊಂದಿದ್ದಾರೆ.
ಇದನ್ನೂ ಓದಿ:'ದೇವರ' ಸಾಂಗ್ ರಿಲೀಸ್ಗೆ ಡೇಟ್ ಫಿಕ್ಸ್: ಜೂ.ಎನ್ಟಿಆರ್-ಜಾಹ್ನವಿ ರೊಮ್ಯಾಂಟಿಕ್ ಲುಕ್ಗೆ ಫ್ಯಾನ್ಸ್ ಫಿದಾ - Devara