ಕರ್ನಾಟಕ

karnataka

ETV Bharat / bharat

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಅಸಾಮಾನ್ಯ ಸಾಧಕ: ಚಂದ್ರಬಾಬು ನಾಯ್ಡು - Chandrababu Pay Homage to Ramoji Rao - CHANDRABABU PAY HOMAGE TO RAMOJI RAO

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಇಂದು ನಿಧನರಾಗಿದ್ದಾರೆ. ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಮೋಜಿ ರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಎಂ.ವೆಂಕಯ್ಯ ನಾಯ್ಡು, ಚಂದ್ರಬಾಬು ನಾಯ್ಡು, ಚಿರಂಜೀವಿ, ಪವನ್ ಕಲ್ಯಾಣ್ ಪಡೆದರು.

Chandrababu Naidu Pay Homage to Ramoji Rao
ರಾಮೋಜಿ ರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಚಂದ್ರಬಾಬು ನಾಯ್ಡು ಪಡೆದರು. (ETV Bharat)

By ETV Bharat Karnataka Team

Published : Jun 8, 2024, 9:31 PM IST

Updated : Jun 8, 2024, 9:49 PM IST

ಹೈದರಾಬಾದ್: ಶನಿವಾರ (ಜೂನ್​ 8) ನಿಧನರಾದ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗ, ರಾಜಕೀಯ, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಕೇಂದ್ರದ ಮಾಜಿ ಸಚಿವೆ ನಿರ್ಮಲಾ ಸೀತಾರಾಮನ್, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ದಂಪತಿ, ನಟರಾದ ಚಿರಂಜೀವಿ, ಪವನ್ ಕಲ್ಯಾಣ್ ಅಂತಿಮ ನಮನ ಸಲ್ಲಿಸಿದರು.

ರಾಮೋಜಿ ರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಎಂ.ವೆಂಕಯ್ಯ ನಾಯ್ಡು (ETV Bharat)

ದೆಹಲಿ ಪ್ರವಾಸದಲ್ಲಿದ್ದ ಚಂದ್ರಬಾಬು ನಾಯ್ಡುನವರು ಶಂಶಾಬಾದ್ ವಿಮಾನ ನಿಲ್ದಾಣದಿಂದ ನೇರವಾಗಿ ರಾಮೋಜಿ ಫಿಲ್ಮ್‌ ಸಿಟಿಗೆ ಆಗಮಿಸಿದರು. ಪತ್ನಿ ಭುವನೇಶ್ವರಿ ಅವರೊಂದಿಗೆ ರಾಮೋಜಿ ರಾವ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ಅರ್ಪಿಸಿ ಚಂದ್ರಬಾಬು ನಮನ ಸಲ್ಲಿಸಿದರು. ಈ ವೇಳೆ, ರಾಮೋಜಿ ರಾವ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಅವರಿಗೆ ಧೈರ್ಯ ತುಂಬಿದರು. ಜೊತೆಗೆ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಅವರ ಪತ್ನಿ ಬ್ರಹ್ಮಿಣಿ ಕೂಡ ರಾಮೋಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನಿರ್ಮಲಾ ಸೀತಾರಾಮನ್ ಹೂಗುಚ್ಛ ಅರ್ಪಿಸಿ ರಾಮೋಜಿ ರಾವ್ ಅವರಿಗೆ ಗೌರವ ಸಲ್ಲಿಸಿದರು. (ETV Bharat)

ರಾಮೋಜಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅಸಾಮಾನ್ಯ ಸಾಧಕ: ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾತನಾಡಿ, ''ರಾಮೋಜಿ ರಾವ್ ಅವರು ತೆಲುಗು ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿರುತ್ತಾರೆ. 'ಮಾರ್ಗದರ್ಶಿ', 'ಈನಾಡು', 'ಈಟಿವಿ' ಮತ್ತು 'ಫಿಲ್ಮ್‌ ಸಿಟಿ'ಯಂತಹ ಸಂಸ್ಥೆಗಳ ಸ್ಥಾಪನೆಯೊಂದಿಗೆ ಅಪಾರ ಕೊಡುಗೆ, ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ್ ನಾಯಕನ ನಿಧನವು ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದರು.

ರಾಮೋಜಿ ರಾವ್ ಅವರಿಗೆ ಚಂದ್ರಬಾಬು, ಪತ್ನಿ ಭುವನೇಶ್ವರಿ ಅಂತಿಮ ನಮನ ಸಲ್ಲಿಸಿದರು. (ETV Bharat)

''ರಾಮೋಜಿ ರಾವ್ ತೆಲುಗಿನ ಬೆಳಕು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ಸಾಧನೆ ಮಾಡಿದವರು. ರಾಮೋಜಿ ರಾವ್ ಅವರ ನಿಧನ ಅತೀವ ನೋವು ತಂದಿದೆ. ಅಕ್ಷರ ಯೋಧ ಎಂದೇ ಖ್ಯಾತರಾಗಿರುವ ರಾಮೋಜಿ ರಾವ್ ಅವರ ಸೇವೆ ಅಪಾರ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ತೆಲುಗು ಜನರ ಬದುಕಿನಲ್ಲಿ ಅತ್ಯಂತ ಪ್ರಭಾವಿ ಛಾಪು ಮೂಡಿಸಿರುವ ರಾಮೋಜಿ ತೆಲುಗು ಜನರ ಆಸ್ತಿಯಾಗಿದ್ದು, ಅವರ ನಿಧನ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೆ ದೊಡ್ಡ ನಷ್ಟ'' ಎಂದು ಸಂತಾಪ ಸೂಚಿಸಿದರು.

''ಅನುನಿತ್ಯ ಸಮಾಜಕ್ಕಾಗಿ ರಾಮೋಜಿ ರಾವ್ ಅವಿರತವಾಗಿ ಶ್ರಮಿಸಿದವರು. ಅವರು ಒಬ್ಬ ವ್ಯಕ್ತಿಯಲ್ಲ ಒಂದು ವ್ಯವಸ್ಥೆ. ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದವರು. ರಾಮೋಜಿ ರಾವ್ ಅವರು ಧರ್ಮಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದರು. ರಾಮೋಜಿ ರಾವ್ ಕಟ್ಟಿದ ಸಂಸ್ಥೆಗಳು ಶಾಶ್ವತ. ರಾಮೋಜಿ ಫಿಲ್ಮ್‌ ಸಿಟಿಯನ್ನು ಅತ್ಯುನ್ನತ ಗುಣಮಟ್ಟದೊಂದಿಗೆ ಸ್ಥಾಪಿಸಲಾಗಿದೆ. ರಾಮೋಜಿ ರಾವ್ ಅವರು ತಮ್ಮ ಜೀವಿತಾವಧಿಯಲ್ಲಿ ವಿಶ್ವಾಸಾರ್ಹತೆಯನ್ನು ಗಳಿಸಿದ್ದರು. ತೆಲುಗು ನಾಡನ್ನು ಮುಂದೆ ಕೊಂಡೊಯ್ಯಲು ದುಡಿದವರು. ಆಂಧ್ರದ ಅಭಿವೃದ್ಧಿಗೆ ಅವರು ನೀಡಿದ ಸ್ಫೂರ್ತಿಯೊಂದಿಗೆ ನಾವು ಮುನ್ನಡೆಯುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಟಿಡಿಪಿ ಅಧ್ಯಕ್ಷ ತಿಳಿಸಿದರು.

ರಾಮೋಜಿ ರಾವ್ ಅವರಿಗೆ ಪವನ್ ಕಲ್ಯಾಣ್ ಅಂತಿಮ ನಮನ ಸಲ್ಲಿಸಿದರು. (ETV Bharat)

ರಾಮೋಜಿ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ-ವೆಂಕಯ್ಯ:ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮಾತನಾಡಿ, ''ರಾಮೋಜಿ ರಾವ್ ಒಬ್ಬ ವ್ಯಕ್ತಿಯಲ್ಲ, ಶಕ್ತಿಯುತ ವ್ಯವಸ್ಥೆ, ಅವರು ಶ್ರಮದಿಂದ ಅನೇಕ ಕ್ಷೇತ್ರಗಳಲ್ಲಿ ಯಶಸ್ವಿಯಾದರು. ನಿರಂತರವಾಗಿ ಧ್ರುವತಾರೆಯಾಗಿ ಮಿಂಚುತ್ತಾರೆ. ಅವರು ಕೈಗೊಂಡ ಕಾರ್ಯಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ'' ಎಂದು ಬಣ್ಣಿಸಿದರು.

ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಮಾತನಾಡಿ, ''ರಾಮೋಜಿ ರಾವ್ ಅವರು ತೆಲುಗು ಚಿತ್ರರಂಗದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಅತ್ಯುನ್ನತ ಗುಣಮಟ್ಟದೊಂದಿಗೆ ಉತ್ತಮವಾದ ಫಿಲ್ಮ್‌ ಸಿಟಿಯನ್ನು ನಿರ್ಮಿಸಿದ್ದಾರೆ. ಎನ್​ಡಿಎ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದ ನಂತರ ರಾಮೋಜಿ ರಾವ್ ಅವರನ್ನು ಭೇಟಿಯಾಗಬೇಕು ಎಂದುಕೊಂಡಿದ್ದೆ. ಜನಸೇನಾ ಮತ್ತು ನನ್ನ ಪರವಾಗಿ ಅವರಿಗೆ ನನ್ನ ಸಂತಾಪ ಅರ್ಪಿಸುತ್ತೇನೆ'' ಎಂದರು.

ರಾಮೋಜಿ ರಾವ್ ಅವರ ಪಾರ್ಥಿವ ಶರೀರಕ್ಕೆ ಚಿರಂಜೀವಿ ಅಂತಿಮ ನಮನ ಸಲ್ಲಿಸಿದರು. (ETV Bharat)

ಮೆಗಾಸ್ಟಾರ್ ಚಿರಂಜೀವಿ ಮಾತನಾಡಿ, ''ರಾಮೋಜಿ ರಾವ್ ಅವರು ತಮ್ಮ ಕಲ್ಪನೆಗಳನ್ನು ಅಕ್ಷರ ರೂಪಕ್ಕೆ ತರುತ್ತಿದ್ದರು. ಅವರ ಮಹತ್ವಾಕಾಂಕ್ಷೆ ಈಡೇರಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ರಾಮೋಜಿ ರಾವ್ ಅವರ ನಿಧನ ಅವರ ಕುಟುಂಬಕ್ಕೆ ಮಾತ್ರವಲ್ಲ, ತೆಲುಗು ರಾಜ್ಯಗಳಿಗೂ ನಷ್ಟ. ಒಬ್ಬ ಮಹಾನ್ ವ್ಯಕ್ತಿ ಹಾಗೂ ಶಕ್ತಿಯನ್ನು ಕಳೆದುಕೊಂಡಿದ್ದೇವೆ'' ಎಂದರು.

ಸಂತಾಪ ಸೂಚಿಸಿದ ಇತರ ಗಣ್ಯರು: ತೆಲಂಗಾಣ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ, ತೆಲಂಗಾಣ ವಿಧಾನ ಪರಿಷತ್ ಸಭಾಪತಿ ಗುಟ್ಟಾ ಸುಖೇಂದರ್ ರೆಡ್ಡಿ, ಸಚಿವರಾದ ಉತ್ತಮಕುಮಾರ್ ರೆಡ್ಡಿ, ತುಮ್ಮಲ ನಾಗೇಶ್ವರ್ ರಾವ್, ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಪೊನ್ನಂ ಪ್ರಭಾಕರ್, ಶಾಸಕ ಮಲ್ಲಾರೆಡ್ಡಿ ರಂಗಾರೆಡ್ಡಿ, ಬಿಆರ್​ಎಸ್​ ಪಕ್ಷದ ಕಾರ್ಯಾಧ್ಯಕ್ಷ ಕೆಟಿಆರ್, ಮಾಜಿ ಸಚಿವರಾದ ಹರೀಶ್ ರಾವ್, ತಲಸಾನಿ ಶ್ರೀನಿವಾಸ್ ಯಾದವ್, ಪುವ್ವಾಡ ಅಜಯ್ ಕುಮಾರ್, ಜಗದೀಶ್ ರೆಡ್ಡಿ, ಸಬಿತಾ ಇಂದ್ರಾರೆಡ್ಡಿ ಮತ್ತಿತರ ಮುಖಂಡರು ರಾಮೋಜಿ ರಾವ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು.

ಇದನ್ನೂ ಓದಿ:ಅವಕಾಶ ದೊರೆತಾಗೆಲ್ಲ, ಕನ್ನಡದ ಡಿಂಡಿಮ ಬಾರಿಸಿದ್ದೇವೆ - ರಾಮೋಜಿ ರಾವ್​ 'ಕನ್ನಡ' ಮಾತು; ಒಂದು ನೆನಪು - Ramoji Rao

Last Updated : Jun 8, 2024, 9:49 PM IST

ABOUT THE AUTHOR

...view details