ಕರ್ನಾಟಕ

karnataka

ETV Bharat / bharat

'ಟ್ರೇನ್ ಆ್ಯಕ್ಸಿಡೆಂಟ್ಸ್​ ಹೋತಾ ರೆಹ್ತಾ ಹೈ': ಕೇಂದ್ರ ಸಚಿವರ ಶಾಕಿಂಗ್ ಹೇಳಿಕೆ!

ರೈಲು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಎಂಬ ಕೇಂದ್ರ ಸಚಿವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

By ETV Bharat Karnataka Team

Published : 5 hours ago

ಕೇಂದ್ರ ಸಚಿವ ಲಾಲನ್ ಸಿಂಗ್
ಕೇಂದ್ರ ಸಚಿವ ಲಾಲನ್ ಸಿಂಗ್ (ANI)

ಪಾಟ್ನಾ: ರೈಲು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಎಂಬ ಕೇಂದ್ರ ಸಚಿವ ಲಾಲನ್ ಸಿಂಗ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳುನಾಡಿನಲ್ಲಿ ನಡೆದ ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್​ಪ್ರೆಸ್​ ರೈಲು ಅಪಘಾತದ ಬಗ್ಗೆ ಈ ರೀತಿಯ ಸಂವೇದನಾರಹಿತ ಹೇಳಿಕೆ ನೀಡುವ ಮೂಲಕ ಸಚಿವರು ಆಘಾತ ಮೂಡಿಸಿದ್ದಾರೆ. "ಅರೇ.. ಟ್ರೇನ್ ಆ್ಯಕ್ಸಿಡೆಂಟ್ಸ್​ ಹೋತಾ ರೆಹ್ತಾ ಹೈ.." ಎಂದು ಅವರು ಶನಿವಾರ ಹೇಳಿದ್ದಾರೆ.

ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್ ಪ್ರೆಸ್ ರೈಲು ತಮಿಳುನಾಡಿನ ಕವರಪೆಟ್ಟೈನಲ್ಲಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.

"12578 ಸಂಖ್ಯೆಯ ರೈಲು 20:27 ಗಂಟೆಗೆ ಪೊನ್ನೇರಿಯನ್ನು ದಾಟಿದೆ. ಈ ಸಂದರ್ಭದಲ್ಲಿ ರೈಲು ಲೂಪ್ ಲೈನ್ ಅನ್ನು ಪ್ರವೇಶಿಸಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕೆಲವರು ಗಾಯಗೊಂಡಿದ್ದಾರೆ" ಎಂದು ರೈಲ್ವೆ ಇಲಾಖೆಯ ಹೇಳಿಕೆ ತಿಳಿಸಿದೆ. ಅಪಘಾತದ ರಭಸಕ್ಕೆ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 13 ಬೋಗಿಗಳು ಹಳಿ ತಪ್ಪಿವೆ.

ಘಟನೆಯ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವ ಲಾಲನ್ ಸಿಂಗ್, ಇಂಥ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಎಂದು ಹಗುರವಾಗಿ ಮಾತನಾಡಿದ್ದಾರೆ.

"ಪ್ರತಿನಿತ್ಯವೂ ರೈಲು ಅಪಘಾತ ಸಂಭವಿಸುತ್ತಲೇ ಇರುತ್ತವೆ. ಕೆಲವರು ಹಳಿಗಳ ಮೇಲೆ ವಸ್ತುಗಳನ್ನು ಇಟ್ಟು ಉದ್ದೇಶಪೂರ್ವಕವಾಗಿ ಅಪಘಾತವಾಗುವಂತೆ ಮಾಡುತ್ತಿದ್ದಾರೆ. ರೈಲ್ವೆ ಸಚಿವಾಲಯ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಹೇಳಿದರು.

ರಾಷ್ಟ್ರೀಯ ತನಿಖಾ ದಳದ (ಎನ್ಐಎ) ತಂಡವು ಶನಿವಾರ ಅಪಘಾತ ನಡೆದ ಕವರೈಪೆಟ್ಟೈ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ತನಿಖೆ ನಡೆಸುತ್ತಿದೆ. ಈ ಮಾರ್ಗದಲ್ಲಿ ರೈಲು ಸೇವೆಗಳನ್ನು ಆದಷ್ಟು ಬೇಗ ಪುನರಾರಂಭಿಸಲು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಮಳೆಯಿಂದಾಗಿ ಅಡ್ಡಿಯುಂಟಾಗಿದೆ ಎಂದು ರೈಲ್ವೆ ಅಧಿಕಾರಿಗಳು ಶನಿವಾರ ಮುಂಜಾನೆ ತಿಳಿಸಿದ್ದಾರೆ.

ಕಾಂಗ್ರೆಸ್​ ಟೀಕೆ: ಕೇಂದ್ರ ಸಚಿವರ ಹೇಳಿಕೆಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ಸಚಿವರ ಹೇಳಿಕೆ ಸಂವೇದನಾರಹಿತ ಮತ್ತು ನಾಚಿಕೆಗೇಡಿನದು ಎಂದು ಹೇಳಿದೆ.

"ದೇಶದಲ್ಲಿ ಪ್ರತಿದಿನ ರೈಲು ಅಪಘಾತಗಳು ಸಂಭವಿಸುತ್ತಿವೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಮತ್ತು ಗಾಯಗೊಳ್ಳುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಸಂಪುಟದ ಸಚಿವರೊಬ್ಬರು ಇದನ್ನು 'ಸಣ್ಣ ಘಟನೆ' ಎಂದು ಕರೆಯುವ ಮೂಲಕ ಅದನ್ನು ತಳ್ಳಿಹಾಕುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ" ಎಂದು ಕಾಂಗ್ರೆಸ್ ಪಕ್ಷದ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಬಾಬಾ ಸಿದ್ದಿಕಿ ಅಂತ್ಯಕ್ರಿಯೆ: ಮಹಾರಾಷ್ಟ್ರ ಸಿಎಂ ಶಿಂದೆ ಘೋಷಣೆ

ABOUT THE AUTHOR

...view details