ಕರ್ನಾಟಕ

karnataka

ETV Bharat / business

ಬೆಲೆ ನಿಯಂತ್ರಣ ಕ್ರಮ: ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ - WHEAT STOCK LIMIT

ಗೋಧಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದೆ.

ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ
ಗೋಧಿ ದಾಸ್ತಾನಿಗೆ ಮಿತಿ (IANS)

By ETV Bharat Karnataka Team

Published : Dec 11, 2024, 8:05 PM IST

ನವದೆಹಲಿ: ಗೋಧಿಯ ಬೆಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ನಿರಂತರ ಪ್ರಯತ್ನಗಳ ಭಾಗವಾಗಿ, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ತಾವು ದಾಸ್ತಾನು ಮಾಡಿಟ್ಟುಕೊಳ್ಳಬಹುದಾದ ಗೋದಿ ದಾಸ್ತಾನು ಮಿತಿಯನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದು 2025ರ ಮಾರ್ಚ್ 31ರವರೆಗೆ ಅನ್ವಯವಾಗಲಿದೆ.

ಪ್ರಸ್ತುತ ಗೋಧಿ ದಾಸ್ತಾನು ಮಿತಿಯನ್ನು ಸಗಟು ವ್ಯಾಪಾರಿಗಳಿಗೆ 2,000 ಮೆಟ್ರಿಕ್ ಟನ್ ನಿಂದ 1,000 ಮೆಟ್ರಿಕ್ ಟನ್‌ಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ 100 ಮೆಟ್ರಿಕ್ ಟನ್‌ನಿಂದ 50 ಮೆಟ್ರಿಕ್ ಟನ್‌ಗೆ ಇಳಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಗೋಧಿ ದಾಸ್ತಾನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಎಲ್ಲಾ ಗೋಧಿ ದಾಸ್ತಾನು ಘಟಕಗಳು ಗೋಧಿ ದಾಸ್ತಾನು ಮಿತಿ ಪೋರ್ಟಲ್ (https://evegoils.nic.in/wsp/login)ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಶುಕ್ರವಾರ ಸ್ಟಾಕ್ ಸ್ಥಿತಿಯನ್ನು ಅಪ್ಡೇಟ್ ಮಾಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ.

ಪೋರ್ಟಲ್​ನಲ್ಲಿ ನೋಂದಾಯಿಸದ ಅಥವಾ ಸ್ಟಾಕ್ ಮಿತಿಗಳನ್ನು ಉಲ್ಲಂಘಿಸುವ ಕಂಪನಿ ಅಥವಾ ಉದ್ಯಮಗಳ ವಿರುದ್ಧ ಅಗತ್ಯ ಸರಕುಗಳ ಕಾಯ್ದೆ, 1955ರ ಸೆಕ್ಷನ್ 6 ಮತ್ತು 7ರ ಅಡಿಯಲ್ಲಿ ಸೂಕ್ತ ದಂಡನಾತ್ಮಕ ಕ್ರಮ ಕೈಗೊಳ್ಳಬಹುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಕಂಪನಿಗಳು ಹೊಂದಿರುವ ದಾಸ್ತಾನು ನಿಗದಿತ ಮಿತಿಗಿಂತ ಹೆಚ್ಚಿದ್ದರೆ, ಅಧಿಸೂಚನೆ ಹೊರಡಿಸಿದ 15 ದಿನಗಳ ಒಳಗೆ ಅದನ್ನು ನಿಗದಿತ ಸ್ಟಾಕ್ ಮಿತಿಗೆ ತರಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬೆಲೆಗಳನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಸುಲಭ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಗೋಧಿಯ ದಾಸ್ತಾನು ಸ್ಥಿತಿಯ ಮೇಲೆ ನಿಕಟ ನಿಗಾ ಇಡುತ್ತಿದೆ ಎಂದು ಅದು ವಿವರಿಸಿದೆ.

"2024 ರ ಹಿಂಗಾರು ಅವಧಿಯಲ್ಲಿ ಒಟ್ಟು 1,132 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಗೋಧಿ ಉತ್ಪಾದಿಸಲಾಗಿದೆ ಮತ್ತು ದೇಶದಲ್ಲಿ ಗೋಧಿಯ ಸಾಕಷ್ಟು ಲಭ್ಯತೆ ಇದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಮತ್ತು ಹೋರ್ಡಿಂಗ್ ಮತ್ತು ಊಹಾಪೋಹಗಳನ್ನು ತಡೆಗಟ್ಟಲು, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವ್ಯಾಪಾರಿಗಳು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು ಮತ್ತು ಸಂಸ್ಕರಣೆದಾರರಿಗೆ ಅನ್ವಯವಾಗುವಂತೆ ಗೋಧಿಯ ಮೇಲೆ ದಾಸ್ತಾನು ಮಿತಿಗಳನ್ನು ವಿಧಿಸಿದೆ.

ಇದನ್ನೂ ಓದಿ: ವಿಶ್ವಕರ್ಮ ಯೋಜನೆಯಡಿ 1,751 ಕೋಟಿ ರೂ. ಸಾಲ ಮಂಜೂರು: ಸಂಸತ್ತಿಗೆ ಸರ್ಕಾರದ ಮಾಹಿತಿ

ABOUT THE AUTHOR

...view details