ಬಸ್ತಿ (ಉತ್ತರ ಪ್ರದೇಶ): ಮೂಢನಂಬಿಕೆಯಿಂದಾಗಿ ಉತ್ತರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಬಸ್ತಿ ಜಿಲ್ಲೆಯಲ್ಲಿ ಗುರುವಾರ ಮಹಿಳೆಯೊಬ್ಬರು 'ಅತೀಂದ್ರಿಯ ಆಚರಣೆ' ಭಾಗವಾಗಿ ತನ್ನ ಪುಟ್ಟ ಮಗಳ ಕತ್ತನ್ನು ಹರಿತವಾದ ವಸ್ತುವಿನಿಂದ ಸೀಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತಾಯಿ ಗೀತಾ (33) ಎಂಬುವವರು ತನ್ನ ಎರಡು ತಿಂಗಳ ಮಗಳ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ಮಾಡಿದ್ದಾರೆ. ತಾಯಿಯ ಈ ಕೃತ್ಯದಿಂದಾಗಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಈ ನಡುವೆ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಆಕೆಯ ಪತಿ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಗಂಭೀರವಾಗಿ ಗಾಯಗೊಂಡ ಮಗುವನ್ನು ಆಕೆಯ ಕುಟುಂಬ ಸದಸ್ಯರು ಆಸ್ಪತ್ರೆಗೆ ಸಾಗಿಸಿದ್ದು, ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.