ಕರ್ನಾಟಕ

karnataka

ETV Bharat / bharat

'ಅವು ಯಾರೂ ಪರಿಶೀಲಿಸಲಾಗದ ಕಪ್ಪು ಪೆಟ್ಟಿಗೆಗಳು': ಇವಿಎಂ ವಿರುದ್ಧ ರಾಹುಲ್ ಗಾಂಧಿ ಕಿಡಿ - Rahul Gandhi Criticize EVM

ಇವಿಎಂಗಳನ್ನು ಭಾರತದ ಚುನಾವಣಾ ವ್ಯವಸ್ಥೆಯಿಂದ ಹೊರಹಾಕುವಂತೆ ಎಲೋನ್ ಮಸ್ಕ್ ಹೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಕೂಡ ಇವಿಎಂಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಹುಲ್ ಗಾಂಧಿ
ರಾಹುಲ್ ಗಾಂಧಿ (IANS (ಸಂಗ್ರಹ ಚಿತ್ರ))

By PTI

Published : Jun 16, 2024, 2:02 PM IST

ನವದೆಹಲಿ: ಭಾರತದ ಚುನಾವಣೆ ವ್ಯವಸ್ಥೆಯಿಂದ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತೆಗೆದುಹಾಕುವಂತೆ ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಕರೆ ನೀಡಿದ ಬೆನ್ನಲ್ಲೇ ಈಗ ಕಾಂಗ್ರೆಸ್​ನ ಹಿರಿಯ ನಾಯಕ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಇವಿಎಂಗಳು ಯಾರೂ ಪರಿಶೀಲನೆ ಮಾಡಲು ಸಾಧ್ಯವಾಗದಂಥ ಒಂದು ರೀತಿಯ ಕಪ್ಪು ಪೆಟ್ಟಿಗೆಗಳಾಗಿವೆ ಎಂದು ಭಾನುವಾರ ರಾಹುಲ್ ಗಾಂಧಿ ಹೇಳಿದ್ದಾರೆ. ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಉಂಟಾದ ವಿವಾದಕ್ಕೆ ಸಂಬಂಧಿಸಿದ ಸುದ್ದಿಯ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.

"ಭಾರತದಲ್ಲಿನ ಇವಿಎಂಗಳು ಕಪ್ಪು ಪೆಟ್ಟಿಗೆಯಾಗಿದ್ದು, ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶವಿಲ್ಲ. ಹೀಗಾಗಿ ನಮ್ಮ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಸಂಶಯಗಳು ಮೂಡುವಂತಾಗಿದೆ" ಎಂದು ರಾಹುಲ್ ಗಾಂಧಿ ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

"ಸರ್ಕಾರಿ ಸಂಸ್ಥೆಗಳ ವಿಶ್ವಾಸಾರ್ಹತೆಯು ಪ್ರಶ್ನಾರ್ಹವಾದಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಉಂಟಾಗುತ್ತದೆ ಮತ್ತು ವ್ಯವಸ್ಥೆಯು ವಂಚನೆಗೆ ಗುರಿಯಾಗುತ್ತದೆ" ಎಂದು ಪೋಸ್ಟ್​ ಮಾಡಿರುವ ರಾಹುಲ್, ಮುಂಬೈ ವಾಯುವ್ಯ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಯ ಸಂಬಂಧಿಕರೊಬ್ಬರು ತಮ್ಮ ಫೋನ್​ ಅನ್ನು ಇವಿಎಂಗಳೊಂದಿಗೆ ಸಂಪರ್ಕಿಸಿದ್ದಾರೆ ಎಂಬ ಸುದ್ದಿ ವರದಿಯ ತುಣುಕನ್ನು ಇದರೊಂದಿಗೆ ಟ್ಯಾಗ್ ಮಾಡಿದ್ದಾರೆ.

"ಮಾನವರು ಅಥವಾ ಎಐ ನಿಂದ ಇವಿಎಂಗಳನ್ನು ಹ್ಯಾಕ್ ಮಾಡಬಹುದಾದ ಸಣ್ಣ ಸಾಧ್ಯತೆ ಇದ್ದರೂ ಕೂಡ ಇದರ ಪರಿಣಾಮಗಳು ದೊಡ್ಡದಾಗಿರುತ್ತವೆ. ಹೀಗಾಗಿ ಇವಿಎಂಗಳ ಬಳಕೆಯನ್ನು ನಿಲ್ಲಿಸಬೇಕು" ಎಂದು ಎಲೋನ್ ಮಸ್ಕ್ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ ಅನ್ನು ಕೂಡ ರಾಹುಲ್ ಟ್ಯಾಗ್ ಮಾಡಿದ್ದಾರೆ.

ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಏನಾಗಿತ್ತು?: ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 48 ಮತಗಳಿಂದ ಗೆದ್ದ ರವೀಂದ್ರ ವಾಯ್ಕರ್ ಅವರ ಸೋದರ ಮಾವ ಮಂಗೇಶ್ ಪಾಂಡಿಲ್ಕರ್ ವಿರುದ್ಧ ಜೂನ್ 4ರಂದು ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ನೆಸ್ಕೋ ಕೇಂದ್ರದಲ್ಲಿ ಇವಿಎಂ ಯಂತ್ರವನ್ನು ಅನ್​ಲಾಕ್ ಮಾಡಲು ಅಗತ್ಯವಾದ ಒಟಿಪಿಯನ್ನು ಪಡೆಯಲು ಪಾಂಡಿಲ್ಕರ್ ಮೊಬೈಲ್ ಫೋನ್ ಬಳಸಿದ್ದರು ಎಂದು ಮಿಡ್-ಡೇ ವರದಿ ಮಾಡಿತ್ತು.

ಮೊಬೈಲ್ ಫೋನ್​ ಅನ್ನು ಕೇವಲ ಕರೆ ಮಾಡಲು ಬಳಸಲಾಗಿದೆಯೇ ಅಥವಾ ಇನ್ನಾವುದಾದರೂ ಉದ್ದೇಶಕ್ಕೆ ಬಳಸಲಾಗಿದೆಯೇ ಎಂಬುದನ್ನು ದೃಢೀಕರಿಸಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿನ ಮಾಜಿ ಸಿಎಂ ಜಗನ್​​ ನಿವಾಸದ ಶೆಡ್​ ನೆಲಸಮ: ಆಂಧ್ರದಲ್ಲೂ ಕ್ರಮಕ್ಕೆ ಜನರ ಆಗ್ರಹ - Lotuspond

ABOUT THE AUTHOR

...view details