ಕರ್ನಾಟಕ

karnataka

ಛತ್ತೀಸ್​ಗಢದಲ್ಲಿ 9 ನಕ್ಸಲೀಯರು ಹತ, ಐವರು ಶರಣಾಗತಿ; ಭಾರೀ ಶಸ್ತ್ರಾಸ್ತ್ರಗಳು ಪೊಲೀಸರ ವಶ - Naxals killed in Chhattisgarh

By ANI

Published : Sep 3, 2024, 3:43 PM IST

ಛತ್ತೀಸ್​ಗಢದಲ್ಲಿ ಸೋಮವಾರ ನಡೆದ ನಕ್ಸಲ್​ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಗೆ ಭಾರಿ ಯಶಸ್ಸು ಲಭಿಸಿದೆ. 9 ಮಂದಿ ಮಾವೋವಾದಿಗಳು ಹತರಾಗಿದ್ದರೆ, ಐವರು ಶರಣಾಗಿದ್ದಾರೆ.

ಛತ್ತೀಸ್​ಗಢದಲ್ಲಿ 9 ನಕ್ಸಲೀಯರು ಹತ
ಛತ್ತೀಸ್​ಗಢದಲ್ಲಿ 9 ನಕ್ಸಲೀಯರು ಹತ (ANI)

ದಾಂತೇವಾಡ (ಛತ್ತೀಸ್‌ಗಢ):2026 ರೊಳಗೆ ದೇಶದಿಂದ ನಕ್ಸಲ್​​ವಾದವನ್ನು ಸಂಪೂರ್ಣವಾಗಿ ಕಿತ್ತೊಗೆಯಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಹೇಳಿದ ಬೆನ್ನಲ್ಲೇ, ಛತ್ತೀಸ್​ಗಢದಲ್ಲಿ ಇಂದು (ಮಂಗಳವಾರ) 9 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಇನ್ನಷ್ಟು ನಕ್ಸಲರು ಅಡಗಿರುವ ಶಂಕೆ ಇದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಇಲ್ಲಿನ ದಾಂತೇವಾಡ-ಬಿಜಾಪುರ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್​​ನಲ್ಲಿ ನಕ್ಸಲರು ಹತರಾಗಿದ್ದಾರೆ. ಘಟನಾ ಸ್ಥಳದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲ್​​ ನಿಗ್ರಹ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮುಂಜಾನೆ ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂದು ಮಾಹಿತಿ ಸಿಕ್ಕಿತ್ತು. ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಗಡಿ ಭದ್ರತಾ ಪಡೆಗಳ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಬೆಳಗ್ಗೆ 10:30ಕ್ಕೆ ಪೊಲೀಸ್ ಪಡೆಗಳು ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ಆರಂಭವಾಗಿತ್ತು. ಈ ವೇಳೆ, ಭದ್ರತಾ ಪಡೆಗಳ ಗುಂಡೇಟಿಗೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಘಟನಾ ಸ್ಥಳದಿಂದ 303 ಮಾದರಿಯ ರೈಫಲ್ ಮತ್ತು 315 ಬೋರ್ ಗನ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ನಕ್ಸಲರು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮಧ್ಯೆ, ಆಗಸ್ಟ್ 29 ರಂದು ನಾರಾಯಣಪುರದ ಅಬುಜ್ಮದ್‌ನ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲೀಯರು ಹತ್ಯೆಯಾಗಿದ್ದರು.

ನಕ್ಸಲೀಯರ ಶರಣಾಗತಿ:ಜಿಲ್ಲೆಯಲ್ಲಿ ಇನ್ನೊಂದೆಡೆ ನಡೆದ ನಕ್ಸಲ್​ ನಿಗ್ರಹ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ ಇಬ್ಬರ ತಲೆಗೆ ತಲಾ ₹1 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಶಸ್ತ್ರಾಸ್ತ್ರ ತ್ಯಜಿಸಿದವರಲ್ಲಿ ಪೋಡಿಯಂ ಬುಧ್ರಿ ಎಂಬ ಓರ್ವ ಮಹಿಳೆಯೂ ಇದ್ದಾರೆ. ಈಕೆಯೊಂದಿಗೆ ಮಲ್ಲಂ ದೇವ ಮತ್ತು ಕರಟಮ್ ಹಿದ್ಮಾ ಸೇರಿದಂತೆ ಒಟ್ಟು ಐವರು ರಕ್ತಪಾತದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ಹೇಳಿದ್ದೇನು?:ನಕ್ಸಲ್​ವಾದವನ್ನು ಬೇರು ಸಮೇತ ಕಿತ್ತೆಸೆಯಲು ಕೇಂದ್ರ ಸರ್ಕಾರ ಅವಿರತವಾಗಿ ಶ್ರಮಿಸಿದೆ. 2026 ರ ಮಾರ್ಚ್​ ವೇಳೆಗೆ ಎಡಪಂಥೀಯ ಉಗ್ರವಾದ ದೇಶದಿಂದ ಸಂಪೂರ್ಣವಾಗಿ ಮರೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಹೇಳಿದ್ದರು.

ಇದನ್ನೂ ಓದಿ:2026 ರ ವೇಳೆಗೆ ನಕ್ಸಲ್​ವಾದಕ್ಕೆ ತಿಲಾಂಜಲಿ, ಕಾಶ್ಮೀರದಲ್ಲಿ ಏಕಾಂಗಿ ಹೋರಾಟ: ಅಮಿತ್​ ಶಾ - Amit Shah on extremism

ABOUT THE AUTHOR

...view details