ಕರ್ನಾಟಕ

karnataka

ETV Bharat / bharat

ಅಪರಾಧಗಳ ವಿರುದ್ಧ ಕಠಿಣ ಕ್ರಮ: ಕೋಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಕೊಲೆ ಕೇಸ್​ ಪ್ರಸ್ತಾಪಿಸಿದ ಪ್ರಧಾನಿ - PM MODI SPEECH - PM MODI SPEECH

ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಕೋಲ್ಕತ್ತಾದಲ್ಲಿ ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಉಲ್ಲೇಖಿಸಿದರು.

PM Narendra Modi
ಪ್ರಧಾನಿ ನರೇಂದ್ರ ಮೋದಿ (ANI)

By ETV Bharat Karnataka Team

Published : Aug 15, 2024, 11:34 AM IST

ನವದೆಹಲಿ: ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, "ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ" ಎಂದು ಹೇಳಿದರು.

ಕೆಂಪುಕೋಟೆಯಲ್ಲಿ ಧ್ವಜಾರೋಹಣ ಬಳಿಕ ಮಾತನಾಡಿದ ಅವರು, "ವಾಯುಪಡೆ, ಸೇನೆ, ನೌಕಾಪಡೆ ಮತ್ತು ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರ ನಾಯಕತ್ವಕ್ಕೆ ದೇಶ ಸಾಕ್ಷಿಯಾಗಿದೆ. ಆದರೆ ಈ ನಡುವೆ ಕೆಲವು ಆತಂಕಕಾರಿ ಬೆಳವಣಿಗೆಗಳು ದೇಶಕ್ಕೆ ಕಪ್ಪುಚುಕ್ಕೆ. ಇದರ ವಿರುದ್ಧ ಒಂದು ಸಮಾಜವಾಗಿ, ನಾವು ಗಂಭೀರವಾಗಿ ಯೋಚಿಸಬೇಕಾಗಿದೆ" ಎಂದರು.

"ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲಿನ ದೌರ್ಜನ್ಯದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇಶ, ಸಮಾಜ, ನಮ್ಮ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ಮೇಲಿನ ಅಪರಾಧಗಳ ತನಿಖೆ ವೇಗವಾಗಿ ನಡೆಯಬೇಕು. ರಾಕ್ಷಸ ಕೃತ್ಯಗಳಲ್ಲಿ ತೊಡಗಿದವರಿಗೆ ಆದಷ್ಟು ಬೇಗ ಕಠಿಣ ಶಿಕ್ಷೆ ನೀಡಿ, ಸಮಾಜದಲ್ಲಿ ನಂಬಿಕೆ ಮೂಡಿಸುವುದು ಅವಶ್ಯಕವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 31 ವರ್ಷದ ತರಬೇತಿನಿರತ ವೈದ್ಯೆ ಮೇಲೆ ನಡೆದ ಹೀನ ಕೃತ್ಯವನ್ನು ಪ್ರಧಾನಿ ಖಂಡಿಸಿದರು.

"ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ಸುದ್ದಿಗಳು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತವೆ. ಆದರೆ ಇಂತಹ ವಿಕೃತ ವ್ಯಕ್ತಿಗಳಿಗೆ ಶಿಕ್ಷೆಯಾದಾಗ, ಸುದ್ದಿಯಾಗಿ ಕಾಣುವುದು ಕಡಿಮೆ. ಅಪರಾಧಿಗಳಲ್ಲಿ ಭಯ ಸೃಷ್ಟಿಸಲು ಶಿಕ್ಷೆಯ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು" ಎಂದು ಮೋದಿ ಹೇಳಿದರು.

ಬಾಂಗ್ಲಾ ಹಿಂಸಾಚಾರದ ಬಗ್ಗೆ ಧ್ವನಿಯೆತ್ತಿದ ಪ್ರಧಾನಿ: ಭಾಷಣ ವೇಳೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಕುರಿತು ಮಾತನಾಡಿದ ಪ್ರಧಾನಿ, "ನೆರೆಯ ರಾಷ್ಟ್ರವಾಗಿ, ಬಾಂಗ್ಲಾದೇಶದಲ್ಲಿ ಏನಾಗಿದ್ದರೂ ಅದರ ಬಗ್ಗೆ ಕಾಳಜಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅಲ್ಲಿನ ಪರಿಸ್ಥಿತಿಯು ಶೀಘ್ರವಾಗಿ ಸಹಜವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಭಾರತದ ಜನರು ಕಾಳಜಿ ವಹಿಸುತ್ತಾರೆ. ಪರಿಸ್ಥಿತಿ ತಹಬಂದಿಗೆ ಬಂದು ನೆರೆಯ ದೇಶವು ಅಭಿವೃದ್ಧಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದರು.

"ಭಾರತವು ಯಾವಾಗಲೂ ನಮ್ಮ ನೆರೆಯ ದೇಶಗಳು ಸಮೃದ್ಧಿ ಮತ್ತು ಶಾಂತಿಯ ಹಾದಿಯಲ್ಲಿ ನಡೆಯಬೇಕೆಂದು ಬಯಸುತ್ತದೆ. ನಾವು ಶಾಂತಿಗೆ ಬದ್ಧರಾಗಿದ್ದೇವೆ. ಮುಂಬರುವ ದಿನಗಳಲ್ಲಿ ನಾವು ಬಾಂಗ್ಲಾದೇಶಕ್ಕೆ ಅದರ 'ವಿಕಾಸ್ ಯಾತ್ರೆ'ಯಲ್ಲಿ ಶುಭ ಹಾರೈಸುತ್ತೇವೆ." ಎಂದರು.

ಇದನ್ನೂ ಓದಿ:'ವಿಕಸಿತ ಭಾರತ 2047' ದೇಶದ 140 ಕೋಟಿ ಜನರ ಸಂಕಲ್ಪ: ಪ್ರಧಾನಿ ಮೋದಿ - PM Modi flag hoist at Redfort

ABOUT THE AUTHOR

...view details