ಚೆನ್ನೈ, ತಮಿಳುನಾಡು: ಮೈಸೂರು- ದರ್ಬಾಂಗ್ನ ಬಾಗಮತಿ ಎಕ್ಸ್ಪ್ರೆಸ್ ರೈಲು ತಮಿಳುನಾಡಿನ ಕವರಾಯಪೆಟ್ಟೈ ಸಮೀಪದಲ್ಲಿ ಅಪಘಾತಗೊಂಡ ಪ್ರಕರಣದ ತನಿಖೆ ವೇಳೆ ಹೊಸ ತಿರುವು ಸಿಕ್ಕಿದೆ. ಅಕ್ಟೋಬರ್ 11 ರಂದು ಸಂಭವಿಸಿದ ಅಪಘಾತವು ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯವಾಗಿರಬಹುದು ಎಂಬ ಸಂಶಯ ತನಿಖಾ ತಂಡಗಳಿಗೆ ವ್ಯಕ್ತವಾಗಿದ್ದು, ಈ ಸಂಬಂಧದ ಸಾಕ್ಷಿಗಳ ಮತ್ತಷ್ಟು ಹೊಸ ಅಂಶಗಳನ್ನು ತನಿಖೆಯಲ್ಲಿ ಸೇರಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ರೈಲು ಹಳಿತಪ್ಪಿಸಲು ವಿಧ್ವಂಸಕ ಕೃತ್ಯ ಎಂದು ಆರೋಪಿಸಲಾಗಿದೆ.
ಅಕ್ಟೋಬರ್ 11ರಂದು ತಿರುವಳ್ಳೂರು ಜಿಲ್ಲೆಯ ಕವರಾಯಪೆಟ್ಟೈ ರೈಲು ನಿಲ್ದಾಣದಲ್ಲಿ ಬಾಗ್ಮತಿ ಎಕ್ಸ್ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಯಾವುದೇ ಸಾವು - ನೋವು ಆಗದಿದ್ದರೂ, 19 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.
ಈ ರೈಲು ಅಪಘಾತ ಪ್ರಕರಣದ ತನಿಖೆಯಲ್ಲಿ ಕೊರುಕ್ಕು ಪೆಟ್ಟೈ ರೈಲ್ವೆ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಮತ್ತು ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ನಡೆಸುತ್ತಿದೆ. ಈ ಸಂಬಂಧ ಲೋಕೋ ಪೈಲಟ್, ತಾಂತ್ರಿಕ, ಸಿಗ್ನಲ್ ಮತ್ತು ಟ್ರ್ಯಾಕ್ ನಿರ್ವಹಣೆ ವಿಭಾಗಗಳು ಸೇರಿದಂತೆ ವಿವಿಧ ಇಲಾಖೆಗಳ 40 ಕ್ಕೂ ಹೆಚ್ಚು ರೈಲ್ವೆ ನೌಕರರನ್ನು ವಿಚಾರಣೆಗೆ ಒಳಪಡಿಸಲಾಗಿದೆ.